ಸಾಂಘಿಕ ಕ್ರೌರ್ಯ ದೇಶವಾಳುತ್ತಿದೆ  – ಪಂಡಿತ ರಾಜೀವ ತಾರಾನಾಥ 

[ನಿರೂಪಣೆ: ಸುಮಂಗಲಾ   | ಪ್ರಜಾವಾಣಿ | 11- 09- 2018 ]
                           
ಅರ್ಬನ್ ನಕ್ಸಲರು– ಇದೊಂದು ಕಾರಣವೋ? ನೆಪವೋ? ಕೋರ್ಟು ಕೇಳಿತು– ‘ನೀವು ಯಾವ ಕಾರಣಕ್ಕೆ ಬಂಧಿಸಿದಿರಿ’ ಅಂತ. ಕಾರಣವೇ ಇರಲಿಲ್ಲ. ಜೈಲಿಗೆ ಹಾಕಬೇಡಿ, ಮನೇ ಒಳಗಿಡಿ ಅಂತ ಕೋರ್ಟು ಹೇಳಿತು. ನಮ್ಮಲ್ಲಿ ಇಲ್ಲಿಯವರೆಗೆ ನ್ಯಾಯಸಂಸ್ಥೆಗಳು ಸಂಪೂರ್ಣ ಕೊಳೆಯಾಗಿಲ್ಲ ಅನ್ನೋದೆ ಸಮಾಧಾನ. ತಮ್ಮ ವಿವೇಚನೆಯನ್ನು ಉಪಯೋಗಿಸ್ತವೆ. ಈಗ ಆಗಿರೋದು, ಈ ಜನರ ದಸ್ತಗಿರಿ, ಬಂಧನ ನೋಡಿ ನಂಗೆ ಆಶ್ಚರ್ಯವೇನೂ ಆಗಿಲ್ಲ. ಈಗ ದೇಶವನ್ನೇ ಆಳ್ತಾ ಇರೋದು ತರಹೇವಾರಿ ದ್ವೇಷ. ಪ್ರತಿಯೊಂದು ಮಟ್ಟದಲ್ಲಿಯೂ ದ್ವೇಷ, ಕ್ರೌರ್ಯ. ಸಾಂಘಿಕ ಕ್ರೌರ್ಯ.
ಬಹಳ ಭೀಕರವಾದ ಒಂದು ಸರಳೀಕರಣವು ವೈಚಾರಿಕತೆಯ ಯಾವುದೇ ಕೇಂದ್ರವನ್ನು, ಕಲೆ, ಪ್ರೀತಿ, ನಾಜೂಕು, ಇಂಪು… ಇವೆಲ್ಲವನ್ನೂ ತೊಡೆದುಹಾಕ್ತಿದೆ. ಹೀಗೆ ನಮ್ಮ ಈ ದುರವಸ್ಥೆಯನ್ನು ನಾವು ಬದುಕುತ್ತಿರುವುದು ಮಾತ್ರವಲ್ಲ, ಅದಕ್ಕೆ ಹಿಗ್ಗುತ್ತಿದ್ದೇವೆ. ಇದು ನಾವು ಇಂದು ಆಸ್ವಾದಿಸುತ್ತಾ ಇರುವ ಸ್ಥಿತಿ. ಒಂದು ನಿರಂತರ ಕೊಳಚೆ. ನಮ್ಮಲ್ಲಿ ಕೆಲವರು ಕೊಳಚೆಯನ್ನು ಬಿಟ್ಟು ಹೊರಬರುವ ಪ್ರಯತ್ನ ಮಾಡತೀವಿ. ದೂರ ಸರೀತೀವಿ, ಇಲ್ಲೇ ಇದ್ದರೆ ಅಪಾಯ ಅಂತ. 1930ರ ದಶಕದಲ್ಲಿ ಜರ್ಮನಿಯು ಮಹಾಯುದ್ಧದ ಗಾಯಗಳಿಂದ ಚೇತರಿಸಿಕೊಂಡು, ಆ ಪ್ರಕ್ರಿಯೆಯಲ್ಲಿ ನಾಝಿಸಂನಂತಹ ಒಂದು ಸರಳ, ಭೀಕರ ಸಿದ್ಧಾಂತದ ಕಡೆಗೆ ವಾಲಿತು. ಅದರಲ್ಲಿಯೇ ಬೆಳೀತು. ಮುಂದೇನಾಯಿತು ಅಂತ ನಾ ಹೇಳಬೇಕಾಗಿಲ್ಲ. ಏಟು ತಿಂದ ಜಗತ್ತು ತಿರುಗಿ ಬಿತ್ತು. ಎರಡನೇ ಮಹಾಯುದ್ಧ ಆಯಿತು. ನಾಝಿ ಪ್ರಕ್ರಿಯೆಗೆ ತಡೆ ಹಾಕಿತೋ ಏನೋ ನಂಗೆ ಗೊತ್ತಿಲ್ಲ, ಯುದ್ಧ ಅಂತೂ ನಿಂತಿತು. ಸಾಂಘಿಕ ಕ್ರೌರ್ಯ ಸ್ವಲ್ಪಮಟ್ಟಿಗೆ ಯುರೋಪ್‍ನಲ್ಲಿ ನಿಂತಿತು. ಅಷ್ಟರಮಟ್ಟಿಗೆ ಹೇಳಬಹುದು. ಇಡೀ ಪ್ರಪಂಚವೇ ಶುದ್ಧ ಆಯಿತು ಅಂತ ಹೇಳಕ್ಕೆ ಆಗುತ್ತಾ? ಇಂತಹ ವಿಚಾರಗಳೆಲ್ಲ ನಮಗೆ ಸ್ವಲ್ಪಮಟ್ಟಿಗೆ ಅನ್ವಯವಾಗುತ್ತವೆ. ನಮ್ಮನ್ನು ನಾವೇ ನೋಡಿಕೊಳ್ಳಬೇಕು. ಇನ್ನೇನು ಹೇಳಲಿ!
ಹಾಗೆ ನೋಡಿದರೆ ಹಿಂದೂ ಧರ್ಮ ಎನ್ನೋದೆ ಇಲ್ಲ. ಅದು ವೇದ ಸಮ್ಮತವೂ ಅಲ್ಲ. ಹಿಂದೂ ಅನ್ನೋದನ್ನು ಧಾರ್ಮಿಕ ಅನ್ನಬಹುದಾದ ರೀತಿಯಲ್ಲಿ ಮೊದಲು ಉಪಯೋಗಿಸಿದವರು, ನಂಗೆ ತಿಳಿದ ಮಟ್ಟಿಗೆ ಇಂಗ್ಲಿಷ್‌ ಭಾಷಿಕರು. ಇದಕ್ಕೆ ಬಹಳ ಬಲವಾದ ನಿದರ್ಶನ ನೋಡಿ; ರಾಮಕೃಷ್ಣ ಪರಮಹಂಸರು ಮಾತಾಡಿದರು, ಪರವಶವಾದರು. ಅವರ ‘ವಚನಾಮೃತ’ ಅಂತ ದೊಡ್ಡ ಪುಸ್ತಕ, ಅದರಲ್ಲಿ ಎಲ್ಲಿಯೂ ಹಿಂದೂ ಶಬ್ದ ಕಾಣೋದಿಲ್ಲ. ಅದೇ ಅವರ ಶಿಷ್ಯ ವಿವೇಕಾನಂದ ಇಂಗ್ಲಿಷ್‌‍ನಲ್ಲಿ ಬರೆದರು. ಅವರ ಬರಹದಲ್ಲಿ ಹಿಂದೂ ಶಬ್ದವನ್ನು ಧಾರ್ಮಿಕ ಅರ್ಥದಲ್ಲಿ ಕಾಣಬಹುದು. ಕಾರಣ ಪರಮಹಂಸರಿಗೆ ಇಂಗ್ಲಿಷ್‌ ಗೊತ್ತಿರಲಿಲ್ಲ, ವಿವೇಕಾನಂದರಿಗೆ ಇಂಗ್ಲಿಷ್‌ ಬರ್ತಿತ್ತು. ಹಿಂದೂ ಪದದ ಧಾರ್ಮಿಕ ಅರ್ಥ, ಮತ್ತೆ ಅದರ ಬೆಳವಣಿಗೆಯನ್ನು ರಾಜಾರಾಂ ಮೋಹನರಾಯ್, ವಿವೇಕಾನಂದ, ತಿಲಕರು, ಸಾವರ್ಕರ್, ಗೊಳ್ವಾಲಕರ್ ಮತ್ತು ಈಗ ನಮ್ಮ ಸಮಕಾಲೀನ ಮುತ್ಸದ್ದಿಗಳಲ್ಲಿ ಕಾಣುತ್ತೀರಿ. ನೀವು ಗಮನಿಸಿದರೆ ಮುಖ್ಯವಾದ ಒಂದು ಅಂಶ ಅಂದ್ರೆ ಆ ಹಿಂದೂ ಶಬ್ದಕ್ಕೆ ಬರ್ತಾ ಬರ್ತಾ ಕ್ರೌರ್ಯ, ದ್ವೇಷ ತುಂಬಲಾಗಿದೆ. ‘ನಾವಲ್ಲ ಅವರು’, ‘ಅವರು ಶತ್ರುಗಳು’, ‘ಶತ್ರುಗಳನ್ನು ತೊಡೆದುಹಾಕಬೇಕು’ ಇಂಥ ವಿಚಾರಗಳು ಬೆಳೆಯುತ್ತ ಬಂದಿವೆ. ಅವುಗಳಲ್ಲಿ ಹುರುಳೇನಿದೆ? ಹುಡುಕಿದರೂ ಸಿಗದು. ಕೇವಲ ನಮ್ಮೊಳಗೆ ಗೊಂದಲ ಹಚ್ಚಿ, ಅದನ್ನು ಬೆಳೆಸುತ್ತ, ಅದನ್ನು ಕ್ರೌರ್ಯದಲ್ಲಿಯೇ ಚೂಪು ಮಾಡೋ ಪ್ರಕ್ರಿಯೆ. ನಮ್ಮಲ್ಲಿ ಅನೇಕರಲ್ಲಿ ಬಹಳ ಸಹಜವಾದ, ನೈಜವಾದ ಪ್ರೀತಿ, ಕರುಣೆ ಇವೆಲ್ಲ ಬತ್ತಿ ಹೋಗಿವೆ. ಮೊನ್ನೆ ಮೊನ್ನೆ ಎಂಟು ವರ್ಷದ ಹುಡುಗಿಯನ್ನು ಒಂದಿಡೀ ವಾರ ಬಹಳ ಕಟುವಾಗಿ ಮಾಸ್ ರೇಪ್, ಅದೂ ಒಂದು ಗುಡಿಯಲ್ಲಿ ಮಾಡಲಾಯಿತು (ಸಾಂಕೇತಿಕವೋ?). ಈ ಘಟನೆ ಬಗ್ಗೆ ನಾನು ಅನೇಕರ ಜೊತೆ ಮಾತಾಡಿದೆ. ಅವರು ಸಹಜವಾದ ದುಃಖ ವ್ಯಕ್ತಪಡಿಸುತ್ತಿದ್ದಾಗಲೇ, ಆ ಹುಡುಗಿಯ ಹೆಸರು ಹೇಳಿದೆ. ಹೆಸರು ಕೇಳಿದ್ದೇ ಅವರು ಕಲ್ಲಾದರು, ನನಗೆ ಏನೂ ತೋಚಲಿಲ್ಲ! ನನ್ನ ಹತ್ತಿರ Mein Kampf (ಲೇಖಕ– ಹಿಟ್ಲರ್) ಇದೆ. ಬಹುಶಃ ಅದನ್ನು ಮತ್ತೆ ಓದಬೇಕೇನೋ!
ನಮ್ಮಲ್ಲಿ ಮೊದಲಿನಿಂದಲೂ ವೈಚಾರಿಕತೆ ಇತ್ತು, ಪುರಾಣ ಕಾಲದಲ್ಲಿ ‘ವಸುಧೈವ ಕುಟುಂಬಕಂ’ ಎಂದೆವು, ಅದೆಲ್ಲ ಸುಳ್ಳು. ವೇದ, ಪುರಾಣ, ಉಪನಿಷದ್ ಇವೆಲ್ಲ ದೊಡ್ಡ ಸಾಧನೆಗಳು ಅನ್ನೋಣ. ಆದರೆ ಅವು ಈ ದೇಶದ ಮುಕ್ಕಾಲಿಗೂ ಹೆಚ್ಚು ಪಾಲು ಜನರಿಗೆ ನಿಷಿದ್ಧವಾಗಿದ್ದವು. ಅನಿ ಬೆಸೆಂಟ್ ಎರಡಾಣೆಗೆ ಸಿಗುವ ಭಗವದ್ಗೀತೆ ಛಾಪಿಸುವವರೆಗೂ ಅದು ಎಲ್ಲರಿಗೂ ಸಿಗ್ತಾ ಇರಲಿಲ್ಲ. ಈ perspectiveನಲ್ಲಿ ಈ ಸಾಧನೆಗಳನ್ನು ಹಾಕಿ ನೋಡಿದರೆ, ಯಾರು ಯಾರಿಗಾಗಿ ಇದನ್ನೆಲ್ಲ ಬರೆದರು, ಪ್ರಕಟ ಮಾಡಿದರು ಅಂತ ಬಹಳ ಖಾರವಾದ ಪ್ರಶ್ನೆ ಏಳುತ್ತೆ. ಅದಕ್ಕೆ ಉತ್ತರವಿಲ್ಲ. ಬ್ರಿಟಿಷರು, ಜರ್ಮನರು ಇಲ್ಲಿ ಬಂದು ಅವನ್ನೆಲ್ಲ ಅಗೆದು ತೆಗೆದು, ಅವರಿಗೂ ಸಿಕ್ಕಿತು, ನಮಗೂ ಸಿಗುವಂತೆ ಮಾಡಿದರು. ಈಗ ಹೇಳಿ, ವಸುಧೈವ ಕುಟುಂಬಕಂ ಎಲ್ಲಿದೆ? ವಸುಧಾ ಯಾರು? ಕುಟುಂಬ ಎಲ್ಲಿ ಮತ್ತು ಯಾರದ್ದು? ಸತ್ಯ ಶೋಧನೆ ಹೆಸರಿನಲ್ಲಿ ನಾವೇ ಮುಚ್ಚುವ ಪ್ರಯತ್ನ ಮಾಡಿದ್ದೀವಿ. ಈಗ ಖಾರ ಪ್ರಶ್ನೆಗಳ ಅಸೌಖ್ಯ ನಮ್ಮನ್ನು ಕಾಡ್ತಾ ಇದೆ. ಅದರಿಂದ ಹೊರಬರದೇ ಅದನ್ನು ಅಲ್ಲೇ ಮುಚ್ಚಿ ಹಾಕುವ ಎಲ್ಲ ರೀತಿಯ ಪ್ರಯತ್ನ ನಡೀತಿದೆ. ಹಸಿವು- ತಂಗಳು, ಅಸ್ಪೃಶ್ಯತೆ- ಮಡಿ, ರೇಪಿಸ್ತಾನ್ ಇವುಗಳನ್ನು ಮುಚ್ಚುವ ಪ್ರಯತ್ನ ನಡೆದು ಹೋಯಿತು ಮತ್ತು ನಡೀತಾ ಇದೆ. ನಾವೀಗ ಕೇಳಬೇಕಾದ ಅಸಲೀ ಪ್ರಶ್ನೆ – ನಾವು ಒಂದು ಅನುಕೂಲಕರವಾದ ಸುಳ್ಳು ಬದುಕನ್ನು ಆರಿಸಿಕೊಂಡಿದ್ದೇವೆಯೇ? ಕಾಲಕ್ಕೆ ಒಂದು ಗುಣ ಇದೆ, ಅದೆಂದರೆ ಅನಿವಾರ್ಯತೆ. ನಾವು ಅದನ್ನು ನೆನಪಿಗೆ ತಂದುಕೊಳ್ಳಬೇಕು, ನೆನಪಿಟ್ಟುಕೊಳ್ಳಬೇಕು ಅಷ್ಟೆ.
ಇನ್ನು ಈ ಫ್ಯಾಸಿಸಂ ವಿಷಾನಿಲವನ್ನು ಕಡಿಮೆ ಮಾಡುವುದು ಹೇಗೆ? ನಂಗೆ ತಿಳಿದ ಮಟ್ಟಿಗೆ ಈಗ ಧಾರ್ಮಿಕ ಪ್ರಜ್ಞೆಯ ಉಗ್ರತಾಂಡವ ನೋಡ್ತಾ ಇದ್ದೀವಿ. ಅದನ್ನು ಹದಗೊಳಿಸಬೇಕು. ಅದಕ್ಕೆ ದಾರಿ ಎಂದರೆ ಶಿಕ್ಷಣ, ಕಲೆ. ಆದರೆ ಈಗ ನಮ್ಮಲ್ಲಿರೋ ಶಿಕ್ಷಣ ಬಹಳಮಟ್ಟಿಗೆ ತರಬೇತಿ, ಟ್ರೇನಿಂಗ್. ಒಮ್ಮೆ ಅಮೆರಿಕದಲ್ಲಿ ನನ್ನ ಸಹದೇಶೀಯನೊಬ್ಬ, ಅಂದರೆ ನಮ್ಮ ಕಡೆಯ ಪ್ರೊಫೆಸರ್ ಒಬ್ಬ ಕಛೇರಿಗೆ ಮೊದಲು ನನ್ನನ್ನು ಜನರಿಗೆ ಪರಿಚಯಿಸುತ್ತಾ ಹೇಳಿದ್ದೇನಪಾ ಅಂದ್ರೆ, ‘ಇವ್ರು ಸರೋದ್ ನುಡಿಸ್ತಾರೆ. ನಾನು ಕಂಪ್ಯೂಟರ್ ತಜ್ಞ, ನಂಗೆ ಇವ್ರ ಸರೋದ್ ಏನೂ ಗೊತ್ತಿಲ್ಲ. ಆದರೆ ನಂಗೆ ಗೊತ್ತಿರೋದು ಅಂದರೆ ಇವ್ರಿಗೆ ಇಂಗ್ಲಿಷ್‌ ಚೆನ್ನಾಗಿ ಬರುತ್ತೆ, ನೀವು ಇವ್ರ ಜೊತೆ ಇಂಗ್ಲಿಷ್‌‍ನಲ್ಲಿ ಮಾತಾಡಬಹುದು’ ಅಂತ ತಾನೇ ಹಿಗ್ಗುತ್ತ ಹೇಳಿದ. ಅವರು ನನ್ನ ಇಂಗ್ಲಿಷ್‌ ಕೇಳಲಿಕ್ಕೆ ಟಕೆಟ್ ತಗೊಂಡು ಬಂದಿದ್ದರಾ ಅಥವಾ ನನ್ನ ಸರೋದ್ ಕೇಳಲಿಕ್ಕೆ ಬಂದಿದ್ದರಾ? ಇದಕ್ಕೆ ಪ್ರತಿಯಾಗಿ ಅಲ್ಲಿಯ ಪ್ರೊಫೆಸರ್‌ಗಳನ್ನು ನೋಡಬೇಕು ನೀವು. ಅವರು ತಾವು ನುರಿತಿರುವ ಪಾಠ, ಬೇರೆ ವಿಚಾರಗಳು, ಬೇರೆ ದಿಕ್ಕು, ಬೇರೆ ಸಂಸ್ಕೃತಿಗಳು ಎಲ್ಲದರ ಬಗ್ಗೆ ಒಂದು ರುಚಿ ಬೆಳೆಸಿಕೊಂಡಿರ್ತಾರೆ. ಅದರಿಂದ ಅವರಲ್ಲಿ ವಿದ್ಯೆ ಎನ್ನೋದು ಎಲ್ಲ ರೀತಿಯಲ್ಲಿ ಹೊಮ್ಮುತ್ತಿರುತ್ತೆ. ಅವರುಗಳ ವ್ಯಕ್ತಿತ್ವವೇ ಏಕತಾನತೆಯಿಂದ ಹೊರಗಿದ್ದು ಬೆಳೆಯುವ ಅವಕಾಶ ಹುಡುಕ್ತಾ ಇರುತ್ತೆ. ‌‌
1960ರಿಂದ ಯುರೋಪಿಯನ್ ನಗರಗಳಲ್ಲಿ, ಅಮೆರಿಕದ ಕ್ಯಾಲಿಫೊರ್ನಿಯಾದಲ್ಲಿ ನಮ್ಮ ಸಂಗೀತದ ಕುರಿತು ಆಸ್ಥೆ ಬೆಳೆಯಿತು. ಅದು ಅವರಿಗೆ ಅನಿವಾರ್ಯ ಆಗಿರಲಿಲ್ಲ. ಆ ಸುಶಿಕ್ಷಿತ ಸಂಸ್ಕೃತಿಯ ಒಂದು ಲಕ್ಷಣ ಅಷ್ಟೆ. ನಮ್ಮಲ್ಲಿ ಕಾಲೇಜು ಶಿಕ್ಷಣ ಅಂದ್ರೆ ಪ್ರೊಫೆಶನಲ್ ಡಿಗ್ರಿ ಅಷ್ಟೆ. ಪಾಶ್ಚಾತ್ಯ ದೇಶಗಳ ಸಂಗೀತದ ಕುರಿತು ಯಾವ ರೀತಿಯ ಆಸಕ್ತಿ ಇರುತ್ತದೆ? ಶಿಕ್ಷಣ ಅಂದರೆ ಒಂದು ಸಾಂಸ್ಕೃತಿಕ ಪುಷ್ಕಳತನ. ಅದು ನಮ್ಮಲ್ಲಿ ಇಲ್ಲ. ಮ್ಯಾಕ್ಸ್‌ಮುಲ್ಲರ್‌ಗೆ ನಮ್ಮ ವೇದಗಳಲ್ಲಿ ಆಸ್ಥೆ ಇತ್ತು. ನಮ್ಮಲ್ಲಿ ಎಷ್ಟು ಜನರಿಗೆ ಬೈಬಲ್, ಕುರಾನ್ ಬಗ್ಗೆ ಆಸ್ಥೆ ಇದೆ? ಆಸ್ಥೆ ದೂರ ಉಳಿಯಿತು, ಆಸಕ್ತಿಯಾದರೂ ಇದೆಯೇ? ಕಂಪ್ಯೂಟರ್ ತಿಳ್ಕೊಂಡಿದ್ದೀವಿ, ಅದರಲ್ಲೊಂದು ಡಿಗ್ರಿ ಇದೆ, ಅಷ್ಟೆ.
ನಾ ಮೊದಲೇ ಹೇಳಿದ ಹಾಗೆ ಕಲೆಯ ಅನುಭವ ಇದ್ರೆ ಸಾಕು, ಹಾಡುಗಾರನೋ, ಶಿಲ್ಪಿಯೋ, ಚಿತ್ರಕಾರನೋ ಆಗಬೇಕು ಎಂದಿಲ್ಲ. ಕಲೆಯ ಜೊತೆಗೆ ಇರುವ ಆಕಾಂಕ್ಷೆ, ಆಸೆ ಇದ್ರೆ ಸಾಕು. ಆ ಅನುಭವ ನಮ್ಮ ಬಾಳಿನ ಮೊನಚಾದ ವಿಚಾರಗಳು, ಸಿದ್ಧಾಂತಗಳು, ಅನುಭವಗಳನ್ನು ಹದಗೊಳಿಸುತ್ತೆ. ನಾನು ಈ ದೇಶದವನಾಗಿದ್ರೆ, ನಿಜವಾದ ಸಂಗೀತ ಭಕ್ತನಾಗಿದ್ರೆ, ಮೆಹದಿ ಹಸನ್, ಗುಲಾಂ ಅಲಿ ಇವರುಗಳ ಇಂಪನ್ನು ತೆಗೆದು ಒಗೆದುಬಿಡಲು ಸಾಧ್ಯವೇ? ಪಂಡಿತ್ ರವಿಶಂಕರ್ ಅವರನ್ನು ಇಸ್ಲಾಮಿಕ್ ದೇಶಗಳು ಬಹಳ ಗೌರವದಿಂದ, ಏಕಾಗ್ರತೆಯಿಂದ, ಪ್ರೀತಿಯಿಂದ ಕೇಳಿ, ಮೆಚ್ಚಲಿಲ್ಲವೇ? ಅಫ್ಗಾನಿಸ್ತಾನದಲ್ಲಿ ನಿಖಿಲ್ ಬ್ಯಾನರ್ಜಿಯವರನ್ನು ಪದೇ ಪದೇ ಕರೀತಿದ್ರು. ಯಾಕಂದ್ರೆ ಈ ಸಂಗೀತ ನಮ್ಮ ವೈಷಮ್ಯಗಳನ್ನೆಲ್ಲ ದಾಟಿ ಹೋಗಿರುತ್ತೆ. ಜಾಗತಿಕ ಕಲೆಯ ಅನುಭವವನ್ನು ನಮ್ಮ ಹುಡುಗರಿಗೆ ಕೊಡಬೇಕು, ಮುಖ್ಯವಾಗಿ ಸಂಸ್ಕೃತಿಯನ್ನು ಗುತ್ತಿಗೆಗೆ ತಗಂಡಿರುವ ನಾವು ನಮ್ಮ ಯುವಕ– ಯುವತಿಯರಿಗೆ, ಆ ಬೆಳೆಯುವ ಮನಸ್ಸುಗಳಿಗೆ ಕಲೆಯ ಅನುಭವವನ್ನು ಓದಿನಲ್ಲಿ, ಚಿತ್ರದಲ್ಲಿ ಸ್ಥೂಲವಾಗಿ ನೀಡಬೇಕು. ಸಣ್ಣ ವಯಸ್ಸಿನವರಿಗೆ ಕಲೆಯ ಬೆರಗು ಮತ್ತು ಆ ಬೆಳಕು ಸಿಗಬೇಕು. ಇವೆಲ್ಲ ಸಿಲಬಸ್ ಮಾರ್ಪಾಡಿನ ಮಟ್ಟದಲ್ಲಿ ಆಗುವಂತಹುದು ಅಲ್ಲ. ಮಕ್ಕಳಿಗೆ ಇಂತಹ ಬೆಲೆಬಾಳುವ ರುಚಿಗಳ ಅನುಭವ ಆಗಬೇಕು ಅಂದ್ರೆ ದೊಡ್ಡವರು ಈ ಪ್ರಕ್ರಿಯೆಯಲ್ಲಿ  ನಿರತರಾಗಿರಬೇಕು.
ನಾನು ನನ್ನ ಬಗ್ಗೆ ಮಾತಾಡ್ತೀನಿ. ತಪ್ಪು ತಿಳೀಬೇಡಿ. ನನ್ನ ತಂದೆ ತಾಯಿ ನನಗೆ ಬಹಳ ಚಿಕ್ಕಂದಿನಲ್ಲಿಯೇ ಆರ್ಥರ್ ಮೀ (Arthur Mee) ಸಂಪಾದಿಸಿ ಛಾಪಿಸಿದ ಚಿಲ್ಡ್ರನ್ಸ್‌ ಎನ್‌ಸೈಕ್ಲೋಪಿಡಿಯಾದ 24 ಸಂಪುಟಗಳನ್ನು ಕೈಗೆ ಕೊಟ್ಟರು. ನಂಗೆ ಓದಕ್ಕೆ ಬರ್ತಾ ಇರಲಿಲ್ಲ. ಚಿತ್ರ ನೋಡ್ತಾ ತಿರುವಿ ಹಾಕ್ತಿದ್ದೆ. ಪುಸ್ತಕ ಬಳಸುವುದು ಹೇಗೆ, ಯಾತಕ್ಕಾಗಿ ಚಿತ್ರ ನೋಡಬೇಕು, ಹೇಗೆ ನೋಡಬೇಕು, ಅದ್ರಲ್ಲಿಯೇ ಒಂದು ಶಿಕ್ಷಣ ಕ್ರಮ ನಿರ್ಮಿಸಿ, ನಾನು ಪ್ರೀತಿಯಿಂದ ಕೈಚಾಚುವಂತೆ ಮಾಡಿದರು. ಪುಸ್ತಕಗಳ ಜೊತೆ ಹೇಗಿರಬೇಕು, ಪುಸ್ತಕಗಳ ಒಳಗಿರೋದನ್ನು ಹೇಗೆ ನೋಡಬೇಕು ಎಂಬುದನ್ನು ತಿಳಿಸಿದರು. ಒಂದೊಂದು ವಾಲ್ಯೂಮ್‍ನಲ್ಲಿ ಚಿತ್ರಗಳು, ಕಥೆಗಳು (ಅಮ್ಮ ಓದಿ ಹೇಳ್ತಿದ್ರು), ಆಟಗಳು, ಎಲ್ಲದಕ್ಕೆ ಮನಸ್ಸು ಗಮನ ಹಚ್ಚಿಬಿಟ್ಟರು, ಈಗ ನಂಗೆ 86, ಸಂಗೀತ ಒಂದೇ ಅಲ್ಲ. ಸಾಹಿತ್ಯ, ಕೋಳಿಸಾಕಾಣಿಕೆ, ಕ್ರಿಕೆಟ್, ದಾ ವಿಂಚಿ, ನಂದಲಾಲ್ ಬೋಸ್, ಅವನೀಂದ್ರನಾಥ ಟ್ಯಾಗೋರ್, ವೆಂಕಟಪ್ಪನವರು, ಮೋಟರ್‍ ಸೈಕಲ್ ರಿಪೇರಿ… ಹೀಗೆ ನನ್ನ ಆಸ್ಥೆಯ ಹರವು ಈಗಲೂ ಇದೆ. ಈಗಿನವರೆಗೂ ನನ್ನ ನಾಳೆಗಳನ್ನು ಎದುರು ನೋಡ್ತೀನಿ. ಉಸ್ಸಪ್ಪಾ ಮುಗೀತು ಎಂದೇನಿಲ್ಲ. ಅಷ್ಟೇ ಇನ್ನೇನು ಹೇಳಲಿ… ಮಕ್ಕಳಿಗೆ ಎಳವೆಯಲ್ಲಿ ಹೀಗೆ ಎಲ್ಲದರ ಬಗ್ಗೆ ಆಸ್ಥೆ, ಆಸಕ್ತಿ ಬೆಳೆಯುವ ಶಿಕ್ಷಣ ಕೊಡಬೇಕು. ಕಲೆ, ಸಂಸ್ಕೃತಿಯ ರುಚಿ ಹತ್ತಿಸಬೇಕು. ಕ್ರೌರ್ಯದ ರುಚಿ ಅಲ್ಲ.