ಇದು ನಿಜಕ್ಕೂ ಪ್ರಕೃತಿ ಪವಾಡ ಬೇಸಾಯ – ದೇವನೂರ ಮಹಾದೇವ

(ಸುಭಾಷ್ ಪಾಳೇಕರರ `ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ’ ಕುರಿತು ಸ್ವಾಮಿ ಆನಂದ್ ಬರೆದಿರುವ ಕೃತಿಗೆ ದೇವನೂರ ಮಹಾದೇವ ಅವರು ಬರೆದಿರುವ ಮುನ್ನುಡಿ ನಮ್ಮ ಮರು ಓದಿಗಾಗಿ…)
ಮೊನ್ನೆ ಕುವೆಂಪುನಗರದ ಸರ್ಕಲ್ ಬಳಿ ಹೋದಾಗ ಅಲ್ಲಿ ನೂರಾರು ಜನ ನಿಂತಿದ್ರು. ಅವರೆಲ್ಲ ಹಳ್ಳಿಗಳಿಂದ ಕೂಲಿಗಾಗಿ ಧಾವಿಸಿ ಬಂದವರು. ಅವ್ರ ಕಣ್ಣಲ್ಲಿ ಕಣ್ಣಿಟ್ಟು ನೋಡೊ ಧೈರ್ಯ ನನಗೆ ಬರಲಿಲ್ಲ. ಈ ಮಾತನ್ನು ಯಾಕೆ ಹೇಳ್ತಾ ಇದೀನಿ ಅಂದ್ರೆ- ವೆಸ್ಟ್ ಇಂಡೀಸ್‌ನಲ್ಲಿ ಭಾರತೀಯರನ್ನು ಕೂಲಿಗಳು ಅಂತ ಕರೆಯುತ್ತಿದ್ದರು. ಇದು ಇಲ್ಲಿ ಇದೇ ರೀತಿ ಮುಂದುವರಿದರೆ ಹಳ್ಳಿಗರನ್ನು ಹಳ್ಳಿಗರೆಂದಲ್ಲ `ಕೂಲಿಗಳು’ ಎಂದು ಕರೆಯುವ ದಿನ ಬಹಳ ದೂರವಿಲ್ಲ. ಇದು ನನಗೆ ಬಹಳ ಯಾತನೆ ಆಗಿ ಕಾಣಿಸ್ತಾ ಇದೆ. ಇಂದು ಬದಲಾವಣೆಯ ವೇಗ ಜಾಸ್ತಿ ಆಗ್ತಾ ಇದೆ. ಹಿಂದೆ ಒಂದು ಬದಲಾವಣೆಗೆ ಹತ್ತು ವರ್ಷ ತೆಗೆದುಕೊಂಡರೆ, ಈಗ ಅದೇ ಬದಲಾವಣೆಗೆ ಒಂದು ವರ್ಷ ಮಾತ್ರ ಸಾಕು. ಇದು ನನ್ನ ಆತಂಕಕ್ಕೆ, ಯಾತನೆಗೆ ಕಾರಣ.
ಇಷ್ಟು ಹೊತ್ತಿಗಾಗ್ಲೇನೆ ಹಳ್ಳಿಗಳು ದಿವಾಳಿಯೆದ್ದು ಹೋಗಬೇಕಿತ್ತು. ಆದ್ರೆ ಗ್ರಾಮೀಣ ಭಾರತದ ಮಹಿಳೆಯರು ಹಳ್ಳಿಗಳ ನೊಗ ಹೊತ್ತು ನಿಂತ ಪರಿಣಾಮ ಹಳ್ಳಿಗಳು ಉಳಿದುಕೊಂಡಿವೆ. ಮಹಿಳೆಯರು ಸಂಘ ಸಂಸ್ಥೆ ಮಾಡ್ಕೊಂಡು, ಸಣ್ಣ ಪುಟ್ಟ ರಚನಾತ್ಮಕ ಕೆಲಸಗಳನ್ನು ಮಾಡ್ಕೊಂಡು, ಪರಸ್ಪರ ಆರ್ಥಿಕ ಸಹಕಾರ ಮಾಡ್ಕೊಂಡು ಹಳ್ಳಿಗಳ ಮಾನ ಉಳಿಸಿದ್ರು. ಹಳ್ಳಿಗಳ ಗಂಡಸರ ಮಾನ ಕೂಡಾ ಕಾಪಾಡಿದ್ರು. ಇಲ್ದೆ ಹೋಗಿದ್ರೆ ಇಷ್ಟೊತ್ತಿಗೆ ಹಳ್ಳಿಗಳು ಪಾಪರ್ ಆಗುತ್ತಿದ್ದವೇನೋ. ಇವತ್ತು 7೦ ಭಾಗ ಭಾರತ, ಅಂದ್ರೆ ಗ್ರಾಮೀಣ ಭಾರತ ಮಲಗಿದೆ. ಇದನ್ನು ಬಡಿದು ಎಬ್ಬಿಸಬೇಕಾಗಿದೆ. ಈ ಚಾವುಟಿ ಏಟು ಕೊಡುವಂಥ ಕೆಲಸವನ್ನು ಹಳ್ಳಿಗಳಲ್ಲಿ ರಚನಾತ್ಮಕ ಕೆಲಸ ಮಾಡ್ತಿರೊ ಮಹಿಳಾ ಸಂಸ್ಥೆಗಳೇ ಮಾಡಿ ಕಾಪಾಡಬೇಕಾಗಿದೆ. ಇಲ್ಲದಿದ್ದರೆ ದಾರಿ ಇಲ್ಲ.
ಇವತ್ತು ವ್ಯವಸಾಯ ತುಂಬಾ ನಷ್ಟದ ವ್ಯವಹಾರ ಆಗಿದೆ. ಇಂದು ಇಡೀ ಹಳ್ಳಿಗೆ ಹಳ್ಳೀನೆ ತನಗೆ ತಾನೆ ನೇಣು ಹಾಕಿಕೊಕೊಳ್ಳೋಕೆ ಯಾವ ಪರಿಸ್ಥಿತಿ ಇರಬೇಕೋ ಆ ಪರಿಸ್ಥಿತಿ ಇದೆ. ಆದರೆ ಪ್ರಕೃತಿ ಯಾವ ಯಾವ ರೂಪದಲ್ಲಿ ಕಾಪಾಡುತ್ತೋ ಹೇಳಕ್ಕಾಗಲ್ಲ. ಇದೀಗ ಆ ಕಾಪಾಡುವ ಪ್ರಕೃತಿ ಪಾಳೇಕರ ರೂಪದಲ್ಲಿ ಕಾಣಿಸಿಕೊಂಡಿದೆ.
ಪಾಳೇಕರ ಈ ನೈಸರ್ಗಿಕ ಕೃಷಿಯನ್ನು ಯಾವ ರೀತಿಯಲ್ಲಿ ಯಾವ ಮಾತುಗಳಲ್ಲಿ ಅರ್ಥೈಸಿ ಹೇಳಬೇಕೋ ತಿಳಿಯುತ್ತಿಲ್ಲ. ಇದನ್ನು ಪವಾಡ ಅನ್ನಬೇಕೊ ಅಥವಾ ವರ ಅನ್ನಬೇಕೋ ನನಗೆ ಅರ್ಥ ಆಗ್ತಾ ಇಲ್ಲ. ಯಾಕೆಂದರೆ ನಿನ್ನೆ ತಾನೆ ಬನ್ನೂರು ಕೃಷ್ಣಪ್ಪನವರ ತೋಟ ನೋಡಲು ಹೋಗಿದ್ದೆ. ಅಲ್ಲಿ ಬಾಳೆಯ ಎರಡನೆಯ ಕೊಳೆ ಬೆಳೆ ನೋಡ್ದೆ. ರಾಸಾಯನಿಕ ಗೊಬ್ಬರ ಅಲ್ಲಿಗೆ ಸೋಕಿಸಿಲ್ಲ. ಎರೆಗೊಬ್ಬರ, ತಿಪ್ಪೆ ಗೊಬ್ಬರವನ್ನೂ ಅಲ್ಲಿಗೆ ಹಾಕೊಲ್ಲ. ಕ್ರಿಮಿನಾಶಕ, ಕೊಳೆನಾಶಕ ಬಳಸಿಲ್ಲ. ಮಿಗಿಲಾಗಿ ನೀರಿನ ಬಳಕೆ- ನಾವು ಸಾಮಾನ್ಯವಾಗಿ ಬಾಳೆ ಬೆಳೆಯಲು ಬಳಸುತ್ತೀವಲ್ಲ, ಅದರ ಹತ್ತನೇ ಒಂದು ಭಾಗ ಮಾತ್ರ ಬಳಸಿರೋದು, ಆದರೆ ಫಸಲು ಎಷ್ಟಿತ್ತೆಂದರೆ ಸರಾಸರಿ ಕನಿಷ್ಠ ಹದಿನೈದು ಕೆಜಿ ಮತ್ತು ಅಪರೂಪದ ಗೊನೆಗಳು ಮೂವತ್ತು ಕೆಜಿ ನಲವತ್ತು ಕೆಜಿಯ ಗೊನೆಗಳೆಲ್ಲ ಇದ್ವು. ಈ ಪವಾಡ ಹೇಗಾಯ್ತು ?
ಈ ಪವಾಡ ಸಂಭವಿಸಲು ಕಾರಣವೇನು ಅನ್ನುವುದರ ಕುರಿತು ಈ ಕೃತಿ ಹೇಳುತ್ತ ಹೋಗುತ್ತದೆ. ನಾನಿದರ ನಾಡಿ ಹಿಸಿದು ಹೇಳುವುದಿಷ್ಟೆ. ಸಗಣಿ ಬಿದ್ದಿರೋ ಜಾಗವನ್ನು ತಾವು ನೋಡಿರಬಹುದು. ಒಂದು ದಿನ ಬಿಟ್ಟು ಸಗಣಿಯನ್ನು ಪಕ್ಕಕ್ಕೆ ಸರಿಸಿ ನೋಡಿ. ಆ ಜಾಗದಲ್ಲಿ ಸಣ್ಣ-ಸಣ್ಣ ತೂತುಗಳು ಕಾಣಿಸುತ್ತವೆ. ಅಂದ್ರೆ ಅಲ್ಲಿ ಭೂಮಿಯ ಅಂತರಂಗಕ್ಕೂ ಭೂಮಿಯ ಬಹಿರಂಗಕ್ಕೂ ನಡುವೆ ದಾರಿಗಳು ಉಂಟಾಗಿರ್ತವೆ. ಇಷ್ಟು ಮಾಡಿದ್ರೆ ಆ ದಾರಿಯಲ್ಲಿ ಗಿಡಕ್ಕೆ ಬೇಕಾದ ರಂಜಕ ಸಿಗುತ್ತೆ ಪೋಟಾಷ್ ಸಿಗುತ್ತೆ.
ನಾವು ರಾಸಾಯನಿಕ ಬಳಸಿ ಬಳಸಿ ಭೂಮಿ ಕಣ್ಣು ಮುಚ್ಚಿಕೊಂಡಿದೆ. ನಮ್ಮ ರೈತ ಕೂಡಾ ಕಣ್ಣು ಮುಚ್ಚಿಕೊಂಡಿದ್ದಾನೆ. ಅವನ ಕಣ್ಣು ತರೆಸುವ ಕೆಲಸ ಈ ಮೂಲಕ ಆಗಬೆಕು. ರೈತನ ಕಣ್ಣು ಮತ್ತು ಭೂಮಿಯ ಕಣ್ಣು ಎರಡನ್ನೂ ತರೆಯುವ ಕೆಲಸ ಆದರೆ ಈ ಪವಾಡ ಸಂಭವಿಸುತ್ತೆ. ಈ ಕೃಷಿ ವಿಧಾನದ ವರ ಯಾವುದಪ್ಪ ಅಂದರೆ . . . . . ಅರ್ಧ ಎಕರೆಯಲ್ಲಿ, ಒಂದ್ ಎಕರೆ ಬೇಸಾಯ ಮಾಡಿದರೆ ಸಾಕು-ರೈತ ಅತ್ಯಂತ ಗೌರವಯುತವಾಗಿ, ಸ್ವಾವಲಂಬಿಯಾಗಿ ಬದುಕನ್ನು ನಿರ್ವಹಿಸಬಹುದು. ಇದು ಬೆಲೆ ಕಟ್ಟಲಾಗದಂಥ ಸಂಗತಿ.
ಈ ಹಿನ್ನೆಲೆಯಲ್ಲೆ ನಾವು ಪಾಳೆಕರರ ಕೃಷಿಯನ್ನು ನಮ್ಮ ಮುಖ್ಯ ಕಾರ್ಯಕ್ರಮವನ್ನಾಗಿ ಸ್ವೀಕರಿಸಿದ್ದೇವೆ. ಈ ವಿಷಯವಾಗಿ ನನ್ನಲ್ಲಿ ಅಪಾರವಾದ ಧನ್ಯತಾಭಾವ ಇದೆ. ಇನ್ಮುಂದೆ ನಾನು ಈ ಕೃಷಿಯನ್ನು ಕೇವಲ ನೈಸರ್ಗಿಕ ಕೃಷಿ ಎನ್ನೋದಿಲ್ಲ. ಬದಲಾಗಿ `ಪಾಳೆಕರ್ ಪ್ರಕೃತಿ ಪವಾಡ ಬೇಸಾಯ? ಅಂತ ಕರೆಯೋದಿಕ್ಕೆ ಇಷ್ಟ ಪಡ್ತೀನಿ. ಯಾಕಂದ್ರೆ ಪವಾಡಾನೆ ಆಗಿದೆ ಇದು. ದಯವಿಟ್ಟು ತಾವು ಈ ಕೃಷಿಯ ಬೆರಗನ್ನು ನೋಡಬೇಕು. ಮಾಧ್ಯಮದವರು ದಯವಿಟ್ಟು ಇದನ್ನು ಪ್ರಚಾರ ಮಾಡಬೇಕು. ಈ ಸಾರ್ಥಕವಾದ ಕೆಲಸದಲ್ಲಿ ತಾವೂ ಒಂದಾಗಬೇಕು. ನಾವೀಗ ಪ್ರತಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಹತ್ತು ಜನರ ಸಮಿತಿ ಮಾಡಿ- ಕೃಷಿ ಬಗೆಗೆ ತಿಳಿಸಿ- ರಚನಾತ್ಮಕ ಕೆಲಸದಲ್ಲಿ ತೊಡಗುವಂತೆ ಪ್ರೆರೇಪಿಸುತ್ತಿದ್ದೇವೆ. ಈ ಹಾದಿಯಲ್ಲಿ ತಾವೆಲ್ಲರೂ ಭಾಗಿಗಳಾಗಬೇಕೆಂದು ನಾನು ಕೋರುತ್ತೇನೆ.
ಎಲ್ಲರಿಗೂ ಗೊತ್ತು ಬೇಸಾಯದ ಕುರಿತು ಒಂದು ಗಾದೆ ಇದೆ. ಬೇಸಾಯ ಅಂದ್ರೆ `ನಾಸಾಯ, ನೀಸಾಯ, ಮನೆಮಂದಿಯೆಲ್ಲ ಸಾಯ? ಅಂತ. ಈ ಗಾದೆನ ಈ ನೈಸರ್ಗಿಕ ಕೃಷಿ ಸುಳ್ಳು ಮಾಡುತ್ತೆ ಅನ್ನೋ ನಂಬಿಕೆ ನನಗಿದೆ. ನಾವಿದನ್ನ ವ್ಯಾಪಕಗೊಳಿಸಿದ್ರೆ ಸಾಯುವವನು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವವನು ರೈತ ಅಲ್ಲ. ಬದಲಿಗೆ ಇಲ್ಲಿ ರಸಗೊಬ್ಬರ ಆತ್ಮಹತ್ಯೆ ಮಾಡಿಕೊಳ್ಳುತ್ತೆ, ಕ್ರಿಮಿನಾಶಕಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಸಾವಯವ ಗೊಬ್ಬರಗಳು, ಹೈಬ್ರಿಡ್ ಬೀಜಗಳು, ಸಾಲಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತವೆ.
ಸದ್ದಿಲ್ಲದ ಕ್ರಾಂತಿ ಇದು. ಈ ಕ್ರಾಂತಿಯಿಂದ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕಗಳ ಬಹುರಾಷ್ಟ್ರೀಯ ಕಂಪನಿಗಳು ತಂತಾನೆ ನಾಶವಾಗುತ್ತವೆ. ಈ ಸ್ಥಳೀಯತೆ ಎಲ್ಲಕ್ಕೂ ಉತ್ತರ ಆಗುತ್ತೆ. ಇದಕ್ಕೆ ಕಾರಣರಾದ ಸುಭಾಷ್ ಪಾಳೇಕರರ ದಾರ್ಶನಿಕತೆಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುವೆ.
ಜೊತೆಗೆ ನನ್ನ ಕೃತಜ್ಞತೆಗಳು ಸ್ವಾಮಿ ಆನಂದ್‌ಗೂ ಸಲ್ಲುತ್ತವೆ. ಒಂದು ದಿನ ಫೋನ್ ಮಾಡಿದ ಆನಂದ್ `ಅಯ್ಯೊಯ್ಯೊ! ನಿಮ್ಮ ಸಮಸ್ಯೆಗಳೆಲ್ಲ ಬಗೆಹರಿಯಿತು ಸಾರ್? ಅಂದರು. ನನಗೆ ಗಾಬರಿ ಆಯಿತು. ಏನು ಸಮಾಚಾರ ಎಂದು ಕೇಳಿದೆ. ಅವರಿಂದ ನೇರ ಉತ್ತರ ಬರಲಿಲ್ಲ. ಬದಲಾಗಿ ನಿಮ್ಮ ಭೂಮಿಯಲ್ಲಿ ಈಗ ಚಿನ್ನ ಬೆಳೆಯಬಹುದು ಎಂದರು.
“ಅಯ್ಯೋ ಭೂಮೀನ ನೀವೇ ತಕ್ಕೊಂಡು ಸ್ವಲ್ಪ ಚಿನ್ನ ಕೊಡಿ” ಅಂದೆ.
ನನ್ನ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಆನಂದ್ ಸಂಭ್ರಮದಿಂದ ಪಾಳೇಕರ್‌ರವರ ಸೈಸರ್ಗಿಕ ಕೃಷಿ ವಿವರಿಸಿದರು. ಹಾಗೂ ಬನ್ನೂರು ಕೃಷ್ಣಪ್ಪನವರ ತೋಟವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು. ಆನಂದ್ ಎಷ್ಟೇ ಹೇಳಿದರೂ ಒಂದು ಅನುಮಾನ ಇದ್ದೇ ಇತ್ತು. ಆದರೆ ಯಾವಾಗ ಬನ್ನೂರು ಕೃಷ್ಣಪ್ಪನವರ ತೋಟ ನೋಡಿದೆನೋ ನನಗೂ ಆನಂದ್ ತರನೇ ಆಯಿತು.
ಆ ಗಳಿಗೆಯಿಂದಲೂ ಆನಂದ್‌ ರವರನ್ನು ನೋಡುತ್ತಿದ್ದೇನೆ. ದೇವರನ್ನು ಪ್ರತ್ಯಕ್ಷ ಮಾಡಿಕೊಳ್ಳುವ ಸಾಧಕನ ತುರ್ತಿನಲ್ಲಿ ಅನಂದ್ ನೈಸರ್ಗಿಕ ಕೃಷಿಗೆ ತಹತಹಿಸಿದ್ದಾರೆ. ಅವರ ನಿದ್ರೆಯಲ್ಲೂ ಪಾಳೇಕರ್ ಕೃಷಿ ತುಂಬಿರುವಂತಿದ್ದಾರೆ. ಈ ತಮ್ಮ ಸ್ಥಿತಿಯನ್ನು ಈಗ ಕೃತಿಯ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ.
ಕೃತಿಯಲ್ಲಿ ನೈಸರ್ಗಿಕ ಕೃಷಿಯ ಪ್ರಾಮುಖ್ಯತೆ ಜೊತೆಗೆ ಅದರ ಡೈನಮಿಸಂಅನ್ನು ಮನದಟ್ಟು ಮಾಡಿಸಲು ಪ್ರಯತ್ನಿಸಿದ್ದಾರೆ. ಈ ಕೃತಿಯನ್ನು ನಾಡಿನ ಉದ್ದಗಲಕ್ಕೂ ತಲುಪುವಂತೆ ಮಾಡಿದರೆ ನಮ್ಮ ರೈತಾಪಿ ಬದುಕು ಉಸಿರಾಡುತ್ತದೆ. ಇದಕ್ಕೆ ಕಾರಣಕರ್ತರಾಗಿರುವ ಸ್ವಾಮಿ ಆನಂದ್‌ರವರಿಗೂ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುವೆ.