ಇದೊಂದು ಕಾವ್ಯ ಪುರಾಣ–ಯಶವಂತ ಚಿತ್ತಾಲ,

[ದೇವನೂರರ ‘ಕುಸುಮಬಾಲೆ’ ಕಾದಂಬರಿ ಕುರಿತು ಯಶವಂತ ಚಿತ್ತಾಲರು  10.5.88ರಂದು ಬರೆದ ಪತ್ರ ನಮ್ಮ ಮರು ಓದಿಗಾಗಿ… ]

 

Yashwantchittal

 

 

 

 

 

 

 

ಪ್ರೀತಿಯ ಮಹಾದೇವ,
ನಾನು ಉತ್ಸುಕತೆಯಿಂದ ಹಾದಿ ನೋಡುತ್ತಿದ್ದ ನಿಮ್ಮ ಹೊಸಕೃತಿ ‘ಕುಸುಮಬಾಲೆ’ಯನ್ನು ನೋಡಿದೊಡನೆಯೇ ತುಂಬಾ ಖುಷಿಪಟ್ಟೆ. ನಿಮ್ಮ ಕಾದಂಬರಿ ಕೈಗೆ ಬಂದ ಕೂಡಲೇ ನನ್ನ ಉಳಿದೆಲ್ಲಾ ಕೆಲಸಗಳನ್ನು ಬದಿಗಿಟ್ಟು ಓದಲು ಹಿಡಿದೆ. ಮೂರು ದಿನಗಳ ನಂತರ ನನ್ನ ಬಾಯಿಂದ ಹೊರಟ ಉದ್ಗಾರ-ಅದ್ಭುತ!. ನಿಜಕ್ಕೂ ಅದ್ಭುತವಾದುದನ್ನು ಸಾಧಿಸಿದ್ದೀರಿ. ಮಹಾದೇವ, ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದೊಂದು ಚಿಕ್ಕ ಕಾವ್ಯ-ಪುರಾಣ, ‘ಎ ಪೊಯೆಟಿಕ್ ಮಿಥ್!’ ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೊಸತು. ಸಮಕಾಲೀನ ಅನುಭವ ದ್ರವ್ಯವನ್ನು ಒಳಗೊಂಡಿದ್ದೂ ಇದು ಧ್ವನಿಸುವ ಸತ್ಯ ಸಾರ್ವಕಾಲಿಕವಾದದ್ದು. ಇದೊಂದು ಪುರಾಣ[ಮಿಥ್] ಆಗಿರುವುದರಿಂದಲೇ ತನ್ನೆಲ್ಲಾ ಅರ್ಥವನ್ನು ಒಂದೇ ಓದಿಗೆ ಬಿಟ್ಟುಕೊಡುವಂಥದ್ದಲ್ಲವೇನೋ!

ಪುರಾಣದ ಗರ್ಭದಲ್ಲೇ ಹುದುಗಿದ ಎರಡು, ಒಂದಕ್ಕೊಂದು ವಿರುದ್ಧವಾದ ಶಕ್ತಿಗಳು ಅದರ ಆಕೃತಿಯನ್ನು ನಿರ್ಧರಿಸುವಲ್ಲಿ ಕೆಲಸ ಮಾಡಿದಂತಿವೆ: ಒಂದು, ಹೆಣ್ಣಿನ ಧಾರಣಶಕ್ತಿಯನ್ನು ಕುರಿತ ಅಚಲವಾದ ವಿನ್ಯಾಸ, ಜೀವನವನ್ನು ಪೋಷಿಸುವ, ಹಸನುಗೊಳಿಸುವ ಶಕ್ತಿ ಹಾಗೂ ಜಾಣ್ಮೆ ಹೆಣ್ಣಿಗಷ್ಟೇ ಇವೆ ಎಂಬ ನಂಬಿಕೆ, ಕಂದನನ್ನು ಬದುಕಿಸಲು ವಿಧಿಯೊಡನೆ ಸೆಣಸಾಡುವ ತೂರಮ್ಮ ನವೆಯುತ್ತಿದ್ದ ಕಂದನನ್ನು ಉಳಿಸಿಕೊಳ್ಳಲು ಹೆಣಗಾಡುವ ಈರಿ ಇದಕ್ಕೆ ನಿದರ್ಶನವಾಗುತ್ತಾರೆ.

ಇನ್ನೊಂದು- ವಿಧ್ವಂಸಕನಾದ ಗಂಡಿನ ಮೌಢ್ಯವನ್ನು ಕುರಿತು ನಿಗ್ರಹಿಸಲ್ಪಟ್ಟ ಕ್ರೋಧ, ಜೊತೆಗೆ ವಿಷಾದ, ಸೃಷ್ಟಿಶೀಲಳಾದ ಹೆಣ್ಣು ಅದೇ ಕಣ್ಣುಬಿಟ್ಟ ಕಂದನನ್ನು ಬದುಕಿಸುವ, ಉಳಿಸಿಕೊಳ್ಳುವ ಕ್ರಿಯೆಯಲ್ಲಿ ತೊಡಗಿರುವಾಗಲೇ ಮೂರ್ಖನೂ, ಕ್ರೂರನೂ ಆದ ಗಂಡು ಚನ್ನನಂಥ ತರುಣನ ಜೀವವನ್ನೇ ಕೊಲೆ ಮಾಡಿದ್ದಾನೆ. ಕೊನೆಗೆ ಅವನು ಹುಟ್ಟಿಸಿದ್ದೇನು?- ಕೊಲೆಯಾದ ಚನ್ನನ ಬಗೆಗಿನ ಅತ್ಯದ್ಭುತವಾದ ದಂತಕತೆ! ಮನುಷ್ಯ ಮನುಷ್ಯರ ನಡುವೆ ಹುಟ್ಟಿಕೊಳ್ಳಬಲ್ಲ ಎಲ್ಲ ಸಂಕುಚಿತ ಗಡಿಗಳನ್ನು ದಾಟಿದ ಒಂದು ನೆಲೆಯಲ್ಲಿ, ಮನುಷ್ಯ ಬದುಕಿಗೆ ಮೂಲಭೂತವೆನ್ನಿಸುವಷ್ಟು ಹದವಾದ ನೆಲಗಟ್ಟಿನ ಮೇಲೆ ಈ ಕೃತಿ ಹಂದರ ಕಟ್ಟಿದೆಯೆನ್ನುವುದು ನನಗೆ ವೈಯಕ್ತಿಕವಾಗಿ ಸಂತೋಷ ಕೊಟ್ಟ ಸಂಗತಿಯಾಗಿದೆ-ಇನ್ನೊಂದು ಸಂತೋಷಕೊಟ್ಟ ಸಂಗತಿ, ಪುಸ್ತಕ ರೂಪದಲ್ಲಿ ಓದಿದಾಗ ಭಾಷೆ ತೊಡಕಾಗದೇ ತನ್ನೆಲ್ಲ ಕಾವ್ಯ ಶಕ್ತಿಯನ್ನು ಪ್ರಕಟಿಸಿತು ಎನ್ನುವುದು.

ಪ್ರೀತಿಯಿಂದ,

-ಯಶವಂತ ಚಿತ್ತಾಲ, ಮುಂಬಯಿ