ಜಾತಿಮಕ್ತ ಮನಸ್ಸುಗಳ ಸಮ್ಮಿಲನದಲ್ಲಿ-ದೇವನೂರ ಮಹಾದೇವ

ಮಂಡ್ಯದಲ್ಲಿ 9.5.2016 ರಂದು ನಡೆದ ಜಾತಿಮಕ್ತ ಮನಸ್ಸುಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡುತ್ತಿರುವ ದೇವನೂರ ಮಹಾದೇವ.
ಮಂಡ್ಯದ ರೈತಸಭಾಂಗಣದಲ್ಲಿ ವಿಶ್ವಮಾನವ ವಿಚಾರವೇದಿಕೆ ವತಿಯಿಂದ ನಡೆದ ಜಾತಿಮುಕ್ತ ಮನಸ್ಸುಗಳ ಸಮ್ಮಿಲನ – ಜಾತ್ಯತೀತ ಒಲವಿನವರ ಹಾಗೂ ಅಂತರ್ಜಾತಿ ಮತ್ತು ಅಂತರ್ಧರ್ಮಿಯ ವಿವಾಹಿತರ ರಾಜ್ಯಮಟ್ಟದ ಸಮಾವೇಶವನ್ನು ನಿವೃತ್ತ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಉದ್ಘಾಟಿಸಿದರು.
ಇದಕ್ಕೂ ಮುನ್ನ ಆಶಯ ನುಡಿಗಳನ್ನಾಡಿದ ಮೈಸೂರಿನ ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವರವರು……
ಸ್ನೇಹಿತರೆ,
ನಾನು ಯಾವತ್ತೂನು ಆಶಯ ಭಾಷಣ ಮಾಡಿದವನಲ್ಲ, ಇವತ್ತು ಮಾಡುತ್ತಿದ್ದೇನೆ. ನನ್ನ ಆಶಯ 2 ಪಟ್ಟಾಗಿದೆ. ಒಂದೇ ಊರಲ್ಲಿ, ಬಸವಣ್ಣ ಹುಟ್ಟಿದ ಇಂದು ಮಂಡ್ಯ ಡಬ್ಬಲ್ ಧಮಾಕ. ಹತ್ತಾರು ಸಂಘಟನೆಗಳು ಸೇರಿ 2 ಕಡೆ ಕಾರ್ಯಕ್ರಮ ಮಾಡುತ್ತಿವೆ. ನಾನು ಹೇಳುತ್ತೇನೆ. ಪ್ರತಿ ಗುಂಪು ಒಟ್ಟಾಗಿ ಮಾಡಬೇಡಿ ಪ್ರತ್ಯೇಕ ಪ್ರತ್ಯೇಕವಾಗಿಯೇ ಮಾಡಿ. ಯಾವುದಾದರೂ ಜಾತಿ ಶಾಪ ಕಳೆದುಕೊಳ್ಳಲು ಅಂತರ್ಜಾತಿ ವಿವಾಹ ಮಾಡಲು ಮುಂದಾದರೆ ಅದು ಅತ್ಯಂತ ಗೌರವಯುತವಾದುದು. ಅಂತಹುದೆ ನಡೆದರೆ ನಾನು ಅಲ್ಲಿರುತ್ತೇನೆ. ವರ್ಣಸಂಕರಕ್ಕೆ ಇದು ಅತ್ಯಗತ್ಯ. ಆದರೆ ಯಾರಾದರೂ ಪ್ರಚಾರ ಮಾಡುವವರು ಮೊದಲು ಮಾನವ ಮಂಟಪವನ್ನು ನೆನೆಯಬೇಕು. ಇದು ರೂಪು ಪಡೆಯಲು ಕೆ ರಾಮ್ದಾಸ್, ಎಚ್ ಗೋವಿಂದಯ್ಯ, ಸ್ವಾಮಿ ಆನಂದ್ ಇವರೆಲ್ಲರನ್ನೂ ನೆನಪಿಸಿಕೊಳ್ಳಬೇಕು ಎಂದರು.
ಈ ಪ್ರತ್ಯೇಕತೆ ಎಲ್ಲದಕ್ಕೂ ಸಲ್ಲುವುದಿಲ್ಲ. ಹಂಚಿಕೊಂಡು ತಿನ್ನುವ ಸಮಾಜವಾದಿಗಳು, ಪರಿಸರವಾದಿಗಳು, ಕಮ್ಯುನಿಷ್ಟರು ಸಮಾನತೆಗಾಗಿ ಒಟ್ಟಾಗಬೇಕಿದೆ. ಪ್ರಗತಿಪರರಲ್ಲಿ ಪರಸ್ಪರ ಕೂಡಿ ಮಾಡುವ ಮನಸ್ಥಿತಿ ಕಡಿಮೆ. ಆದರೆ ವಿಚಿತ್ರ ನೋಡಿ, ಸಮಾಜದಲ್ಲಿ ಬೇಧ ಬಯಸುವ ತಾರತಮ್ಯ ಉಂಟುಮಾಡುವು ಸನಾತನವನ್ನು ಬಯಸುವವರು ಅಧಿಕಾರಕ್ಕಾಗಿ ಒಟ್ಟುಕೂಡುತ್ತಾರೆ. ಆದರೆ ಪ್ರಗತಿಪರರು ದಾಯಾದಿಗಳಾಗಿದ್ದೇವೆ. ತಮ್ಮತಮ್ಮಲ್ಲೇ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳದಿದ್ದಲ್ಲಿ ಜನಕ್ಕೆ ಇವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಅನಿಸುತ್ತದೆ ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದರು.
ತಮ್ಮ ಮನೆಯ ಕುಡಿಯೊಂದು ಬೇರೆ ಜಾತಿಯ ಹುಡುಗನನ್ನ ಇಷ್ಟಪಟ್ಟ ಏಕೈಕ ಕಾರಣಕ್ಕೆ ಆಕೆಯನ್ನು ಕೊಲ್ಲುವುದು ಪೈಶಾಚಿಕ ಕೃತ್ಯವಾಗಿದೆ. ಇದಕ್ಕೆ ಕಾರಣ ಜಾತಿ ಪಿಶಾಚಿ ಮನಸ್ಸಿನ ಆಳದಲ್ಲಿ ಬೇರೂರಿದೆ. ಇದನ್ನು ಕಡಿಯುವ ಕೆಲಸ ಆರಂಭವಾಗಬೇಕು ಎಂದರು.
ಮೊನ್ನೆ ಮೊನ್ನೆ ಒಂದು ಯಜ್ಞ ಆಗಿತ್ತು. ಕಣ್ಣೆದುರು ಮೇಕೆ ಬಲಿ ನಡೆದರೂ ಒಬ್ಬರು ಇಲ್ಲವೇ ಇಲ್ಲ ಎಂದು ಓದುಗರ ಪತ್ರ ಬರೆದಿದ್ದಾರೆ. ಹಿಂದೇ ಹೀಗೆ ಎಷ್ಟು ನಡೆದಿರಬಹುದು. ಈ ರೀತಿಯ ಅಪಪ್ರಚಾರವನ್ನು ತಡೆಯಬೇಕು ಎಂದರು. ಬಲಾಢ್ಯನಾದ ಶಿವಾಜಿ ಗೆದ್ದು ರಾಜನಾದಾಗ ಪಟ್ಟಕ್ಕೆ ಏರಿಸಲು ಶೂದ್ರ ಎಂಬ ಕಾರಣಕ್ಕೆ ಬಿಡುವುದಿಲ್ಲ. ಆಗ ಪುರೋಹಿತನೊಬ್ಬ ಬಂದು ಹಿರಣ್ಯಗರ್ಭದಲ್ಲಿ ಕೂರಿಸಿ ಮಂತ್ರ ಹೇಳಿ ರಾಜನನ್ನಾಗಿ ಮಾಡುತ್ತಾನೆ. ಆದರೆ ಈ ಪುರೋಹಿತನನ್ನು ಇತತರು ರೇಗಿಸಿ ಕೆಟ್ಟ ಪದಗಳಿಂದ ಬೈಯುತ್ತಾರೆ. ಆದರೆ ಪೈಶಾಚಿಕ ಕಾಲವಾದ ಗುಪ್ತರ ಯುಗವನ್ನು ಸುವರ್ಣ ಯುಗ ಎನ್ನುತ್ತೇವೆ. ಇದಕ್ಕೆ ಏನು ಹೇಳೋಣ ಎಂದು ವಿಷಾಧಿಸಿದರು.
ಭಾರತದಲ್ಲಿ ವರ್ಣಸಂಕರವನ್ನು ತಡೆಗಟ್ಟಲು ಇರುವ ಕಾನೂನು ಕಟ್ಟಳೆಗಳು ಮತ್ಯಾವುದಕ್ಕೂ ಇಲ್ಲ. ಇದರ ಅರ್ಥ ಏನು? ಅಂದರೆ ವರ್ಣ ಸಂಕರ ಅತಿ ಹೆಚ್ಚು ನಡೆದಿದೆ ಎಂದರ್ಥ. ಭಾರತೀಯರಿಗೆ ನಮಗೆ ಹಲವು ಬಣ್ಣಗಳಿವೆ. ಸರಾಸರಿ ಕಂದು ಬಣ್ಣ. ನಮ್ಮ ಕಣ್ಣು ಹಸಿರು. ಇದು ಹೇಗೆ ಬಂತು? ಇದು ಸಂಕರದಿಂದ ಆಗಿರುವುದು. ಇದನ್ನು ಪುರೋಹಿತಶಾಹಿಗಳು ಕಂಡು ದ್ವೇಷ ಸಾಧಿಸುತ್ತಿದ್ದಾರೆ. ಇಂತಹ ಸಂಕರಗಳು ಹೆಚ್ಚು ಹೆಚ್ಚು ನಡೆಸೋಣ ಎಂದ ತಿಳಿಸಿದರು.
ಪ್ರೀತಿಸುವುದಕ್ಕೆ ಹೆತ್ತ ಮಕ್ಕಳನ್ನೇ ಕೊಂದವರಿಗೆ ಮಾದರಿ ಭಗವದ್ಗೀತೆಯಲ್ಲಿದೆ. ಕೃಷ್ಣ ವರ್ಣಸಂಕರದ ಪಿತಾಮಹಾ. ಆದರೆ ಭಗವದ್ಗೀತೆ ಇಂದು ವರ್ಣಸಂಕರಕ್ಕೆ ವಿರೋಧ ತಂದು ಭಾರತವನ್ನೇ ಚಿಂದಿ ಮಾಡುತ್ತಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದರು.
ಸ್ವೀಡನ್ನಲಿ ವಿಷಯಾಧಾರಿತವಾಗಿ ಹೋರಾಡುತ್ತಾರೆ. ನಮ್ಮ ಸಿದ್ದಿ ಜನಾಂಗದಲ್ಲಿ ಹಿಂದು ಮುಸ್ಲಿಂ, ಹೊಲೆಯ ಆದಿವಾಸಿ ಇತರರೆಲ್ಲಾ ಒಟ್ಟಿಗೆ ಒಂದೇ ಕುಟುಂಬದಲ್ಲಿ ವಾಸಿಸುತ್ತಾರೆ. ಅವರು ಧರ್ಮವನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆಯೇ ಹೊರತು ಅದರಿಂದ ಯಾವುದೇ ತೊಂದರೆ ಅವರಿಗಿಲ್ಲ. ಅವರಿಗೆ ಸಾಧ್ಯವಾಗಿದ್ದು ನಮಗೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
[ವಿಶ್ವಮಾನವ ವಿಚಾರವೇದಿಕೆ ವರದಿ]