ಆಡಳಿತ ಮಾಡುವವರು ಕೃಷ್ಣನಂತಿರಬೇಕು, ಗಾಂಧಾರಿಯಂತಲ್ಲ! -ಪ್ರಸನ್ನ

[ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ 21.7.2022 ಪ್ರಕಟವಾದ ಪ್ರಸನ್ನ ಅವರ ಬರಹ-] 

 

 

 

ಪ್ರಿಯ ಗೆಳೆಯರೇ, ಮಹಾದೇವನಿಗೆ ಜೀವದ ಭಯವಿಲ್ಲ. ನೀವೊಮ್ಮೆ ಆತನನ್ನು ಕೊಂದರೆ, ಜೀವ ಭಯದಿಂದ ಗಡಗಡನೆ ನಡುಗಬೇಕಾದವರು ನಿಮ್ಮ ಭಕ್ತರು.

 

ದೇವನೂರ ಮಹಾದೇವ ಅವರ ಕೃತಿ, ‘ಆರೆಸ್ಸೆಸ್ಸಿನ ಆಳ ಮತ್ತು ಅಗಲ’ ಓದಿದೆ. ಅವರ ಕೃತಿಯಿಂದಾಗಿ ಕನಲಿರುವ ಆರೆಸ್ಸೆಸ್ಸಿನ ಭಕ್ತರು, ಕೆಲವರು, ಮಹಾದೇವರಿಗೆ ಜೀವ ಬೆದರಿಕೆ ಒಡ್ಡಿರುವ ಸಂಗತಿಯನ್ನೂ ಓದಿದೆ. ತಪ್ಪು ಇದು. ಗಾಂಧೀಜಿಯವರಿಗೆ ಬೆದರಿಕೆ ಹಾಕಿ ಕೊಂದ ಆರೆಸ್ಸೆಸ್ಸಿನ ಭಕ್ತ, ಗೋಡ್ಸೆ ಮಾಡಿದ ತಪ್ಪನ್ನೇ ಇಂದಿನ ಭಕ್ತನೂ ಮಾಡಿದ್ದಾನೆ. ಚರಿತ್ರೆಯಿಂದ ಪಾಠ ಕಲಿತಂತಿಲ್ಲ ಆರೆಸ್ಸೆಸಿನ ಗೆಳೆಯರು. ಚರಿತ್ರೆ ಹಾಳಾಗಲಿ ಎಂದರೆ, ಅಧಿಕಾರದಿಂದಲೂ ಪಾಠ ಕಲಿತಂತಿಲ್ಲ ಅವರು.

 

ಮಹಾದೇವರ ಕೃತಿಯು ದಾಖಲೆಗಳನ್ನು ಆಧರಿಸಿದೆ. ಎರಡನೆಯ ಭಾಗದಲ್ಲಿ ಮಹಾದೇವರಂತಹ ಮಹಾದೇವರೇ ಕೊಂಚ ಭಾವಾವೇಶಕ್ಕೆ ಒಳಗಾಗಿದ್ದಾರೆ ನಿಜ. ಆದರೆ ಅಸತ್ಯ ನುಡಿದಿಲ್ಲ. ಸತ್ಯವನ್ನು ನಾವೆಲ್ಲರೂ ಎದುರಿಸೋಣ, ಆರೆಸ್ಸೆಸ್ಸಿನ ಗೆಳೆಯರೂ ಒಳಗೊಂಡಂತೆ, ಮಹಾದೇವರ ಕೃತಿಗೆ ವಿರುದ್ಧವಾದ ಪ್ರತಿಪಾದನೆ ಮಾಡುವುದಾದರೆ ಮಹಾದೇವರಿಗೆ ಲಭ್ಯವಿರುವುದಕ್ಕಿಂತ ಹೆಚ್ಚಿನ ಛಾನಲ್ಲುಗಳು ಭಕ್ತರಿಗೆ ಲಭ್ಯವಿವೆ ತಾನೆ? ಹಿಂಸೆ, ರಕ್ತ, ಕೊಲ್ಲುವುದು ಇತ್ಯಾದಿಗಳು ಛಾನಲ್ಲುಗಳಲ್ಲಿ, ರಕ್ತದ ಕಾಲುವೆಗಳಷ್ಟೇ ಅವು!

 

ಆರೆಸ್ಸೆಸ್ಸಿನವರನ್ನು ಗೆಳೆಯರು ಎಂದು ನಾನು ಸಂಬೋಧಿಸುತ್ತಿರುವ ಬಗ್ಗೆ ನನ್ನ ಇತರೆ ಗೆಳೆಯರಿಗೆ ತಕರಾರಿದೆ. ಅದೂ  ಕ್ರೋಧದ ಅಭಿವ್ಯಕ್ತಿಯೇ ಸರಿ. ಅನೇಕರಿಗೆ ಚರಿತ್ರೆ ತಿಳಿದಿಲ್ಲ. ಆರೆಸ್ಸೆಸ್ಸನ್ನು ವಿರೋಧಿಸುತ್ತಲೇ ಬಂದಿರುವ ಮಾರ್ಕ್ಸ್‌ವಾದಿಗಳು, ಸಮಾಜವಾದಿಗಳು ಹಾಗೂ ಗಾಂಧೀವಾದಿಗಳು ದೇಶದ ಒಟ್ಟಾರೆ ಒಳಿತಿಗಾಗಿ, ವಿವಿಧ ಸಂದರ್ಭಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ್ದಿದೆ. ಉದಾಹರಣೆಗೆ ಹೇಳುವುದಾದರೆ, ಗೋಪಾಲಕೃಷ್ಣ ಅಡಿಗರು, ಕಾಂಗ್ರೆಸ್ಸಿನ ವಿರುದ್ಧ, ಜನಸಂಘದ ಉಮೇದುದಾರರಾಗಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಎದುರಿಸಿದಾಗ ನಾವಿನ್ನೂ ಹುಡುಗರಷ್ಟೇ. ಆಗ, ಲಂಕೇಶರ ಮುಂದಾಳತ್ವದಲ್ಲಿ ಆರೆಸ್ಸೆಸ್ಸಿನವರ ಜೊತೆ ಕೆಲಸ ಮಾಡಿದ್ದಿದೆ ನಾನು.ಅದಕ್ಕೂ ನಂತರದಲ್ಲಿ ಆರೆಸ್ಸೆಸ್ಸಿನ ಗೆಳೆಯರು ಒಳಿತಿನ ಭಾವಾವೇಶಕ್ಕೆ ಒಳಗಾಗಿ, ಗಾಂಧಿಪ್ರಣೀತ ಸಮಾಜವಾದವನ್ನು ಅಪ್ಪಲು ಮುಂದೆ ಬಂದಾಗ, ಅವರನ್ನು ನಾವೆಲ್ಲರೂ ಗೆಳೆಯರಂತೆ ಕಂಡದ್ದಿದೆ.

 

ಈಗ, ದೇಶವು ಅತ್ತ ವಿದೇಶಿಯಾಗುತ್ತಲೇ ಇತ್ತ ದಿವಾಳಿಯಾಗುತ್ತಿದೆ. ಬಡವರು ಮತ್ತೂ ಮತ್ತೂ ಬಡವರಾಗುತ್ತಿದ್ದಾರೆ. ಕುವೆಂಪು ಅವರು ಕಲ್ಕಿ ಪದ್ಯದಲ್ಲಿ ವಿವರಿಸುವಂತೆ ಭಗವಂತನು ಕನಲಿ, ನಮ್ಮನ್ನೆಲ್ಲ ಬೆಂಕಿಯ ಕೂಪಕ್ಕೆ ತಳ್ಳ ತೊಡಗಿದ್ದಾನೆ. ಆದರೂ ನಾವು ಪಾಠ ಕಲಿಯುತ್ತಿಲ್ಲ. ಅದಾನಿ ಸಾಹೇಬರನ್ನು ವಿಶ್ವದ ನಾಲ್ಕನೆಯ ಅತಿ ಶ್ರೀಮಂತ ವ್ಯಕ್ತಿಯನ್ನಾಗಿಸುವುದೇ ಮೇಡ್ ಇನ್ ಇಂಡಿಯಾ, ಯಾನೆ ಸ್ವದೇಶಿ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದೇವೆ. ರಾಷ್ಟ್ರಧ್ವಜದಿಂದ ಗ್ರಾಮೀಣ ಬಡವರ ಸಂಕೇತ ಮಾತ್ರವಾಗಿ ಉಳಿದಿದ್ದ ಖಾದಿಯನ್ನೇ ಕಿತ್ತು ಹಾಕಿ, ಪ್ಲಾಸ್ಟಿಕ್ಕಿನ ಬಾವುಟವನ್ನು ಕಲ್ಪಿತ ಶತ್ರುಗಳ ವಿರುದ್ಧ ಬೀಸುತ್ತಿದ್ದೇವೆ. ಇಂದಿರಾ ಗಾಂಧಿಯವರು ಆನೆಯೇರಿ ದಲಿತರ ನರಮೇಧ ನಡೆದ ಬೆಲ್ಲಿಗೆ ತಲುಪಿದ ರೂಪಕವು ನನ್ನ ಕಣ್ಣ ಮುಂದೆ ಬರುತ್ತಿದೆ. ಇಂದಿರಾ ಗಾಂಧಿಯವರು, ಕನಿಷ್ಠ ಪಕ್ಷ ಬೆಲ್ಲಿಗೆ ಹೋದರು. ನಾವಿಂದು ಆನೆಯೇರಿ ವಿದೇಶಕ್ಕೆ ಹೊರಟ್ಟಿದ್ದೇವೆ, ಸೆಲ್ಫಿ ತೆಗೆಸಿಕೊಳ್ಳಲಿಕ್ಕೆಂದು.

 

ಪ್ರಿಯ ಗೆಳೆಯರೇ, ಮಹಾದೇವನಿಗೆ ಜೀವದ ಭಯವಿಲ್ಲ. ನೀವೊಮ್ಮೆ ಆತನನ್ನು ಕೊಂದರೆ, ಜೀವ ಭಯದಿಂದ ಗಡಗಡನೆ ನಡುಗಬೇಕಾದವರು ನಿಮ್ಮ ಭಕ್ತರು. ನಿಮ್ಮ ಗೆಳೆಯನಾದ್ದರಿಂದ, ನಿಮ್ಮೊಂದಿಗೆ ಒಡನಾಡಿ ಅನುಭವವಿರುವ ವ್ಯಕ್ತಿಯಾದ್ದರಿಂದ, ಒಂದು ಮಾತು ಹೇಳುತ್ತೇನೆ ಕೇಳಿ. ಸಿಟ್ಟಿಗೆ ಬುದ್ಧಿಕೊಟ್ಟು ಅವಾಂತರ ಮಾಡಿ, ಅನಂತರ, ನಾನು ಮಾಡಲೇ ಇಲ್ಲ ಎಂದು ಕೈ ಎತ್ತುವ ಚಟವಿದೆ ನಿಮಗೆ.

 

ಆದರೆ, ನೀವೇ ಪ್ರಭುಗಳಾಗಿರುವಾಗ, ನೀವೇ ದೇಶದ ನಿಯಮಕರಾಗಿರುವಾಗ ನೀವು ಹೀಗಿರಬಾರದು, ಗಾಂಧಾರಿಯು ಕುರುಕ್ಷೇತ್ರದ ಕತೆಯಲ್ಲಿ, ತನ್ನ ನೂರೂ ಮಕ್ಕಳು ಸತ್ತಾಗ, ಕೃಷ್ಣನ ಮೇಲೆ ಸಿಟ್ಟಾದಳಂತೆ. ಆಗ ಕೃಷ್ಣನು ಮಾತೆ, ಶಾಂತಳಾಗು ಎಂದು ವಿನೀತನಾಗಿ ನಮಸ್ಕರಿಸಿದನಂತೆ. ಹಾಗೂ ಅವಳು ನೀಡಿದ ಶಾಪವನ್ನು ಸ್ವೀಕರಿಸಿದನಂತೆ. ಆಡಳಿತ ಮಾಡುವವರು ಕೃಷ್ಣನಂತಿರಬೇಕೇ ಹೊರತು ಗಾಂಧಾರಿಯಂತಲ್ಲ !