ದೇವನೂರರ “ ಆರೆಸ್ಸೆಸ್- ಆಳ, ಅಗಲ” ಪುಸ್ತಕದ ನೆಪದಲ್ಲಿ ಇನ್ನೂ ಒಂದಿಷ್ಟು ಸಂಗತಿಗಳು-ಸುರೇಶ್ ಕಂಜರ್ಪಣೆ

[ದೇವನೂರರ “ ಆರೆಸ್ಸೆಸ್- ಆಳ, ಅಗಲ” ಪುಸ್ತಕದ ನೆಪದಲ್ಲಿ ಇನ್ನೂ ಒಂದಿಷ್ಟು ಸಂಗತಿಗಳು- 17 ಜುಲೈ 2022ರ ಆಂದೋಲನ ಪತ್ರಿಕೆಯ ಹಾಡು ಪಾಡು ಸಂಚಿಕೆಯಲ್ಲಿ ಸುರೇಶ್ ಕಂಜರ್ಪಣೆ ಅವರ ಬರಹ….]

ಹೈಸ್ಕೂಲಿನಲ್ಲಿದ್ದಾಗ ನಮ್ಮ ಗಣಿತದ ಮಾಷ್ಟ್ರು ಒಂದು ಜಾಣ್ಮೆ ಲೆಕ್ಕ ಕೇಳಿದ್ದರು.
ಒಂದು ಕೆರೆಯಲ್ಲಿ ಒಂದು ಕಮಲ ಇದೆ. ಅದು ಪ್ರತಿದಿನ ಡಬಲ್ ಆಗುತ್ತೆ. ಮೂವತ್ತನೇ ದಿನ ಅದು ಇಡೀ ಕೆರೆ ತುಂಬುತ್ತೆ. ಹಾಗಿದ್ದರೆ ಅರ್ಧ ಕೆರೆತುಂಬಿದ್ದು ಎಷ್ಟನೇ ದಿನ?
ಎಲ್ಲರೂ ಹದಿನೈದು ಅಂದಿದ್ದರು. ಮಾಷ್ಟ್ರು ನಕ್ಕು, ʼ29ನೇ ದಿನʼ ಎಂದು ಹೇಳಿ ಗಣಿತದ ಅರಿವು ತುಂಬಿದ್ದರು.
ದೇವನೂರು ಮಹಾದೇವ ಅವರ ಆರೆಸ್ಸೆಸ್ ಆಳ ಅಗಲ ಪುಸ್ತಕ ಅಂಥಾ ಒಂದು ಮಾಸ್ತರ ಕೆಲಸ.
ಆರೆಸ್ಸೆಸ್ ʼ47ರಿಂದಲೇ ಗಮನ ಸೆಳೆದಿದೆ. ಆದರೆ ಬಹುಕಾಲ ಅದು ಈಗಿನ ಸನಾತನ ಸಂಸ್ಥೆಯ ಹಾಗೆ ಒಂದು ಭಾವನಾತ್ಮಕ ಬ್ರಾಹ್ಮಣ್ಯ ಪ್ರೇರಿತ ಸಂಸ್ಥೆ ಎಂದು ಎಲ್ಲರೂ ನಗಣ್ಯ ಮಾಡಿದ್ದರು. ಮಕ್ಕಳಿಗೆ ಆಟ , ಶ್ಲೋಕ ಹೇಳಿಕೊಟ್ಟು ʼನಡವಳಿಕೆʼ ಕಲಿಸುತ್ತಾರೆ ಎಂಬ ಮೆಚ್ಚುಗೆಯಲ್ಲಿ ಎಷ್ಟೋ ಮಂದಿ ತಮ್ಮ ಮಕ್ಕಳನ್ನು ಶಾಖೆಗೆ ಕಳಿಸಿದ್ದಿದೆ.
ಅದರ ತಾತ್ವಿಕ ಪ್ರಣಾಲಿಯನ್ನು ತಲೆಗೆ ತುಂಬಿಸುವ ಕೆಲಸವನ್ನು ಇಷ್ಟಿಷ್ಟೇ ಮಾಡುವಾಗಲೂ ಆ ಬಗ್ಗೆ ವಿಶೇಷ ತಕರಾರು ಬಂದಿದ್ದಿಲ್ಲ!
ಆರೆಸ್ಸೆಸ್ನ ಮುಖ್ಯ ಅಜೆಂಡಾಕ್ಕೆ ಬಲು ದೊಡ್ಡ ತಡೆಯಾದ ಜಾತಿಯ ಸವಾಲನ್ನು ಆರೆಸ್ಸೆಸ್ ಸದಾ ನಿಭಾಯಿಸಲು ನೋಡಿದೆ. ಸಂಘದ ಯಾವ ಶಿಕ್ಷಕ/ ಪ್ರಚಾರಕ ವೈಯುಕ್ತಿಕವಾಗಿ ಜಾತೀಯತೆ ಮಾಡುವುದು ಅಪರೂಪ. ನಮ್ಮೂರಲ್ಲೇ ದಲಿತರ ಮನೆಗಳಲ್ಲಿ ಉಂಡು ಅವರನ್ನು ಶಾಖೆಗೆ ಬರುವಂತೆ ಮಾಡಿ ಆ ಕಾಲನಿ ಪೂರಾ ಇಂದು ಭಾಜಪವಾಗುವಂತೆ ಮಾಡಿದ್ದು ಆರೆಸ್ಸೆಸ್ಸಿನ ಪ್ರಚಾರಕನಾಗಿದ್ದ ನನ್ನ ನೆಂಟ. ಈ ನಿಭಾವಣೆಯ ಹಿಂದೆ ಒಂದು ಗೆಸ್ಚರ್ ಇದೆ. ತನ್ನ ತೆಕ್ಕೆಗೆ ದಕ್ಕಿದವರನ್ನು ಜಾತಿ ಕೀಳರಿಮೆಯಿಂದ ಹೊರತರುವ ಮೂಲಕ ತನ್ನ ಬಗ್ಗೆ ಕೃತಜ್ಞತೆಯನ್ನು ಉದ್ದೀಪಿಸಿದೆ. ನಳಿನಕುಮಾರ್ ಕಟೀಲಾದಿಯಾಗಿ ಆರೆಸ್ಸೆಸ್ಸಿನ ಕಾರ್ಯಕರ್ತರು ಹುಟ್ಟಿಕೊಂಡದ್ದು ಹೀಗೆ.
ಆದರೆ ಈ ನನ್ನ ನೆಂಟನೂ ಸೇರಿ ಆರೆಸ್ಸೆಸ್ ಎಂದೂ ಜಾತಿ ಬೇಧದ ಬಗ್ಗೆ ಆಂದೋಲನ ಮಾಡಲಿಲ್ಲ. ಪ್ರತಿಭಟಿಸಲಿಲ್ಲ. ಹೋರಾಟಕ್ಕೆ ಕೈ ಜೋಡಿಸಲಿಲ್ಲ
ವರ್ಣಾಶ್ರಮ ಧರ್ಮವನ್ನು ಆರೆಸ್ಸೆಸ್ ಜಾರಿಗೊಳಿಸುತ್ತಿದೆ ಎಂಬುದು ಕೊಂಚ ಅತಿ ವಿವರಣೆ. ಕಾಲಕ್ಕೆ ತಕ್ಕ ಜಾಣ್ಮೆ ಇಲ್ಲದ ದಡ್ಡ ಸಂಘಟನೆ ಅದಲ್ಲ. ಅದು ಸನಾತನ, ಭಾರತೀಯ ಹೆಸರಿನಲ್ಲಿ ಕೂತಿರುವ ನಮ್ಮ ಪಠ್ಯ, ಆಚರಣೆ ಮತ್ತು ಪ್ರಭಾವಳಿಗಳನ್ನು ಮುಂದಿಡುತ್ತಾ ಬಂದಿದೆ. ಇದು ಆಳದಲ್ಲಿ ಕೇವಲ ಬ್ರಾಹ್ಮಣ್ಯ/ ವೈದಿಕದ ಕೊಳವೆ ಮೂಲಕ ದಕ್ಕುವ ನೋಟ. ವಿಸ್ತಾರವಾದ ಸಾಮಾಜಿಕ ನೋಟವನ್ನು ನೋಡಲು ಅದು ಬಿಡುವುದಿಲ್ಲ.
ಇದನ್ನು ಬಿತ್ತಲು ತನ್ನದೇ ಆದ ನೂರಾರು ಉಪ ಸಂಸ್ಥೆಗಳನ್ನು ಅದು ಹುಟ್ಟು ಹಾಕಿದೆ. ಆ ಸಂಸ್ಥೆಗಳ ಮೂಲಕ ಇದನ್ನು ಮುಂದೊತ್ತುತ್ತದೆ.
ಅಭಾವಿಪ ಎಂಬ ಅದರ ವಿದ್ಯಾರ್ಥಿ ಸಂಘಟನೆ ತಗೆದುಕೊಳ್ಳಿ ನಾನು ಡಿಗ್ರಿ ಓದುತ್ತಿದ್ದ ಮೊದಲ ವರ್ಷ ಈ ಸಂಸ್ಥೆಯ ಸದಸ್ಯನಾಗಿದ್ದೆ. ಆಗ ಒಂದು ಐದಾರು ಜಿಲ್ಲೆಗಳ 125 ಪ್ರತಿನಿಧಿಗಳ ಶಿಬಿರ ನಡೆದಿತ್ತು. ಶಿವಮೊಗ್ಗಾದ ಕೃಷ್ಣ ಭಟ್ಟರು ಆ ಶಿಬಿರದಲ್ಲಿ ಇಂಪ್ರೆಸ್ಸಿವಾಗಿ ಭಾಷಣಮಾಡಿದ್ದರು. ಶಿಬಿರದ ಕೊನೆಯಲ್ಲಿ ನಿರ್ಣಯಗಳನ್ನು ಪಾಸು ಮಾಡುವ ಕ್ರಮ ಇದೆ. ಆ ನಿರ್ಣಯಗಳಲ್ಲಿ ಒಂದು- ಶಾಲಾ ಕಾಲೇಜುಗಳ ಅಪ್ಲಿಕೇಶನ್ನುಗಳಲ್ಲಿ “ ಜಾತಿ” ಎಂಬ ಕಾಲಮ್ಮನ್ನು ಕೈ ಬಿಟ್ಟು “ ಧರ್ಮ” ಮಾತ್ರಾ ಇರಬೇಕು ಎಂಬ ಹಕ್ಕೊತ್ತಾಯದ ನಿರ್ಣಯ. ಆವೇಳೆಗೆ ನಾನು ಅಭಾವಿಪದಲ್ಲಿದ್ದರೂ ರಾಮದಾಸ್ ವಿದ್ಯಾರ್ಥಿಯಾಗಿ ಒಂದಷ್ಟು ಲೋಹಿಯಾ ಓದಿಕೊಂಡಿದ್ದೆ. ಜಾತಿ ಎಂಬುದು ಸ್ಥಗಿತಗೊಂಡ ವರ್ಗ, ವರ್ಗವೆಂಬುದು ಚಲನಶೀಲ ಜಾತಿ ಎಂಬ ಕೊಟೇಶನ್ ತಲೆಯಲ್ಲಿತ್ತು. ನಾನು ಆ ನಿರ್ಣಯವನ್ನು ವಿರೋಧಿಸಿ ಜಾತಿ ಹೇಗೆ ನಮ್ಮಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆಯ ಸೂಚಿ ಎಂದು ಮಾತಾಡಿದೆ. ʼಸರಿಸರಿ ಚೆನ್ನಾಗಿ ಮಾತಾಡಿದಿರಿ!ʼ ಎಂದು ಕೃಷ್ಣಭಟ್ಟರು ತಿಪ್ಪೆ ಸಾರಿಸಿ ಸರ್ವಾನುಮತದ ನಿರ್ಣಯ ಎಂದು ಹೇಳ ಹೊರಟರು. ಆಗ ಇನ್ನೊಂದಷ್ಟು ಗೆಳೆಯರೂ ನನ್ನೊಂದಿಗೆ ಸಹಮತ ಸೂಚಿಸಿ ಅದನ್ನು ಮತಕ್ಕೆ ಹಾಕಲಾಯಿತು!! ಸುಮಾರು 4೦ ಮಂದಿ ಈ ನಿರ್ಣಯದ ವಿರುದ್ಧ ಕೈ ಎತ್ತಿದರು. ಅಲ್ಲಿಂದಾಚೆ ನಾನು ಅಭಾವಿಪದಿಂದಲೂ ಹೊರಬಂದು ರಾಮದಾಸರ ಶಿಷ್ಯನಾದೆ. ಇರಲಿ.
ಅಚ್ಚರಿ ಎಂದರೆ ಈ ಜಾತಿ ಬೇಡ ಅಂದ ಬಹುತೇಕರು ಮೀಸಲಾತಿ ಪ್ರವೇಶ ಪಡೆದವರೇ ಆಗಿದ್ದರು.
ಆರೆಸ್ಸೆಸ್ ತನ್ನ ಬೌದ್ಧಿಕ ನಿಲುವನ್ನು ಹೇಗೆ ಪ್ರೇರೇಪಿಸುತ್ತದೆ? ಮೀಸಲಾತಿ ನೋಡಿ: ʼಮೀಸಲಾತಿಯೆಂಬುದು ಮೆರಿಟ್ಟಿಗಿರುವ ಬಲು ದೊಡ್ಡ ಅಪಾಯ. ಮೆರಿಟ್ ಅಂದರೆ ಮೇಲ್ಜಾತಿಯವರ ಪ್ರತಿಭೆ. ಇದಕ್ಕೆ ಬಲು ದೊಡ್ಡ ಅಡಚಣೆ ದಲಿತರು.ʼ ಈ ವಾದವನ್ನು ಅದೆಷ್ಟು ಸೂಕ್ಷ್ಮವಾಗಿ ಆರೆಸ್ಸೆಸ್ ಹಬ್ಬಿಸುತ್ತಾ ಬಂದಿದೆಯೆಂದರೆ ಇಂದಿಗೂ ದಲಿತರ ಮೀಸಲಾತಿ ಬಗ್ಗೆ ವಕ್ರವಾಗಿ ಬರೆಯುವವರ ಜಾತಕ ನೋಡಿದರೆ ಅವರೆಲ್ಲಾ ಆರೆಸ್ಸೆಸ್ ಪ್ರಭಾವಕ್ಕೊಳಗಾದವರೇ ಆಗಿರುತ್ತಾರೆ. ವ್ಯಂಗ್ಯವೆಂದರೆ ಬಹುತೇಕ ಮಂದಿ ಒಂದಲ್ಲ ಒಂದು ಮೀಸಲಾತಿ ಪಡೆದವರು, ಇಲ್ಲಾ ಇನ್ನೂ ಪುಷ್ಕಳ ಮೀಸಲಾತಿಗೆ ಹಪಹಪಿಸುವವರು.
ಒಂದು ಸಂಸ್ಕೃತಿಯ ಮಾದರಿಯನ್ನು ಮುಂದಿಟ್ಟು ನೀವೆಲ್ಲಾ ಹೀಗಿದ್ದರೆ ಚಂದ ಎಂಬುದನ್ನು ಆರೆಸ್ಸೆಸ್ ಮಾಡುತ್ತದೆ. ನಮ್ಮ ಬ್ರಾಹಣ ಮಠಗಳಿಗೆ ಈ ಚಾಲೂತನ ಇಲ್ಲ!! ಅವು ಇನ್ನೂ ದ್ವಾದಸಿ ಊಟಕ್ಕೆ ಪ್ರತ್ಯೇಕ ಪಂಕ್ತಿ ಹಾಕುತ್ತಾ ಎದೆ ಉಬ್ಬಿಸಿ ಉಣ್ಣುತ್ತಾರೆ.
ʼಜಾತಿಯ ಶ್ರೇಣೀಕರಣದಲ್ಲಿ ತುತ್ತ ತುದಿಯಲ್ಲಿರುವ ಮಾದರಿಯನ್ನು ಅನುಸರಿಸಿʼ ಎಂದರೆ ಅದರ ಕೆಳಗಿರುವವನಿಗೆ ತನ್ನ ಸಾಂಸ್ಕೃತಿಕ ಭಡ್ತಿಗೆ ಇದು ಸರಿಯಾದ ದಾರಿ ಎಂಬ ಭಾವ ಕುದುರುತ್ತದೆ. ಕೀಳರಿಮೆಯ ಆತ್ಯಂತಿಕ ಸ್ಥಿತಿಯೆಂದರೆ ಯಜಮಾನನನ್ನು ಅನುಕರಿಸುವುದು.
ನಮ್ಮೂರಿನ ದಲಿತರು ಸ್ನಾನ ಮಾಡಿ ಶ್ಲೋಕ ಹೇಳಿ ಕುಂಕುಮ ಹಚ್ಚಿ ಕೂಲಿ ಕೆಲಸಕ್ಕೆ ಬರುತ್ತಿದ್ದರು. ಬ್ರಾಹ್ಮಣ ಧಣಿಯ ಮನೆಯಲ್ಲಿ ಅದೇ ಕೂಲಿ ಕೆಲಸ, ಅದೇ ಅಸ್ಪೃಷ್ಯತೆ. ಆದರೆ ಧನಿಯ ಮಾತು ಮುಖಭಾವದಲ್ಲೊಂದು ಮೆಚ್ಚುಗೆ ಇರುತ್ತಿತ್ತು. ಜನ್ಮ ಸಾರ್ಥಕವಾಗಲು ಅಷ್ಟು ಸಾಕು. ಸುಳ್ಯದ ಶಾಸಕ / ಸಚಿವ ಅಂಗಾರ ಹೀಗೆ ಸಾರ್ಥಕ್ಯ ಕಂಡ ದಲಿತ. ನಮ್ಮೂರಿನ ಹೈಸ್ಕೂಲಿನಲ್ಲೇ ಓದಿದ ಈ ಸಚಿವ ಬ್ರಾಹ್ಮಣರ ಮನೆಗೆ ಹೋದಾಗ “ ಅಂವ ಚಾ ಕುಡಿದ ಗ್ಲಾಸು ಅವನೇ ತೊಳೆದಿಡುತ್ತಾನೆ.ಸಂಪ್ರದಾಯಕ್ಕೆ ಗೌರವ ಕೊಡ್ತಾನೆ. ಉಳಿದ ತಲೆಹರಟೆ ದಲಿತರ ಹಾಗೆ ದುರಹಂಕಾರ ತೋರಿಸುವುದಿಲ್ಲ” ಎಂದು ನನ್ನ ನೆಂಟರಿಷ್ಟರು ಮೆಚ್ಚಿ ಮಾತಾಡಿದ್ದರು.
ಈ ದಾಸ್ಯ ಆರೆಸ್ಸೆಸ್ಸಿಗೆ ಮುಖ್ಯ
ಆರೆಸ್ಸೆಸ್ ಹಿಟ್ಲರನ ತರದ ಫ್ಯಾಸಿಸ್ಟ್ ಅನ್ನುವವರಿದ್ದಾರೆ. ಆರೆಸ್ಸೆಸ್ ಹಿಟ್ಲರನ ಒರಟು ನಡಾವಳಿಗಳನ್ನು ತಿದ್ದಿ ಸೂಕ್ಷ್ಮಗೊಳಿಸಿದೆ. ವರ್ಣಾಶ್ರಮ ಧರ್ಮ ಮತ್ತು ಜಾತಿ ವ್ಯವಸ್ಥೆಯಲ್ಲಿ ಸಮೂಲ ನಾಶ ಇಲ್ಲ! ಆಗಬೇಕಿರುವ ಕೆಲಸಗಳನ್ನು ಮಾಡಲು ಜನ ಬೇಕಲ್ಲ?! ನಾನು ಕೆಲಸ ಮಾಡುತ್ತಿದ್ದ ಒಂದು ಊರಿನಲ್ಲಿ ಶಿವರಾತ್ರಿ ಹಬ್ಬದಂದು ದೇವಸ್ಥಾನದ ಬಹುಪಾಲು ಕೆಲಸ ಮಾಡುತ್ತಿದ್ದುದು ಒಕ್ಕಲಿಗರಾದಿಯಾಗಿ ಶೂದ್ರರು. ಆದರೆ ಶಿವರಾತ್ರಿಯ ಮಾರನೇ ದಿನದ ಊಟ ಮಾತ್ರಾ ವಿಪ್ರರಿಗೆ.. ಬೇಡರ ಕಣ್ಣಪ್ಪನಿಗೆ ಊಟವಿಲ್ಲ ಎಂದು ನಾನು ಒಂದು ಪತ್ರ ಪತ್ರಿಕೆಗೆ ಬರೆದೆ. ಗುಲ್ಲೆದ್ದಾಗ ಆರೆಸ್ಸೆಸ್ಸಿನ ವಿಪ್ರನೊಬ್ಬ ನನಗೆ ಹೊಡೆದಿದ್ದ. ಊರ ಮರ್ಯಾದೆ ಕಳೆದೆ ಅಂತ! ಮೂರು ದಶಕದ ಹಿಂದಿನ ಕತೆ ಇದು. ಆಗ ಶೂದ್ರರು ನನ್ನ ಬೆಂಬಲಕ್ಕೆ ನಿಂತು ಪ್ರತಿಭಟಿಸಿದ್ದರಲ್ಲಿ ಆತ ಸಾರ್ವಜನಿಕವಾಗಿ ಬೇಶರತ್ ಕ್ಷಮೆ ಕೇಳಿದ್ದ. ಈಗ ಆಗಿದ್ದರೆ ಶೀಟಿ ರವಿ, ಪ್ರತಾಪ ಸಿಂಹನಂಥಾ ಒಕ್ಕಲಿಗರು ಆತನ ಪರ ಬಾಯಿ ಬಡಿದುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ವೈದಿಕ ದಾಸ್ಯಕ್ಕೆ ಈ ಸಮುದಾಯಗಳನ್ನು ಆರೆಸ್ಸೆಸ್ ತಳ್ಳಿದೆ.
ಯಾವುದೇ ಲಿಖಿತ ದಾಖಲೆ ಇಲ್ಲದ; ಎಂದೂ ತನ್ನ ಹಣಕಾಸಿನ ಲೆಕ್ಕ ಒಪ್ಪಿಸದ ಈ ಆರೆಸ್ಸೆಸ್ಗೆ ಕ್ರಿಯೆಯ ನೈತಿಕ ಪಾರದರ್ಶಕತೆ ಎಂದೂ ಮುಖ್ಯವಾಗಲಿಲ್ಲ. ಯಾಕೆಂದರೆ ಭಾರತೀಯ ಎಂದು ನಾವು ಕರೆಯುವ ರಾಜೇತಿಹಾಸದಲ್ಲೂ ನೈತಿಕತೆಗೆ ದೊಡ್ಡ ಸ್ಥಾನವಿಲ್ಲ. ಕುಟಿಲೋಪಾಯ ಅನುಸರಿಸಿದ ಕೃಷ್ಣನೇ ದೇವರು. ಸಾಮ,ದಾನ ,ಬೇಧ, ದಂಡಗಳು ಅನುಸರಣೀಯ ಆರೆಸ್ಸೆಸ್, ಇಂಥಾ ಪರಂಪರೆಯನ್ನು ಆರಾಧಿಸುವ ಸಂಘಟನೆಯೊಂದು ʼನೈತಿಕ ನಿಲುವಿನ ಗುರಿಯಷ್ಟೇ ಮಾರ್ಗವೂ ಪವಿತ್ರವಾಗಿರಬೇಕುʼ ಎಂದು ನಂಬಲು ಸಾಧ್ಯವಿಲ್ಲ. ಇದನ್ನು ಒತ್ತಿ ಹೇಳಿದ ಬುದ್ಧ, ಶರಣರು ಮತ್ತು ಗಾಂಧಿಯನ್ನು ಆರೆಸ್ಸೆಸ್ ಪ್ರೇರಿತ ರಾಜಕೀಯ ಅಂಚಿಗೆ ಸರಿಸಿದೆ .
ಗುರಿ- ದಾರಿ ಎರಡೂ ನೈತಿಕವಾಗಿರಬೇಕು ಎಂಬುದು ವೈದಿಕದಿಂದಾಚೆಯ ಬುದ್ಧ, ಶರಣರ ಕಾಣ್ಕೆ. ಆರೆಸ್ಸೆಸ್ ಮುಂದೊತ್ತುವ ಸನಾತನ/ ವೈದಿಕ ಪರಂಪರೆಯಲ್ಲಿ ಇದಕ್ಕೆ ಸ್ಥಾನವಿಲ್ಲ.
ಆದ್ದರಿಂದಲೇ ಆರೆಸ್ಸೆಸ್ ಗೆ ಹಿಂದೂಗಳ ನೈತಿಕತೆ, ಚಾರಿತ್ರ್ಯ ಸುಧಾರಣೆ ಮುಖ್ಯ ಅನ್ನಿಸಿದ್ದೇ ಇಲ್ಲ. ಅದಕ್ಕೆ ಪುರುಷಪ್ರಧಾನ ಪೌರುಷದ ಮೂಲಕ ತನಗಾಗದವರನ್ನು ಪಳಗಿಸುವುದಷ್ಟೇ ಮುಖ್ಯ.
ಈ ಚಾರಿತ್ರ್ಯ ಸುಧಾರಣೆಗೆ ಯತ್ನಿಸಿದವರ ಬಗ್ಗೆ ಆರೆಸ್ಸೆಸ್ ಕಣ್ಣು ಕೆಂಪಾಗಿಸಿದೆ. ಆದ್ದರಿಂದಲೇ ದೇವನೂರು ಯಾಕೆ ಇದನ್ನು ಬರೆದರು ಎಂಬುದು ನಮ್ಮನ್ನು ಕಾಡಬೇಕು.
ಚಾತುರ್ವಣ್ಯ ವ್ಯವಸ್ಥೆಗೆ ಚರಮಗೀತೆ ಹಾಡುವುದಷ್ಟೇ ಅಲ್ಲ, ಆ ತಥಾಕಥಿತ ಸನಾತನ ಧರ್ಮದಲ್ಲಿ ಎಂದೂ ಇಲ್ಲದ ನೈತಿಕತೆಯ ಮರು ಸ್ಥಾಪನೆಗೆ ನಮ್ಮ ಸಂವಿಧಾನ ಬುನಾದಿ ಹಾಕಿದೆ. ಅದು ಪರಮೋಚ್ಛ ಎಂದು ಭಾವಿಸಿರುವ ʼಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವʼ ವೈದಿಕ ಹಿಂದೂ ಸಮಾಜದ ಮೌಲ್ಯಗಳಾಗಿರಲೇ ಇಲ್ಲ.
ಈ ಮೂರನ್ನೂ ತಾನು ಬುದ್ಧನಿಂದ ಪಡೆದೆ ಎಂದು ಬಾಬಾಸಾಹೇಬರು ಹೇಳಿದ್ದಾರೆ. ಈ ಮೂರೂ ಮೌಲ್ಯಗಳಿಗೆ ಬಲು ಮುಖ್ಯವಾದದ್ದು ಆತ್ಮ ನಿರೀಕ್ಷಣೆ ಮತ್ತು ಪಾರದರ್ಶಕ ನಡವಳಿಕೆ. ಇವೆರಡೂ ಪ್ರಜಾಸತ್ತೆಯ ಮೂಲ ಮೌಲ್ಯಗಳು.
ಆದ್ದರಿಂದ ಆರೆಸ್ಸೆಸ್ ಈ ಸಂವಿಧಾನದ ಬಗ್ಗೆ ಅಸಹನೆ ತೋರುತ್ತಿರುವುದು ಅನಿರೀಕ್ಷಿತವೇನಲ್ಲ.
ನಾನು ಓದುತ್ತಿದ್ದಾಗ ದಲಿತರ ಇಶ್ಯೂಗಳನ್ನು ಚರ್ಚಿಸಿ ಹೋರಾಡಲು ಸಾಕಷ್ಟು ನಮ್ಮ ಪ್ರತಿನಿಧಿಗಳೇ ಇದ್ದಾರೆ ಅವರನ್ನು ಪ್ರಶ್ನಿಸಬೇಕು ಎಂಬ ಅಪೂರ್ವ ನೈತಿಕ ನಿಲುವನ್ನು ದಸಂಸ ತಳೆದು ʼದಲಿತ ಮಂತ್ರಿ ಶಾಸಕರ ಮನೆ ಎದುರು ಧರಣಿʼ ಎಂಬ ಕಾರ್ಯಕ್ರಮ ಹಾಕಿಕೊಂಡಿತ್ತು. ಮೈಸೂರಿನಲ್ಲಿ ನೆಲೆ ನಿಂತಿದ್ದ ಹಲವಾರು ದಲಿತ ಶಾಸಕರ ಮನೆ ಎದುರೂ ಧರಣಿ ನಡೆದಿತ್ತು. ಅಂದು ಸಂಸದರಾಗಿದ್ದ ಶ್ರೀನಿವಾಸ್ ಪ್ರಸಾದ್ ಮನೆ ಎದುರು ಉರಿಬಿಸಿಲಿಗೆ ಎರಡು ಪ್ಲಾಸ್ಟಿಕ್ ಗೋಣಿಯನ್ನು ಕೋಲಿಗೆ ಕಟ್ಟಿ ನೆರಳು ಮಾಡಿಕೊಂಡು ಧರಣಿ ಕೂತವರಲ್ಲಿ ನಾನೂ ಒಬ್ಬ. ಆ ದಿನ ಕ್ರುದ್ಧರಾದ ಶ್ರೀನಿವಾಸ್ ಪ್ರಸಾದ ಅವರ ಅನುಯಾಯಿಗಳು ನಮ್ಮನ್ನು ಬಡಿದು ಓಡಿಸಿದ್ದರು. ನಾವು ದಿಕ್ಕು ತೋಚದೇ ಸೈಕಲ್ ಹೊಡೆದು ಮಹದೇವನಲ್ಲಿ ಹೇಳಿದೆವು. ಮಹಾದೇವ ಒಂದೆರಡು ನಿಮಿಷ ಸುಮ್ಮನೆ ಕೂತು, ತಟಕ್ಕನೆ ನಾನೇ ಬರ್ತೀನಿ ಎಂದು ನಮ್ಮೊಂದಿಗೆ ಬಂದು ಶ್ರೀನಿವಾಸ್ ಪ್ರಸಾದ್ ಮನೆ ಎದುರು ಉರಿ ಉರಿ ಬಿಸಿಲಲ್ಲಿ ಕೂತರು. ಸ್ವತಃ ಶ್ರೀನಿವಾಸ್ ಪ್ರಸಾದ್ ಅಳುತ್ತಾ ಕೂಗಾಡಿ ʼನಾನೇನು ಮಾಡಿಲ್ವಾ?ʼ ಎಂದು ಜಗಳಾಡಿದ್ದೂ ಆಗಿತ್ತು. ಸಾಂಕೇತಿಕವಾಗಿ ಪ್ರತಿಭಟಿಸುವ ನಮ್ಮ ಹುಡುಗರ ಮೇಲೆ ಕೈ ಮಾಡಿದ್ದು ಅಕ್ಷಮ್ಯ ಎಂದು ಮಹಾದೇವ ಹೇಳಿದ್ದರು.
ಲೋಕ ಜ್ಞಾನವಿಲ್ಲದೇ ಮೈಸೂರಿಗೆ ಬಂದಿದ್ದ ದ.ಕ.ದ ಬ್ರಾಹ್ಮಣ ನಾನು. ದಲಿತ ಗೆಳೆಯರ ಸ್ನೇಹದಲ್ಲಿ ಶೇ. 2ರ ಸಮುದಾಯದ; ಉಳಿದವರನ್ನು ಮುಟ್ಟದ ಶಾಶ್ವತ ಅಸ್ಪೃಷ್ಯನಾಗಿದ್ದ ನನ್ನ ಅಸ್ಪೃಶ್ಯತೆ ನೀಗಿದ್ದು ಈ ಗೆಳೆಯರು. ಮಹಾದೇವ ಅದರಿಂದಾಚೆಗಿನ ಆತ್ಮ ನಿರೀಕ್ಷಣೆಯ ಬೆಳಕನ್ನೂ ತೋರಿದರು.
ಈ ಪುಸ್ತಕ ಮುಖ್ಯವಾಗುವುದು ಆ ಕಾರಣಕ್ಕೆ. ದೇಶದ ತುಂಬಾ ಅಧಿಕಾರ ಲಾಲಸೆಗೆ, ಯಜಮಾನಿಕೆಯ ಕ್ರೂರ ಪಿಪಾಸೆಯಿಂದ ಎಲ್ಲಾ ನೈತಿಕ ಗೆರೆಗಳನ್ನೂ ಕ್ಷುಲ್ಲಕಗೊಳಿಸಿ ಆಟವಾಡುತ್ತಿರುವ ಆರೆಸ್ಸೆಸ್ ದೇಶದ ಎಲ್ಲಾ ಜಾತಿಗಳವರಲ್ಲಿ ಸಹಜವಾಗಿಯೇ ತುಂಬಬೇಕಾಗಿದ್ದ ವೈಜ್ಞಾನಿಕ ಮನೋಭಾವ, ಔದಾರ್ಯ, ಭ್ರಾತೃತ್ವಗಳನ್ನು ಅಳಿಸಿ ಆ ಜಾಗದಲ್ಲಿ ಮೌಢ್ಯ, ತಾರತಮ್ಯ ಮತ್ತು ಕೋಮು ದ್ವೇಶಗಳನ್ನು ತುರುಕಲು ಹವಣಿಸುತ್ತಿದೆ.
ನಮ್ಮ ಮಬ್ಬಾಗಿರುವ ದೃಷ್ಟಿಯನ್ನು ಸಂವಿಧಾನದ ಬೆಳಕಿನ ಮೂಲಕ ನಿಚ್ಚಳಗೊಳಿಸುವ ಪ್ರಯತ್ನ ದೇಮ ಅವರ ಈ ಪುಸ್ತಿಕೆ. ಮೇಲ್ನೋಟಕ್ಕೆ ಇದು ಆರೆಸ್ಸೆಸ್ಸಿನ ದಾಖಲೆಗಳನ್ನು ಆಯ್ದು ಇಟ್ಟಂತಿದ್ದರೂ ಅದು ಬೆರಳು ತೋರುತ್ತಿರುವುದು ನಮ್ಮ ಸಂವಿಧಾನದೆಡೆಗೆ. ಅವರು ಚುಟುಕಾಗಿ ಹೇಳಿ ಬೆರಳು ತೋರಿದ ದಿಕ್ಕುಗಳಲ್ಲಿ ಉಳಿದವರು ಆಳ ಅಧ್ಯಯನ, ಅನುಭವ ಕಥನಗಳನ್ನು ಬರೆಯುತ್ತಾ ಹೋಗಬೇಕಿದೆ.