ಮರು ಚಿಂತನೆಗೆ ಒತ್ತಾಯಿಸುವ ಮೂರು ಚಳುವಳಿಗಳು-ಕೆ.ಪಿ.ಸುರೇಶ

ಕಳೆದ ವರ್ಷ ಕರ್ನಾಟಕದಲ್ಲಿ ಘಟಿಸಿದ ಮೂರು ಚಳವಳಿಗಳತ್ತ ಗಮನ ಸೆಳೆಯಲು ನೋಡುತ್ತಿದ್ದೇನೆ. ಮೊದಲನೆಯದು, ಪ್ರಾವಿಡೆಂಟ್ ಫಂಡ್ ಕುರಿತಂತೆ ಬೆಂಗಳೂರಿನ ಗಾರ್ಮೆಂಟ್ ಉದ್ಯಮದ ಮಹಿಳೆಯರು ಸ್ಫೋಟಗೊಂಡು ಬೀದಿಗಿಳಿದಿದ್ದು. ಎರಡನೆಯದು, ರಾಯಚೂರಿನಲ್ಲಿ ಇಪ್ಪತ್ತು ಸಾವಿರ ಮಹಿಳೆಯರು ಪಾನ ನಿಷೇಧ ಮಾಡಬೇಕೆಂದು ರ್ಯಾಲಿ ನಡೆಸಿದ್ದು. ಮೂರನೆಯದು ಅಂಗನವಾಡಿ ಸಹೋದರಿಯರು ಚಳವಳಿ ಹೂಡಿದ್ದು.
ಉಳಿದಂತೆ ಕರ್ನಾಟಕದಲ್ಲಿ ನೂರಾರು ಚಳವಳಿಗಳು ನಡೆದಿವೆ. ಅವೆಲ್ಲವೂ ಸರ್ಕಾರ ಮತ್ತು ಸಮಾಜದಲ್ಲಿ ಎಚ್ಚರ ಮೂಡಿಸುವ ಚರ್ಚೆಗೆ ನಾಂದಿ ಹೇಳಿವೆ.
ಆದರೆ ಇವು ಮೂರು ನಮ್ಮ ಕಾಲದ ಸಿದ್ಧಾಂತಿಗಳು ಮತ್ತು ಆಕ್ಟಿವಿಸ್ಟ್ ಗಳಿಗೆ ಮರು ಚಿಂತನೆ ಮಾಡಬೇಕಾದ ಸೂಚಿಗಳನ್ನು ನೀಡಿವೆ ಎಂದು ನಾನು ಭಾವಿಸಿದ್ದೇನೆ.
ಕಳೆದ ದಶಕಗಳಲ್ಲಿ ಎರಡು ದಿಸೆಗಳಲ್ಲಿ ಪ್ರತಿಕ್ರಿಯೆಗಳು ವ್ಯಾಪಕವಾಗಿ ರೂಪುಗೊಂಡಿಲ್ಲ ಎಂಬ ಅಭಿಪ್ರಾಯ ಇದೆ. 1. ಜಾಗತೀಕರಣದಿಂದ ಉದ್ಘಾಟನೆಗೊಂಡ ನವ ಉದಾರವಾದೀ ಆರ್ಥಿಕ ಪ್ರಣಾಳಿಕೆ 2. ಕೋಮು ಧ್ರುವೀಕರಣದ ಮೂಲಕ ಬಹುಸಂಖ್ಯಾತ ಯಜಮಾನಿಕೆಯ ಸಾಮಾಜಿಕ ಪ್ರಣಾಳಿಕೆ. ಈ ಎರಡರ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ನಮ್ಮ ಸಿದ್ಧಾಂತಿಗಳು ಮತ್ತು ಅಕಡೆಮಿಕ್ ವಲಯ ವಿಫಲವಾಗಿದೆ ಎಂಬ ಅನಿಸಿಕೆಯೂ ಗಾಢವಾಗಿದೆ.
ಈ ಹಿನ್ನೆಲೆಯಲ್ಲಿ ಈ ಮೂರೂ ಚಳವಳಿಗಳ ಲಕ್ಷಣಗಳನ್ನು ಗಮನಿಸಿ. ತನ್ನ ವೈಯಕ್ತಿಕ ಬದುಕಿನ ಮಟ್ಟದಲ್ಲಿ ಅತೀ ಮುಖ್ಯವೆಂದು ಮಹಿಳೆಯರು ಭಾವಿಸಿದ ಚಳವಳಿಗಳು ಇವು. ಈ ಮೂರು ಚಳವಳಿಗಳಲ್ಲಿ ಒಂದು- ಸಂಸಾರ ನಡೆಸುವ ಹೆಣ್ಣಿನ ಎಲ್ಲಾ ಲೆಕ್ಕಾಚಾರಗಳನ್ನೂ ಏರುಪೇರು ಮಾಡುವ ಮದ್ಯದ ಹಾವಳಿ ಬಗ್ಗೆಯಾದರೆ, ಇನ್ನೊಂದು ಹೇಗೋ ಜೋಪಾನ ಮಾಡುವ ಉಳಿತಾಯದ ಬಗ್ಗೆ. ಮೂರನೆಯದು ಇದಕ್ಕಿಂತಲೂ ಮೂಲಭೂತವಾದ ಘನತೆಯ ವೇತನ ಅಂದರೆ ಆದಾಯದ ಬಗ್ಗೆ ಇದೆ. ಇವು ಮೂರರ ಮೂಲಕ ಈ ಹೆಣ್ಣು ಮಕ್ಕಳು ಒಂದು ಸಾಮಾಜಿಕ, ಆರ್ಥಿಕ ಯಜಮಾನಿಕೆಯ ನಡಾವಳಿಗಳನ್ನು ಪ್ರಶ್ನಿಸಿದ್ದಾರೆ. ಈ ಮಹಿಳೆಯರನ್ನು ಮಾತಾಡಿಸಿದರೆ ಇದರ ಹಿಂದೆ ಮಹಿಳೆಯಷ್ಟೇ ನೋಡಬಲ್ಲ ಹಲವು ಆಯಾಮಗಳಿವೆ. ನೀರು, ಆರೋಗ್ಯ, ಹಸಿರು, ಮೇವು ಎಲ್ಲಾ. ಇವೆಲ್ಲಾ ಭೌತಿಕ ಬದುಕನ್ನು ಹಸನು ಮಾಡುವ ಸಹನೀಯ ಮಾಡುವ ಹಂದರ. ಶಿಕ್ಷಣ, ಘನತೆಯ ಬದುಕು, ವರದಕ್ಷಿಣೆ- ಹೀಗೆ ಉಳಿದವೂ ಇದರೊಂದಿಗೇ ಚಿಮ್ಮುತ್ತವೆ. ಇದು ಏಕಕಾಲಕ್ಕೆ ಸರ್ಕಾರದ ಕರ್ತವ್ಯಚ್ಯುತಿ ಮತ್ತು ಸಾಮುದಾಯಿಕ ಜೀವನದ ಏರುಪೇರುಗಳ ಬಗ್ಗೆಯೂ ಬೆರಳು ತೋರುತ್ತಿವೆ.
ಪ್ರಭುತ್ವದ ನಡೆಗಳು ಅತ್ಯಂತ ಖಾಸಗಿ/ ವೈಯಕ್ತಿಕ ಮಟ್ಟದಲ್ಲಿ ಚುಚ್ಚುವಾಗಲೇ ಪ್ರತಿಕ್ರಿಯೆ ಹೆಚ್ಚು ತೀಕ್ಷ್ಣವಾಗುವುದು. ಇದನ್ನು ಸಾಮುದಾಯಿಕವಾಗಿ ವಿಸ್ತರಿಸಿ ಗ್ರಹಿಸುವ ಬಗೆಯನ್ನು ಚಳವಳಿಗಳ ನೇತಾರರು ವಿವರಿಸುತ್ತಾರೆ ಎಂಬ ಗ್ರಹಿಕೆ ನಮ್ಮಲ್ಲಿದೆ. ಇದನ್ನು ಚಳವಳಿಗಳನ್ನು ಕಟ್ಟುವ ಬಗೆ ಎಂದೂ ಕರೆಯಬಹುದು.
ಈ ಮೂರೂ ಚಳವಳಿಗಳನ್ನು ಗಮನಿಸಿದರೆ, ಇವು ಧುತ್ತನೆ ಸ್ಫೋಟವಾದಾಗಲೇ ನಮ್ಮ ಸಿದ್ಧಾಂತಿಗಳು, ಬುದ್ಧಿಜೀವಿ ವರ್ಗ ಇದನ್ನು ಗಮನಿಸಿದ್ದು. ಬಳಿಕ ಅದರೊಂದಿಗೆ ಗುರುತಿಸಿಕೊಂಡು ಅದಕ್ಕೆ ಬೆಂಬಲ ಸೂಚಿಸುವ ಕೆಲಸ ಮಾಡಿದ್ದಾರೆ. ಆದರೆ ಇದು ಜ್ವಾಲಾಮುಖಿಯ ಸ್ಫೋಟದ ಮೊದಲ ಗುರುಗಾಡುವಿಕೆಯ ಹಂತದಲ್ಲಿದ್ದಾಗ ಅದನ್ನು ಬಹುತೇಕ ಜನ ಗುರುತಿಸಿಲ್ಲ. ಈ ಇಶ್ಯೂಗಳೆಲ್ಲಾ ಹೊಸದೇನಲ್ಲ. ನಮ್ಮ ಜನಪರ ಕಾಳಜಿಯ ಮಂದಿ ಪದೇ ಪದೇ ಗುರುತಿಸಿದ ಅಂಶಗಳೇ. ಆದರೆ ಇವು ಸ್ಥಳೀಯವಾಗಿ ಎತ್ತುವ ಅವತಾರಗಳನ್ನು ಗುರುತಿಸಲು ಸೋತಿದ್ದೇವೆ.
ಇವರನ್ನು ಸಂಘಟಿಸುತ್ತಿದ್ದ ಮಂದಿ ಎಷ್ಟು ಅನಾಮಿಕರಾಗಿ ಉಳಿದಿದ್ದರೆಂದರೆ ಈ ಚಳವಳಿಗಳು ನಮ್ಮ ಕಣ್ಣಿಗೆ ಗಿಡಿಯುವವರೆಗೂ ಇವರು ಯಾರೆಂದೂ ಗೊತ್ತಾಗದಷ್ಟರ ಮಟ್ಟಿಗೆ. ಗಾರ್ಮೆಂಟ್ ಕೆಲಸಗಾರರ ವಿಷಯದಲ್ಲಿ ಈಗಲೂ ಈ ಅಚ್ಚರಿ, ಅಜ್ಞಾನ ಮುಂದುವರಿದಿದೆ.
ಏನಿದರ ಅರ್ಥ? ಇದರೊಂದಿಗೆ ಇತ್ತೀಚೆಗಿನ ಬಹುಮುಖ್ಯ ಆಂದೋಲನವಾದ ಉಡುಪಿ ಚಲೋ ಗಮನಿಸಬೇಕು. ಉಡುಪಿ ಚಲೋ ಬಹುತೇಕ ಪ್ರಜ್ಞಾವಂತಿಕೆ ಪಡೆದ ದಲಿತ ಯುವಶಕ್ತಿ ಸಂಘಟಿಸಿದ್ದು. ಇದಕ್ಕೆ ದೊರೆತ ಸ್ಪಂದನವೂ ಅಪೂರ್ವ. ಇದು ದಲಿತ ಚಳವಳಿಗೆ ಪುನರ್ಚೇತನ ನೀಡಿದೆ; ನಿಜ. ಆದರೆ ತಳಮಟ್ಟದ ದಲಿತರಲ್ಲಿ ಎಷ್ಟು ಪ್ರಚೋದನೆ ಆಯಿತು ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಯುವಶಕ್ತಿ ತನ್ನ ಸೈದ್ಧಾಂತಿಕ ನಿಲುವು ಘೋಷಿಸಿಕೊಂಡಾಗಲೇ, ಅತ್ತ ದಲಿತ ರಾಜಕೀಯ ನಾಯಕರು ವಲಸೆ ಹೊರಟ ವ್ಯಂಗ್ಯ ಗಮನಿಸಬೇಕು.
ಇದರೊಂದಿಗೇ ಇತ್ತೀಚೆಗಿನ ಉತ್ತರಪ್ರದೇಶದ ಚುನಾವಣಾ ಫಲಿತಾಂಶವನ್ನೂ ನೋಡೋಣ. ಸಾಮಾಜಿಕ ಸಾಂಸ್ಕೃತಿಕ ಆಯಾಮಗಳನ್ನೇ ಮುಖ್ಯವಾಗಿಸಿಕೊಂಡು ಪ್ರತಿಕ್ರಿಯಿಸುವಾಗ, ಅತ್ತ ಆರ್ಥಿಕ ಚಲನಶೀಲತೆಯ ಭರವಸೆ ಮುಖ್ಯ ಅನ್ನುವಂತೆ ಬಹು ದೊಡ್ಡ ಸಂಖ್ಯೆಯ ದಲಿತ/ ಅತೀ ಹಿಂದುಳಿದ ವರ್ಗಗಳು ಮತ ಹಾಕಿರುವ ಚಿತ್ರ ಕಣ್ಣೆದುರು ಇದೆ. ಇದೇ ಮಾತು ಅಲ್ಪಸಂಖ್ಯಾತರ ಹಿತ ಕಾಯುವ ಪ್ರತಿಕ್ರಿಯೆಗಳ ಬಗ್ಗೆಯೂ ಹೇಳಬೇಕು. ಮುಸ್ಲಿಂ ಹಿತ ಕಾಯುವ ಬಹುತೇಕ ಪಕ್ಷಗಳು ಮುಸ್ಲಿಂ ಗಂಡಸಿನ ಹಿತ ಕಾಯುತ್ತಿವೆ ಎಂಬ ಶಂಕೆ ವಿಸ್ತ್ರತವಾಗಿ ಪ್ರಚಲಿತಗೊಂಡಿದೆ. ಸಾಕಷ್ಟು ಸಂಖ್ಯೆಯ ಮುಸ್ಲಿಂ ಮಹಿಳೆಯರು ತಲಾಖ್ ಕುರಿತಾದ ಭಾಜಪದ ನಿಲುವಿಗೆ ಒಳಗೊಳಗಿಂದ ಮೆಚ್ಚುಗೆ ಪಟ್ಟು ಮತ ಹಾಕಿದ್ದಾರೆ ಎನ್ನುವ ವರದಿಗಳು ಬರುತ್ತಿವೆ.
ಅರ್ಥಾತ್, ನಮ್ಮ ಸೈದ್ಧಾಂತಿಕ ಗ್ರಹಿಕೆಗಳು ತೀರಾ ಹಳೆಯದಾಗಿವೆ. ಅಥವಾ ಹೊಸ ಸ್ಪಂದನದ ಸೂಕ್ಷ್ಮಗಳನ್ನು ಹಿಡಿಯಲು ಸೋತಿವೆ ಎನ್ನಬಹುದೇ?
ಇನ್ನೊಂದು ಉದಾಹರಣೆ ಕೊಡಬಯಸುವೆ.
ಇಂದಿಗೂ ನಮ್ಮ ಬೌದ್ಧಿಕ ವರ್ಗ ದೈವ ನಂಬಿಕೆಯನ್ನು ಪತನವೆಂದೇ ಭಾವಿಸುತ್ತಿದೆ. ಬೌದ್ಧಿಕ ಬೆಳವಣಿಗೆಯ ಒಂದು ಪ್ರಮಾಣವಾಗಿ ನಾಸ್ತಿಕತೆಯನ್ನು ಅದು ಮುಂದಿಟ್ಟಿದೆ. ಇತ್ತೀಚೆಗೆ ಗದ್ದರ್ ಅವರಲ್ಲಾಗಿರುವ ಬದಲಾವಣೆ ಬಗ್ಗೆ ಬಂದಿರುವ ಆತಂಕಿತ ಪ್ರತಿಕ್ರಿಯೆಗಳೇ ಇದಕ್ಕೆ ಸಾಕ್ಷಿ. ಬೌದ್ಧಿಕ ತತ್ವಗಳ ಸ್ಪಷ್ಠತೆಗೆ ಮಾಪನವಾಗಿ ದೈವ ನಿರಾಕರಣೆ ಇದ್ದರೆ ಅದೊಂದು ತಾರ್ಕಿಕ ಪರೀಕ್ಷೆ ಎನ್ನಬಹುದು. ಆದರೆ ಸಮುದಾಯಗಳೊಂದಿಗೆ ಕೆಲಸ ಮಾಡುವಾತ, ಸಮುದಾಯದ ನಂಬಿಕೆಯನ್ನು ಸಹಿಸಿಕೊಳ್ಳುವ ಮಟ್ಟಿಗೆ ವ್ಯವಹರಿಸುತ್ತಾನೊ ಇಲ್ಲಾ ಆ ನಂಬಿಕೆಯನ್ನೂ ತನ್ನದಾಗಿಸಿಕೊಳ್ಳುತ್ತಾನೋ ಎಂಬುದು ಕುತೂಹಲಕಾರಿಯಾದ ಪ್ರಶ್ನೆ.
ತನ್ನ ಧರ್ಮದ ಎಲ್ಲಾ ಲಾಂಛನಗಳನ್ನೂ ಧರಿಸಿದ್ದ ಹರ್‍ಕಿಷನ್‍ಸಿಂಗ್ ಸುರ್ಜಿತ್ ಒಬ್ಬ ಬದ್ಧತೆಯುಳ್ಳ ಎಡಪಂಥೀಯ ಎಂದು ಒಪ್ಪಿಕೊಳ್ಳಬಹುದಾದರೆ ಇದನ್ನು ಎಲ್ಲಾ ಸ್ತರಗಳಿಗೂ ವಿಸ್ತ್ರತಗೊಳಿಸಬಹುದಲ್ಲ?!.
ಇನ್ನೊಂದೆಡೆ, ಸರ್ಕಾರ/ ಪ್ರಭುತ್ವವನ್ನು ಜನ ಹೇಗೆ ಬಗೆಯುತ್ತಾರೆ ಎಂಬು ಕುರಿತಾದ ಜಿಜ್ಞಾಸೆ. ಪ್ರಭುತ್ವವನ್ನು ಸೈದ್ಧಾಂತಿಕ ಮೂಸೆಯಲ್ಲಿ ಗ್ರಹಿಸಿ ಕೊಡುವ ವಿವರಣೆ, ತಳಮಟ್ಟದ ಸಾಮಾನ್ಯರು ಅನುಭವ ಪ್ರೇರಿತವಾಗಿ ಅರ್ಥ ಮಾಡಿಕೊಳ್ಳುವ ನುಡಿಗಟ್ಟುಗಳ ಮೂಲಕ ಇಳಿದೇ ಇಲ್ಲ. ಆದ್ದರಿಂದಲೇ ಜಾಗತೀಕರಣದ ಅಪಾಯದ ಬಗ್ಗೆ ನಾವು ಮಾತಾಡುತ್ತಿದ್ದರೆ ಜನಸಾಮಾನ್ಯರು ಅದು ತರಬಹುದಾದ ಅವಕಾಶಗಳ ವ್ಯಾಖ್ಯಾನವನ್ನು ಗಮನಿಸುತ್ತಿದ್ದಾರೆ. ನೋಟು ರದ್ಧತಿಯ ಸುಳ್ಳುಗಳ ಬಗ್ಗೆ ಹೇಳುತ್ತಿದ್ದಾಗಲೇ ಜನ ಅದನ್ನು ಕಪ್ಪು ಹಣದ ವಿರುದ್ಧದ ಹೋರಾಟದ ಸಂಕೇತವಾಗಿಯೂ ಭಾವಿಸಿದ್ದರು.
ಅರ್ಥಾತ್, ನಮ್ಮ ಚಿಂತಕರು ಎರಡು ನೆಲೆಗಳಲ್ಲಿ ಆಳ ವಿಮರ್ಶೆ ಮಾಡಬೇಕಾದ ಅವಶ್ಯಕತೆಯನ್ನು ಈ ಚಳವಳಿಗಳು ಮತ್ತು ಚುನಾವಣಾ ಫಲಿತಾಂಶಗಳು ಮುಂದಿಟ್ಟಿವೆ. ಸರ್ಕಾರದ ಆಡಳಿತದ ವೈಖರಿ (Governance) ಬಗ್ಗೆ ಹೇಳುವುದಾದರೆ ನಮ್ಮ ಎಲ್ಲಾ ಪಕ್ಷಗಳು ತಮ್ಮ ಅಭಿವೃದ್ಧಿ ಪ್ರಣಾಳಿಕೆಯನ್ನು ಸ್ಥೂಲ ಆಶ್ವಾಸನೆಗಳೊಂದಿಗೆ ಜನರ ಮುಂದಿಡುತ್ತಾ ಬಂದಿದ್ದಾರೆ. ಜನರಿಗೆ ಅದು ಅರ್ಥವಾಗಿದೆ. ಸರ್ಕಾರವೆಂಬುದು ಪ್ರಾಥಮಿಕವಾಗಿ ಅನುಕೂಲಗಳನ್ನು ತಲುಪಿಸುವ ವ್ಯವಸ್ಥೆ [delivery system) ಎಂದು ಅವರು ಭಾವಿಸಿದ್ದಾರೆ. ಅವರ ಮಟ್ಟಿಗೆ ಸರ್ಕಾರವನ್ನು ಅಳೆಯುವ ಪ್ರಾಥಮಿಕ ಪರೀಕ್ಷೆ ಇದೇ. ಕಳೆದ 20 ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷಗಳೆನ್ನಿಸಿಕೊಂಡಿರುವ ಭಾಜಪ, ಕಾಂಗ್ರೆಸ್‍ಗೆ ಬೆನ್ನು ಹಾಕಿ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕಲೂ ಇದೇ ಕಾರಣ; ಇವು ವಿಫಲವಾದಾಗ ಮರಳಿ ಈ ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕಿದ್ದಾರೆ ಎಂದು ಬಗೆಯಬಹುದು. ವಿಷಾದವೆಂದರೆ ನಮ್ಮ ಬಹುತೇಕ ಸರ್ಕಾರಗಳು ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಪರೀಕ್ಷೆಯಲ್ಲೇ ಪಾಸಾಗಿಲ್ಲ. ಆದ್ದರಿಂದ ಜನಸಾಮಾನ್ಯರು ಇದನ್ನೇ ಮುಖ್ಯವಾಗಿ ಪರಿಗಣಿಸುತ್ತಿದ್ದಾರೆಯೇ? ಸೈದ್ಧಾಂತಿಕ ಭೂಮಿಕೆ ಅವರಿಗೆ ಗೌಣವಾಗಿದೆಯೇ?
ಈ ಜಿಜ್ಞಾಸೆ ಚುನಾವಣಾ ಆಯ್ಕೆಗೆ ಸಂಬಂಧಿಸಿದ್ದಾಯಿತು.
ಇನ್ನೊಂದೆಡೆ, ‘80ರ ದಶಕದಲ್ಲಿ ಚಳವಳಿಗಳ ಜೊತೆ ಸಾಂದ್ರವಾಗಿ ಗುರುತಿಸಿಕೊಳ್ಳುತ್ತಿದ್ದ ರೀತಿಯಲ್ಲಿ ನಮ್ಮ ಅಕಡೆಮಿಕ್, ಸಾಂಸ್ಕೃತಿಕ ವಲಯ ಈಗ ಗುರುತಿಸಿಕೊಳ್ಳುತ್ತಿಲ್ಲ ಎಂಬ ಸತ್ಯ. ಕೋಮುವಾದ, ಧಾರ್ಮಿಕ ಧ್ರುವೀಕರಣ, ಪುರೋಹಿತಶಾಹಿ ಆಕ್ರಮಣದ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡು ಸಕ್ರಿಯರಾಗಿರುವ ಸಾಂಸ್ಕೃತಿಕ/ಸಾಹಿತ್ಯಿಕ/ಅಕಡೆಮಿಕ್ ವಲಯದ ಬಹುತೇಕರ ಹೆಸರನ್ನು ಆರಂಭದಲ್ಲಿ ಹೆಸರಿಸಿದ ಮೂರೂ ಚಳವಳಿಗಳ ಮಹಿಳೆಯರು ಅಷ್ಟಾಗಿ ಕೇಳಿಲ್ಲ. ಅಷ್ಟೇಕೆ, ಈ ಮಂದಿಗೆ (ಕನಿಷ್ಠ ನನಗೆ ಗೊತ್ತಿರುವ) ರಾಯಚೂರಿನ ಹೋರಾಟವನ್ನು ಸಂಘಟಿಸಿದ ಸಂಘಟನೆಯ ಪರಿಚಯವೇ ಇರಲಿಲ್ಲ!!
ಅಂದರೆ ನಮ್ಮ ಬೌದ್ಧಿಕ ವರ್ಗ ಸೈದ್ಧಾಂತಿಕ ವಿಷಯವನ್ನೇ ಆದ್ಯತೆಯಾಗಿ ಪರಿಗಣಿಸಿ, ನಿತ್ಯ ಬದುಕಿನ ಕಷ್ಟದ ಬಗ್ಗೆ ಜನಸಾಮಾನ್ಯರ ಪ್ರತಿಕ್ರಿಯೆಗಳ ಜೊತೆ ಗುರುತಿಸಿಕೊಂಡಿಲ್ಲ ಎನ್ನಬೇಕೇ?
ಉದಾಹರಣೆಗೆ ಇಂದಿಗೂ ಕೃಷಿ, ನೀರಿನ ಕುರಿತಾದ ಚರ್ಚೆಗಳಾಗುವಾಗ ಅದು ಪರಿಸರವಾದಿಗಳ ಅಥವಾ ಸುಸ್ಥಿರ ಕೃಷಿ ಪಂಡಿತರ ಸಬ್ಜೆಕ್ಟ್ ಅನ್ನುವ ರೀತಿಯಲ್ಲಿ ನಮ್ಮ ಸಾಂಸ್ಕೃತಿಕ ವಲಯ ವಿನೀತವಾಗಿ ವೇದಿಕೆ ಬಿಟ್ಟುಕೊಡುತ್ತದೆ. ನನ್ನ ಅನುಭವದಲ್ಲಿ ಗ್ರಾಮೀಣಾಭಿವೃದ್ಧಿ, ಮಹಿಳಾ ಆರ್ಥಿಕಚಟುವಟಿಕೆಗಳು, ಕೃಷಿ ಪಡಿಪಾಟಲು ಬಗ್ಗೆ ವಿವರಗಳೊಂದಿಗೆ ನಮ್ಮ ಸಾಂಸ್ಕೃತಿಕ ವಲಯದ ಮಂದಿ ಮಾತಾಡಲು ತಡವರಿಸುತ್ತಾರೆ. ಅನುಕಂಪ, ಸಾಲಿಡಾರಿಟಿ ಇದೆ. ದೂರುವಂತಿಲ್ಲ.!!
ಆದರೆ ಮೌಖಿಕ ಕಾವ್ಯಪರಂಪರೆ ಕುರಿತಾಗಿ ಮಾತಾಡುವಾಗ ಭೋರ್ಗರೆವ ಪ್ರವಾಹ; ಈ ವಿಷಯಗಳಿಗೆ ಬರುವಾಗ ತೊಟ್ಟಿಕ್ಕುವ ನಲ್ಲಿಯಾಗುತ್ತದೆ.
ಮುಂದಿನ ನಮ್ಮ ಹೆಜ್ಜೆಗಳು ಮೊದಲು ಹೇಳಿದ ಮಹಿಳಾ ಕೇಂದ್ರಿತ ಚಳವಳಿಗಳ ಮೂಲಕ ಹೊಸ ದಾರಿ ಪಡೆಯಬೇಕಾಗಿದೆ. ನಾವು ಮಾತಾಡುವ ಸೈದ್ಧಾಂತಿಕ ವಿವರಗಳು- ಜಾಗತೀಕರಣದ ಅಪಾಯಗಳೇ ಇರಲಿ; ಕೋಮು ಧ್ರುವೀಕರಣದ ವಿಭಜಕ ರಾಜಕಾರಣವೇ ಇರಲಿ- ಈ ಮಹಿಳೆಯರ ಹಾಡುಪಾಡಿನ ಜೊತೆ ಹೆಣೆದುಕೊಳ್ಳದೇ ನಿಜ ನಿಜವೆನ್ನಿಸದು. ಸತ್ಯವಾಗಿದ್ದರೆ ಸಾಲದು ಅದು ನಿಜನಿಜ ಅನ್ನಿಸಬೇಕು ಎಂದು ಪುತಿನ ಒಮ್ಮೆ ಹೇಳಿದ್ದರು
‘ಕುಸುಮ ಬಾಲೆ’ಯಲ್ಲಿ , ಡಾಕ್ಟರು ‘‘contradiction’’ ಅಂದಾಗ ‘ಅರ್ಥವಾಯ್ತು ಬಿಡಿ’ ಎಂದು ಗಾರೆ ಸಿದ್ಮಾವ ತಲೆಯಾಡಿಸಿದ ವ್ಯಂಗ್ಯ ಇಂದು ಇನ್ನಷ್ಟು ಕಾಡಲು ಶುರುಮಾಡಿದೆ.
ಮಾರ್ಕ್ವೆಜ್‍ನ ಕಾದಂಬರಿಯೊಂದರ ಪಾತ್ರ ಹೇಳುವ ಮಾತು- “ಗಮನ ಕೊಡು, ನಮ್ಮ ಶತ್ರುಗಳು ನಮ್ಮ ಬುದ್ಧಿಮತ್ತೆಯನ್ನು ಬಳಸಿಕೊಂಡಷ್ಟು ನಮ್ಮ ತಪ್ಪುಗಳನ್ನು ಬಳಸಿಕೊಳ್ಳಲ್ಲ”
ವರ್ತಮಾನದ ವಿದ್ಯಾಮಾನಗಳು ಪ್ರಶ್ನೆಗಳಾದಾಗ, ಥಿಯೆರಿ ಮತ್ತು ಬೌದ್ಧಿಕ ವಿಶ್ಲೇಷಣೆಗಳ ಮೂಲಕ ಅರ್ಥ ಮಾಡಿಕೊಳ್ಳುವ ವಿಧಾನ ಸರಿಯಾದದ್ದೇ. ಆದರೆ ಸ್ಥೂಲವಾದ ಒಂದು ಗ್ರಹಿಕೆ- ಇದು ಸರಿ/ಇದು ತಪ್ಪು ಎಂಬ ಗ್ರಹಿಕೆ- ಆಳಕ್ಕಿಳಿದ ಮೇಲೆ ವಿಶ್ಲೇಷಣೆಗಳ ಪುನರ್ಮನನ ಅಷ್ಟೇನೂ ಅಗತ್ಯವಿರುವುದಿಲ್ಲ. ಮುಂದಿನ ಕೆಲಸವೇನಿದ್ದರೂ ಸಮುದಾಯದೊಂದಿಗೆ ಕೈ ಜೋಡಿಸಿ ಸಂವಾದ ನಡೆಸುವುದು. ಆದರೆ ಸಮುದಾಯದ ಗ್ರಹಿಕೆ ಏನು ಎಂಬುದಕ್ಕೆ ಕಿವಿಕೊಡುವ ತಾಳ್ಮೆ ಇರಬೇಕು.
“ಇಷ್ಟು ದಿನ ಮಂದಿ ಲೋಕವನ್ನು ವ್ಯಾಖ್ಯಾನಿಸುತ್ತಾ ಬಂದಿದ್ದಾರೆ. ಆದರೆ ಈಗ ಈ ಲೋಕವನ್ನು ಬದಲಾಯಿಸಬೇಕಾಗಿದೆ” ಎಂದ ಪುಣ್ಯಾತ್ಮ ನಮಗೇ ಈ ಮಾತು ಹೇಳಿರುವಂತಿದೆ..