ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಪುಂಡಲಿಕ ಹಾಲಂಬಿಯವರಿಗೆ ದೇವನೂರ ಮಹಾದೇವ ಅವರು ಬರೆದ ಬಹಿರಂಗ ಪತ್ರದ ಪೂರ್ಣಪಾಠ

[ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಪುಂಡಲಿಕ ಹಾಲಂಬಿಯವರಿಗೆ ದೇವನೂರ ಮಹಾದೇವ ಅವರು ಬರೆದ ಬಹಿರಂಗ ಪತ್ರದ ಪೂರ್ಣಪಾಠ 18/12/2014 [81ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆಗಾಗಿ 20.1.2015 ರಂದು ತಿದ್ದಿ ಬರೆದದ್ದು]

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೀತಿಯ ಶ್ರೀ ಪುಂಡಲೀಕ ಹಾಲಂಬಿಯವರಿಗೆ
ವಂದನೆಗಳು.

ಭಾರತದ ಸಂವಿಧಾನದಿಂದ ಅಂಗೀಕರಿಸಲ್ಪಟ್ಟ 22 ದೇಶೀ ಭಾಷೆಗಳು ಹಾಗೂ ದೇಶಾದ್ಯಾದಂತ ಇರುವ ಅನೇಕಾನೇಕ ಅಲ್ಪಸಂಖ್ಯಾತ ಭಾಷೆಗಳು ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಕಾಲು ಕತ್ತರಿಸಿಕೊಂಡು ಚಲನೆ ಇಲ್ಲದ ಸ್ಥಿತಿಗೆ ತಲುಪಿರುವ ಈ ಸಂದರ್ಭದಲ್ಲಿ ಏನು ಹೇಳುವುದು? ಹೇಗೆ ಹೇಳುವುದು?

ಯಾಕೆಂದರೆ ಸುಪ್ರೀಂಕೋರ್ಟ್‍ನಲ್ಲಿ ಭಾಷಾಮಾಧ್ಯಮದ ವಾದ-ವಿವಾದ ನಡೆಯುತ್ತಿದ್ದಾಗ ನ್ಯಾಯಾಧೀಶರೊಬ್ಬರು “ಡೆಲ್ಲಿಗೆ ಬಂದಿದ್ದ ಜಪಾನ್ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಇಂಗ್ಲಿಷ್‍ನಲ್ಲಿ ಮಾತಾಡಿದರು, ಅವರು ಇಂಗ್ಲಿಷ್‍ನಲ್ಲಿ ಮಾತಾಡದೇ ಹೋಗಿದ್ದರೆ ಯಾರಿಗೂ ತಿಳಿಯುತ್ತಿರಲಿಲ್ಲ, ಭಾಷೆಯ ಕುರಿತು ಮಡಿವಂತಿಕೆ ಹೊಂದಿದ್ದ ಚೈನಾದೇಶವೂ ಈಗೀಗ ಇಂಗ್ಲಿಷ್‍ನ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದೆ” ಎಂದದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಬಹಳ ಹಿಂದೆ ಕನ್ನಡಿಗರೊಬ್ಬರು ಇಂಗ್ಲೆಂಡ್‍ಗೆ ಹೋಗಿ ಬಂದು ‘ಅಬ್ಬಬ್ಬಾ ಇಂಗ್ಲೆಂಡ್‍ನಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಕೂಡ ಇಂಗ್ಲಿಷ್‍ನಲ್ಲಿ ಮಾತಾಡ್ತಾರೆ’ ಅಂದಿದ್ದ ಆ ಮುಗ್ಧತೆಯಂತೆಯೇ ಇದೂ ಕಾಣಿಸುತ್ತದೆ. ಇದರ ಬದಲು ಆ ಸುಪ್ರೀಂಕೋರ್ಟ್‍ನ ನ್ಯಾಯಾಧೀಶರು ‘ತಾನು ಭಾರತದ ಸರ್ವೋಚ್ಛ ನ್ಯಾಯಾಧೀಶ, ಅವರೂ ಜಪಾನ್‍ನ ಸರ್ವೋಚ್ಛ ನ್ಯಾಯಾಧೀಶರು, ಈಗ ತಮ್ಮ ಮುಂದೆ ಪ್ರಾಥಮಿಕ ಶಿಕ್ಷಣ ಮಾಧ್ಯಮ ವಿಚಾರ ಚರ್ಚೆಗೆ ಬಂದಿದೆ. ಜಪಾನ್‍ನಲ್ಲಿ ಹೇಗಿರಬಹುದು?’ ಎಂಬ ಕುತೂಹಲಕ್ಕಾದರೂ ಚರ್ಚಿಸಿದ್ದರೆ ಆಗ, ಜಪಾನ್‍ನಲ್ಲಿ ಹೆಚ್ಚುಕಮ್ಮಿ ಎಲ್ಲಾ ಶಾಲಾಕಾಲೇಜು ಉನ್ನತ ಶಿಕ್ಷಣದಲ್ಲೂ ಕೂಡಾ ಜಪಾನೀ ಭಾಷೆಯೇ ಶಿಕ್ಷಣ ಮಾಧ್ಯಮವಾಗಿದೆ ಎಂಬುದಾದರೂ ತಿಳಿದುಬರುತ್ತಿತ್ತು. ಹಾಗೇ ಚೈನಾದಲ್ಲೂ ಶಿಕ್ಷಣ ಮಾಧ್ಯಮವು ಅಲ್ಲಿನ ಮಾತೃಭಾಷೆಗಳಾದ ಮಂಡಾರಿನ್, ಮಂಗೋಲಿಯನ್, ಟಿಬೆಟಿಯನ್, ಕೊರಿಯನ್ ಭಾಷೆಗಳಲ್ಲಿ ಇದ್ದು ಚೈನಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಒಂದು ಭಾಷೆಯಾಗಿ ಇಂಗ್ಲಿಷ್, ಸ್ಪಾನಿಷ್ ಹೀಗೆ ಮಾರ್ಕೆಟ್‍ನ ಪ್ರಮುಖ ಭಾಷೆಗಳನ್ನೆಲ್ಲಾ ಕಲಿಸಲು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿರುವುದು ಗೋಚರಿಸುತ್ತಿತ್ತು. ಹೀಗೇ ದಕ್ಷಿಣ ಕೊರಿಯಾ, ಉತ್ತರ ಕೊರಿಯಾಗಳಲ್ಲಿ ಕೊರಿಯಾ ಭಾಷೆಯು ಉನ್ನತ ಶಿಕ್ಷಣದವರೆಗೂ ಶಿಕ್ಷಣ ಮಾಧ್ಯಮದ ಭಾಷೆಯಾಗಿದೆ. ಹೀಗೆಯೇ ಉನ್ನತ ಶಿಕ್ಷಣದವರೆಗೂ ಆಯಾ ದೇಶಗಳ ಮಾತೃಭಾಷೆಯೇ ಅಲ್ಲಿನ ಶಿಕ್ಷಣ ಮಾಧ್ಯಮವಾಗಿರುವ ಉದಾಹರಣೆ ಇನ್ನೂ ಬೇಕು ಎಂದರೆ ಕಾಂಬೋಡಿಯಾದಲ್ಲಿ ಖ್ಮೇರ್ ಭಾಷೆ, ವಿಯಟ್ನಾಮಿನಲ್ಲಿ ವಿಯಟ್ನಾಮೀಸ್ ಭಾಷೆ, ಥೈಲಾಂಡ್‍ನಲ್ಲಿ ಥಾಯ್ ಭಾಷೆ. ಇಸ್ರೇಲ್‍ನಲ್ಲ್ಲೂ ಯಹೂದಿಗಳ ಹೀಬ್ರೂ ಮಾತೃಭಾಷೆ, ನಾವು ಹೆಸರನ್ನೇ ಕೇಳರಿಯದ ಲಾವೋಸ್ ದೇಶದಲ್ಲಿ ಲಾವೋ ಭಾಷೆ, ಅಷ್ಟೇಕೆ, ಇನ್ನೂ ಒಂದು ಉದಾಹರಣೆ ಎಂದರೆ ವಸಾಹತುಶಾಹಿ ಆಡಳಿತದ ಮಲೇಷಿಯಾದಲ್ಲಿ ಇದ್ದ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಅಲ್ಲಿನ ಮಾತೃಭಾಷಾ ಶಿಕ್ಷಣ ಮಾಧ್ಯಮಕ್ಕೆ ಪರಿವರ್ತಿಸಲಾಗುತ್ತಿದೆ. ಸ್ವತಂತ್ರ ಮಲೇಷಿಯಾದ ಶಿಕ್ಷಣ ನೀತಿಯ ಕಾರಣವಾಗಿ ಅಲ್ಲಿನ ರಾಷ್ಟ್ರೀಯ ಶಾಲೆಗಳಲ್ಲಿ ‘ಬಹಾಸ ಮಲೇಷಿಯಾ’ ಮತ್ತು ಸ್ಥಳೀಯ ಶಾಲೆಗಳಲ್ಲಿ ಚೈನೀಸ್ ಮತ್ತು ತಮಿಳು, ಭಾಷಾಮಾಧ್ಯಮದಲ್ಲಿ ಗಣಿತ ಮತ್ತು ವಿಜ್ಞಾನಗಳನ್ನು ಬೋಧಿಸಲಾಗುತ್ತಿದೆ. ಇಲ್ಲಿ ಭಾರತದಲ್ಲಿ ತಮಿಳರು ‘ತಮಿಳ್ ತಮಿಳ್’ ಎಂದು ಎದೆಚಚ್ಚಿಕೊಂಡು ತಮಿಳು ಪದ ಉಚ್ಛಾರಣೆ ಮಾಡುವುದರಲ್ಲೇ ಸಂತೋಷಪಡುತ್ತಿದ್ದಾರೆ. ತಮಿಳು ಭಾಷೆಯಾದರೂ ಶಿಕ್ಷಣ ಮಾಧ್ಯಮವಾಗಿ ಬೆಳೆದಿದ್ದರೆ ಆ ನೆರಳಲ್ಲಿ ನಾವೂ ಬೆಳೆಯಬಹುದಿತ್ತು.

ಹೀಗೆಯೇ ಸ್ಕ್ಯಾಂಡಿನೇವಿಯನ್ ದೇಶಗಳು, ಜಿ-8 ದೇಶಗಳು ಹೀಗೆ ಸ್ವತಂತ್ರವಾಗಿರುವ ದೇಶಗಳಲ್ಲೆಲ್ಲಾ ಅವರವರ ಮಾತೃಭಾಷೆಯ ಶಿಕ್ಷಣ ಮಾಧ್ಯಮ ಉನ್ನತ ಶಿಕ್ಷಣದವರೆವಿಗೂ ಸಹಜ ಆಯ್ಕೆಯಾಗಿದೆ. ಕೆಲವು ಕಡೆ ಅಲ್ಪಸ್ವಲ್ಪ ಬದಲಾವಣೆ ಇರಬಹುದಷ್ಟೇ. ಇಲ್ಲಿ ಭಾರತದಲ್ಲಿ ಕೇವಲ ಪ್ರಾಥಮಿಕ ಶಿಕ್ಷಣದಲ್ಲ್ಲಾದರೂ ಮಾತೃಭಾಷಾ ಶಿಕ್ಷಣ ಮಾಧ್ಯಮಕ್ಕಾಗಿ ಇಲ್ಲಿನ ದೇಶೀ ಭಾಷೆಗಳು ತತ್ತರಿಸುತ್ತಾ ದೈನ್ಯವಾಗಿ ಯಾಚಿಸುತ್ತಿವೆ!

ಒಟ್ಟಿನಲ್ಲಿ ಯಾವ ಸ್ವತಂತ್ರ ದೇಶವೂ ತನ್ನ ಮಾತೃಭಾಷೆಗಳನ್ನು ಕೊಂದು ಪರಭಾಷೆಯನ್ನು ಸ್ವೀಕರಿಸಿಲ್ಲ. ತಮ್ಮ ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮ ಕೇಂದ್ರ ಮಾಡಿಕೊಂಡು ಪರಭಾಷೆಯನ್ನು ಒಂದು ಭಾಷೆಯಾಗಿ ಒಳಗೊಂಡು ಒಟ್ಟಾಗಿ ಜೊತೆಗೂಡಿ ಬೆಳೆಯುವ ಪ್ರಕ್ರಿಯೆ ಜಗತ್ತಿನಾದ್ಯಂತ ಜರುಗುತ್ತಿದೆ. ಅಷ್ಟೇಕೆ, ಕೆಲವು ದೇಶಗಳು ತಮ್ಮ ಆಂತರಿಕ ಸಂಕಷ್ಟಗಳಿಂದ ಜರ್ಜರಿತವಾಗಿ ನರಳುತ್ತ ಬಡ ರಾಷ್ಟ್ರಗಳಾಗಿದ್ದರೂ ಕೂಡ ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನು ತನ್ನ ಸಾರ್ವಭೌಮತೆಯ ಲಕ್ಷಣವನ್ನಾಗಿಸಿಕೊಂಡಿವೆ. ಹಾಗಾದರೆ ಭಾರತಕ್ಕೇನಾಗಿದೆ? ನಾವು ಗುಲಾಮಗಿರಿಯಿಂದ ಭೌತಿಕವಾಗಿ ಬಿಡುಗಡೆ ಹೊಂದಿದ್ದರೂ ಮಾನಸಿಕ ಗುಲಾಮಗಿರಿ ಸೋಂಕು ಇನ್ನೂ ಗುಣವಾಗಿಲ್ಲವೇನೋ.

ಇಂದು ಈ ಜಗತ್ತಿನ ಓಟ ಅಂದರೆ ಅಭಿವೃದ್ಧಿ ಮತ್ತು ಸ್ಪರ್ಧೆ – ಈ ದೃಷ್ಟಿಯಲ್ಲಿ ನೋಡಿದರೂ ಈ ಓಟದಲ್ಲಿ ದಾಪುಗಾಲು ಹಾಕುತ್ತಿರುವ ನಮ್ಮ ಥರಹದ ಸಂಕೀರ್ಣ ದೇಶಗಳಾದ ನಮ್ಮ ಥರಹದ ವೈವಿಧ್ಯತೆಯ ಸಂಕೀರ್ಣ ದೇಶಗಳಾದ ಅಕ್ಕಪಕ್ಕದ ಚೈನಾ, ಜಪಾನ್, ಕೊರಿಯಾ, ಥಾಯ್‍ಲೆಂಡ್ ದೇಶಗಳಲ್ಲಿ ಸಮಾನ ಮತ್ತು ಮಾತೃಭಾಷಾ ಶಿಕ್ಷಣ ಮಾಧ್ಯಮ ಇರುವುದಕ್ಕೂ ಅವುಗಳ ಅಭಿವೃದ್ಧಿ ಮತ್ತು ಸ್ಪರ್ಧೆ ಓಟಕ್ಕೂ ಸಂಬಂಧವಿರಬೇಕೇನೋ ಅನ್ನಿಸುತ್ತದೆ. ಯಾಕೆಂದರೆ ಮಾತೃಭಾಷಾ ಸಮಾನ ಶಿಕ್ಷಣ ಇದ್ದಲ್ಲಿ, ನಮ್ಮಂತಹ ಸಂಕೀರ್ಣ ದೇಶಗಳಲ್ಲಿ ಇಡೀ ಸಮುದಾಯದೊಳಗಿಂದ ಎಲ್ಲೆಲ್ಲಿಂದಲೋ ಯಾರ್ಯಾರೋ ಪ್ರತಿಭಾವಂತರು ಕುಶಲಿಗಳು ಹುಟ್ಟಿಕೊಂಡು ದೇಶದ ಸಂಪತ್ತಾಗುತ್ತಾರೆ. ಮನೆಮನೆಯಲ್ಲೂ ಜ್ಞಾನಾಧಾರಿತ ಕೌಶಲ್ಯ ಉಳ್ಳವರ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ. ಇಂಥವು ಯಾಕೆ ನಮ್ಮ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗಗಳಿಗೆ ಕಾಣುತ್ತಿಲ್ಲ? ಇದು ದೇಶಕೋಶ ತಿರುಗುವ ಐಟಿಬಿಟಿ ಮಂದಿಗಾದರೂ ಅವರ ಲಾಭದ ದೃಷ್ಟಿಯಿಂದಲಾದರೂ ಯಾಕೆ ಕಾಣಲಿಲ್ಲ?

ಇದು ಚಿದಂಬರ ರಹಸ್ಯವೇನೂ ಅಲ್ಲ. ಭಾರತವು ಹಿಂದೆ ಶೂದ್ರ ಸಮುದಾಯಕ್ಕೆ ಶಿಕ್ಷಣವನ್ನೇ ಕೊಡಬಾರದು ಎಂಬ ನಿರಾಕರಣೆಯನ್ನು ಮೀರಿ ಈಗ ಎಲ್ಲರಿಗೂ ಶಿಕ್ಷಣ ಎಂಬ ಮಾತನ್ನೇನೋ ಹೇಳುತ್ತಿದೆ. ಆದರೆ ಶಿಕ್ಷಣದೊಳಗೇ ತಾರತಮ್ಯದ ಜಾತಿ-ವರ್ಗ ರೋಗದ ಚಾತುರ್ವರ್ಣದ ಸ್ವಭಾವವಾದ ಪ್ರತ್ಯೇಕತೆ, ತಾರತಮ್ಯ ಉಳಿಸಿಕೊಂಡಿದೆ. 1963-64ರ ಕೊಠಾರಿ ಶಿಕ್ಷಣ ಆಯೋಗವು ಹೇಳಿದ್ದ “ಸಮಾನ ಶಿಕ್ಷಣ ಅನುಷ್ಠಾನ ಮಾಡದಿದ್ದರೆ ಶಿಕ್ಷಣವೇ ಸಾಮಾಜಿಕ ಪ್ರತ್ಯೇಕತೆ ಮತ್ತು ವರ್ಗಗಳನ್ನು ಹೆಚ್ಚಿಸಿ ಮತ್ತಷ್ಟು ಕಂದರ ಉಂಟುಮಾಡುತ್ತದೆ” ಎಂಬ ಮಾತು ನಮ್ಮೆದುರು ಇದ್ದೂ ಕೂಡಾ ಭಾರತ ಪಂಚವರ್ಣ ಶಿಕ್ಷಣವನ್ನು ನೀಡುತ್ತಿರುವುದು ಏನನ್ನು ಹೇಳುತ್ತದೆ? ಬಹುಶಃ ಭಾರತಕ್ಕೆ ತಾರತಮ್ಯ, ಪ್ರತ್ಯೇಕತೆ, ಮೇಲುಕೀಳು ಇಲ್ಲದಿದ್ದರೆ ನಿದ್ದೆ ಬರುವುದಿಲ್ಲವೇನೋ. ಒಂದು ಕಡೆ ಗುಲಾಮಗಿರಿಯ ಸೋಂಕು, ಇನ್ನೊಂದು ಕಡೆ ವರ್ಗ-ಜಾತಿಯ ಸೋಂಕು, ಇದು- ಕಾರ್ಯಾಂಗ, ರಾಜ್ಯಾಂಗ, ನ್ಯಾಯಾಂಗ ಅಂತ ಏನೇನು ಇದೆಯೋ ಅಲ್ಲೆಲ್ಲಾ ಈ ಅಂಟುರೋಗ ಅಂಟಿರಬೇಕು.

ಹಾಗಾಗೇ ಭಾರತದಲ್ಲಿ ಇಂದು ಕೂಡಾ ‘ಪಂಕ್ತಿಭೇದ ಶಿಕ್ಷಣಪದ್ಧತಿ’ ನಮ್ಮ ಮುಂದಿದೆ. ಜಾತಿ ತಾರತಮ್ಯದ ಭಾರತದಲ್ಲಿ ಎಳೆಯ ಮಕ್ಕಳ ಮನಸ್ಸು ಆಕಾರ ಪಡೆಯುವಾಗಲಿನ ಪ್ರಾಥಮಿಕ ಶಿಕ್ಷಣದಲ್ಲಾದರೂ ನಮ್ಮ ಎಲ್ಲಾ ಜಾತಿ ಜನಾಂಗ ಧರ್ಮ ವರ್ಗಗಳ ಎಳೆಯರು ಜೊತೆಗೂಡಿ ಒಡನಾಡುವುದೇ ಭಾರತಕ್ಕೆ ಬಲುದೊಡ್ಡ ಶಿಕ್ಷಣ ಎಂಬುದನ್ನು ಮನಗಾಣದೆ ಸೋಲುತ್ತಿದ್ದೇವೆ. ನೆರೆಹೊರೆ ಸಮಾನ ಮಾತೃಭಾಷಾ ಮಾಧ್ಯಮ ಶಿಕ್ಷಣ ಪದ್ಧತಿಯು ಪ್ರಾಥಮಿಕದಲ್ಲಿಲ್ಲದ ಕಾರಣವಾಗಿ – ಸರ್ಕಾರಿ ಶಾಲೆಗಳ ಗುಣಮಟ್ಟ ದಿನದಿನಾ ಕುಸಿಯುತ್ತಿದೆ. ಕಾರಣವನ್ನು ಬೇರೆಲ್ಲೋ ಹುಡುಕುತ್ತಿದ್ದೇವೆ. ನೆರೆಹೊರೆಯ ಸಮಾನ ಶಿಕ್ಷಣ ಪದ್ಧತಿ ಅನುಷ್ಠಾನಗೊಂಡರೆ ಆ ಶಾಲೆಗೆ ಹೇಳುವವರು ಕೇಳುವವರು ಸುತ್ತಲೂ ಹುಟ್ಟಿಕೊಂಡು ಆ ಕಳಪೆ ಶಾಲೆಯೂ ತಂತಾನೆ ಉನ್ನತೀಕರಣಗೊಳ್ಳುತ್ತದೆ. ಕಳಪೆ ಶಾಲಾ ಉನ್ನತೀಕರಣಕ್ಕೆ ಮತ್ಯಾವ ತರಬೇತಿ ಅನುಕೂಲಗಳೂ ಬೇಕಾಗಿಲ್ಲ. ಮಾತೃಭಾಷಾ ಮಾಧ್ಯಮದ ನೆರೆಹೊರೆ ಸಮಾನ ಶಿಕ್ಷಣ ಪದ್ಧತಿ ಜಾರಿಗೆ ಬಂದರೆ ಅಷ್ಟೇ ಸಾಕು. ಯಾಕೆಂದರೆ ಮಾತೃಭಾಷೆಯ ಪ್ರಾಥಮಿಕ ಸಮಾನ ನೆರೆಹೊರೆಯ ಶಿಕ್ಷಣ ಇಲ್ಲದ ಕಾರಣವಾಗಿ ಹಳ್ಳಿ ಮಕ್ಕಳು, ಗಲ್ಲಿ ಮಕ್ಕಳು, ತಳಸಮುದಾಯಗಳ ಮಕ್ಕಳು ಶಿಕ್ಷಣದಿಂದಲೇ ಉದುರಿ ಬೀಳುತ್ತಿದ್ದಾರೆ. ಹಾಗಾಗಿ ಈ ಅರೆಮನಸ್ಸಿನ ತೋರಿಕೆಯ ಶಿಕ್ಷಣ ಪದ್ಧತಿಯು ‘ಒಳಗೊಂಡು ಹೊರಹಾಕುವಿಕೆ’ಯ (Inclusive Exclusion) ಜಾತಿ-ವರ್ಗ ಸೋಂಕಿನ ಶಿಕ್ಷಣ ಪದ್ಧತಿಯಾಗಿಬಿಟ್ಟಿದೆ. ಇದು ಸೌಲಭ್ಯವಂಚಿತ ಮಕ್ಕಳು ಶಿಕ್ಷಣದಲ್ಲಿ ಮುಂದೆ ದಾಟದಂತೆ ಉದುರಿಸುತ್ತಿದೆ. ಈ ಫಿಲ್ಟರ್ ಕೆಲಸದಲ್ಲಿ ಇಂಗ್ಲಿಷ್ ಕೂಡಾ ಒಂದು ದೊಡ್ಡ ಫಿಲ್ಟರ್ ಆಗಿ ಭಾಗಿಯಾಗಿದೆ.

ಈಗ ನ್ಯಾಯದ ಕಡೆಗೆ ನೋಡಿದರೂ ಆಸೆ, ಭರವಸೆಗಳು ಕ್ಷೀಣವಾಗಿವೆ. ಪ್ರಾಥಮಿಕ ಶಿಕ್ಷಣ ಮಾಧ್ಯಮದ ತೀರ್ಪು ನೀಡುತ್ತಾ ನಮ್ಮ ಸರ್ವೋಚ್ಛ ನ್ಯಾಯಾಲಯವು ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಸಂವಿಧಾನದ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಳುಕು ಹಾಕಿ ಮೂಲಭೂತ ಹಕ್ಕನ್ನು ಕಿತ್ತು ಹೋಗುವಷ್ಟು ಹಿಗ್ಗಾಮುಗ್ಗಾ ಎಳೆದುಬಿಟ್ಟಿದೆ! ಸ್ವಾತಂತ್ರ್ಯವನ್ನು ಹಿಗ್ಗಾಮುಗ್ಗಾ ಎಳೆದುಬಿಟ್ಟರೆ ಅದು ಸ್ವೇಚ್ಛೆಯಾಗುವುದಿಲ್ಲವೇ? ಈ ಎಚ್ಚರಿಕೆ ನಮಗೆ ಬೇಕಾಗಿತ್ತು. ಶಿಷ್ಟವಾಗಿ ಕಲಿಯುವ ಮುನ್ನ ತಾನು ಹುಟ್ಟಿದ ಪರಿಸರದೊಳಗಿನಿಂದ ಒಂದು ಮಗುವಿನೊಳಗೆ ಒಡಮೂಡುವ ಭಾಷೆಯೇ ಮಾತೃಭಾಷೆ—ಎಂಬುದನ್ನು ಚರ್ಚಿಸಿ ತಿಳಿದುಕೊಳ್ಳಬೇಕಾದ ಅಮಾಯಕ ಪರಿಸ್ಥಿತಿಯಲ್ಲಿ ನಾವಿರುವಾಗ ಏನು ಬೇಕಾದರೂ ಆಗಬಹುದು! ಹಾಗೆಯೇ ಆಗಿದೆ. ಪ್ರಾಥಮಿಕ ಶಿಕ್ಷಣ ಮಾಧ್ಯಮದ ಆಯ್ಕೆ—ಮಗುವಿಗೆ, ಆ ಮಗುವಿನ ಪರವಾಗಿ ಮಗುವಿನ ಪೋಷಕರಿಗೆ ಸೇರಿದೆ ಎಂದು ನಮ್ಮ ಸರ್ವೋಚ್ಛ ನ್ಯಾಯಾಲಯವು ತೀರ್ಪಿತ್ತಿದೆ. ಗೊತ್ತಿರುವುದರಿಂದ ಗೊತ್ತಿಲ್ಲದ್ದರ ಕಡೆಗೆ (ನೋನ್ ಟು ಅನ್‍ನೋನ್) ಕ್ರಮಿಸುವುದು—ಇದು ಶಿಕ್ಷಣದ ಪ್ರಾಥಮಿಕ ತಿಳಿವಳಿಕೆ. ಇದನ್ನಾದರೂ ನಮ್ಮ ನ್ಯಾಯಾಲಯ ಲಕ್ಷಿಸಬೇಕಾಗಿತ್ತು. ಆಗ ಆಯ್ಕೆಯ ಪ್ರಶ್ನೆ ಬರುತ್ತಿರಲಿಲ್ಲ. ಮಗುವು ತನ್ನೊಳಗೆ ಒಡಮೂಡಿದ ಭಾಷೆಯಲ್ಲಿ ಓದು ಬರಹವನ್ನು ಸಹಜ ಸುಲಭವಾಗಿ ಕಲಿತ ಮೇಲೆ ಆನಂತರ ಶಿಷ್ಟವಾಗಿ ಕಲಿಯಬಹುದಾದ ಎರಡನೆಯ ಭಾಷೆಯ ಪ್ರಶ್ನೆ ಬರುತ್ತಿತ್ತು. ಪ್ರಾಥಮಿಕದ ಆನಂತರದ ಶಿಕ್ಷಣದಲ್ಲಿ ಅಗತ್ಯವಿರುವ ಕಡೆ ಕಲಿತ ಭಾಷೆಯಲ್ಲಿನ ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಅರ್ಥಮಾಡಿಕೊಳ್ಳಬಹುದಿತ್ತು. ಇದು ಶಿಕ್ಷಣದ ವಿವೇಕ. ನಮ್ಮ ನ್ಯಾಯಾಲಯ ಇದನ್ನು ಧ್ವಂಸ ಮಾಡಿಬಿಟ್ಟಿತು.

ಹಾಗೆಯೇ ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಮುಂಬರುವ ಅಪಾಯವನ್ನೂ ಮನಗಂಡು ಅಂದರೆ ರಾಜ್ಯಭಾಷೆಗಳು ಪಾಳೆಗಾರರಂತೆ ವರ್ತಿಸುತ್ತಾ ಆಯಾ ರಾಜ್ಯದೊಳಗೆ ಬರುವ ಹತ್ತಾರು ಮಾತೃಭಾಷೆ (ಉದಾ: ಕರ್ನಾಟಕದಲ್ಲಿ ತುಳು, ಉರ್ದು, ಕೊಂಕಣಿ, ಮರಾಠಿ, ತಮಿಳು, ತೆಲುಗು, ಕೊಡವ ಇತ್ಯಾದಿ)ಗಳನ್ನು ಕತ್ತು ಹಿಸುಕಿ ಬಿಡುತ್ತವೆ ಎಂಬ ಆತಂಕದಿಂದ ಅಲ್ಪಸಂಖ್ಯಾತ ಭಾಷೆಗಳ ರಕ್ಷಣೆಗೆ ಕತ್ತಿಯಂತೆ ಕೊಟ್ಟ ವಿಧಿಗಳನ್ನು ಬಳಸಿಯೇ ಆ ಅಲ್ಪಸಂಖ್ಯಾತ ಭಾಷೆಗಳನ್ನೂ ಜೊತೆಗೇ ಎಲ್ಲಾ ದೇಶಿ ಭಾಷೆಗಳನ್ನು ಕೊಲ್ಲಲು ಬಳಸಿದಂತಾಗಿಬಿಟ್ಟಿದೆ! ಉಳಿಗಾಲವಿಲ್ಲ.

ಹೀಗಿರುವಾಗ ನಾವು ಯಾವ ಕಡೆ ನೋಡಬೇಕು? ಈಗ ಪಾರ್ಲಿಮೆಂಟ್‍ಗೇ ಚಾಟಿ ಬೀಸಬೇಕಾಗಿದೆ. ಜನಾಂದೋಲನ, ರಾಜಕೀಯದ ಮೇಲೆ ಒತ್ತಡ ವ್ಯಾಪಕವಾಗಬೇಕಾಗಿದೆ. ಸಾಹಿತ್ಯ ಪರಿಷತ್‍ನಿಂದಲೂ ಈ ನಡೆಯನ್ನೇ ನಿರೀಕ್ಷಿಸುತ್ತೇನೆ. ಪರಿಷತ್ತಿಗೆ ನೂರು ವರ್ಷಗಳ ಹಿರಿಮೆ ಜತೆ ನೂರು ವರ್ಷದ ಜಡ್ಡೂ ಇರಬಹುದು. ಆದರೆ ಜೀವವಿದೆ. ಪೊರೆ ಕಳಚಬೇಕಾಗಿದೆ ಅಷ್ಟೇ. ಆಗ ಮಾತ್ರ – ಮಾನಸಿಕ ರೋಗಿಗಳು ಗುಣಮುಖರಾಗಲು ಕರೆಂಟ್ ಷಾಕ್ ಕೊಡುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ಯವಾಗಬಹುದು.

ಸಾಹಿತ್ಯ ಪರಿಷತ್ ಹೊಸ ಹುಟ್ಟು ಪಡೆದರೆ ಅದಕ್ಕೆ ಪೂರಕ ವಾತಾವರಣ ಈಗ ಕರ್ನಾಟಕ ರಾಜ್ಯದಲ್ಲಿ ಇದೆ. ಯಾಕೆಂದರೆ ನನ್ನಷ್ಟೇ ಅಥವಾ ನಿಮ್ಮಷ್ಟೆ ಮಾತೃಭಾಷೆ ಪ್ರಾಥಮಿಕ ನೆರೆಹೊರೆ ಸಮಾನಶಿಕ್ಷಣದ ಕಳಕಳಿ ಇರುವ ಮುಖ್ಯಮಂತ್ರಿಗಳನ್ನು ಈ ರಾಜ್ಯ ಈಗ ಪಡೆದಿದೆ. ಬಹುಶಃ ಹಿಂದೆ ಇಂಥ ಸಂದರ್ಭ ಇರಲಿಲ್ಲ ಎನ್ನಬಹುದು. ಹಾಗೇ ಮುಂದೆ ಗೊತ್ತಿಲ್ಲ. ಶ್ರೀ ಸಿದ್ದರಾಮಯ್ಯ, ಶ್ರೀ ನಿತೀಶ್‍ಕುಮಾರ್‍ರಂಥ ಮುಖ್ಯಮಂತ್ರಿಗಳು ಮುಖವಾಡ ಇಲ್ಲದವರು, ಹೃತ್ಪೂರ್ವಕತೆ ಇರುವವರು ಜೊತೆಗೆ ಧೈರ್ಯವಂತರೂ ಕೂಡ. ಹಾಗಾಗಿ ಈ ರಾಜಕಾರಣದೊಳಗೂ ಇಂಥವರಿಂದ ಒಂದಿಷ್ಟು ನಿರೀಕ್ಷಿಸಬಹುದು. ಇಂಥವರಿಗೆ ಪಂಕ್ತಿಬೇಧವೂ ಗೊತ್ತು. ನೆರೆಹೊರೆ ಸಮಾನ ಮಾತೃಭಾಷಾ ಪ್ರಾಥಮಿಕ ಶಿಕ್ಷಣವಿಲ್ಲದ ಕಾರಣವಾಗಿ ಹಳ್ಳಿಮಕ್ಕಳು, ಗಲ್ಲಿಮಕ್ಕಳು, ತಳಸಮುದಾಯದ ಮಕ್ಕಳು ಶಿಕ್ಷಣದಿಂದಲೇ ಉದುರಿಹೋಗುತ್ತಿರುವುದೂ ಗೊತ್ತು. ಈ ಸಂದರ್ಭದಲ್ಲಿ ಈಗ ಸಾಹಿತ್ಯಪರಿಷತ್ ಧೈರ್ಯ ಮಾಡಿ ಹೊಸ ಹುಟ್ಟು ಪಡೆದು ಸರ್ಕಾರಕ್ಕೆ ಸವಾಲೆಸೆದರೆ ಒಂದಿಷ್ಟು ಬದಲಾವಣೆ ಆಗಲೂಬಹುದು. ಹೊಸ ಸಾಧ್ಯತೆಗಳು ಗೋಚರಿಸಲೂಬಹುದು.

ಅದಕ್ಕಾಗಿ, ಸಂವಿಧಾನ ತಿದ್ದುಪಡಿಗೆ ರಾಜಕೀಯ ಒತ್ತಡವನ್ನು ನಿರಂತರವಾಗಿ ಉಂಟು ಮಾಡುತ್ತಾ, ಜೊತೆಗೆ ಇಂಗ್ಲಿಷ್ ಅನ್ನು ಒಂದನೇ ತರಗತಿಯಿಂದಲೇ ಒಂದು ಕಲಿಕೆಯ ಭಾಷೆಯಾಗಿ ಒಪ್ಪಿಕೊಂಡು ಚರ್ಚಿಸಬಹುದಾದ ಒಂದಿಷ್ಟು ಸಾಧ್ಯತೆಗಳನ್ನು ಮುಂದಿಡುವೆ: ನಮ್ಮ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯಿದ್ದರೆ ಅದರ ವ್ಯಾಪ್ತಿಯಲ್ಲೇ ಸಾಧ್ಯತೆ ಇರುವ ಅಂಶಗಳನ್ನಷ್ಟೇ ಚರ್ಚೆಗೆ ಮುಂದಿಟ್ಟಿರುವೆ.

1. ಭಾರತವನ್ನು ಐಕ್ಯಗೊಳಿಸಲು ಹಾಗೂ ಶಿಕ್ಷಣ ಗುಣಮಟ್ಟವನ್ನು ಉನ್ನತಗೊಳಿಸಲು ಪೂರಕವಾದ ನೆರೆಹೊರೆ ಶಿಕ್ಷಣವನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. “ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ”ಯ ಆಶಯವನ್ನು ಅನುಷ್ಠಾನಕ್ಕೆ ತರುವುದನ್ನಷ್ಟೇ ಇಲ್ಲಿ ಕೇಳುತ್ತಿರುವುದು. ಇದಕ್ಕಾಗಿ ಮಕ್ಕಳ ಪ್ರವೇಶಾತಿಯನ್ನು ಆಯಾ ಶಿಕ್ಷಣ ಸಂಸ್ಥೆಗಳಿಗೆ ವಹಿಸಿಕೊಟ್ಟು ದಂಧೆಗೆ ಅವಕಾಶ ನೀಡಬಾರದು. ಬದಲಿಗೆ ಆ ಪ್ರದೇಶದ ಶಿಕ್ಷಣ ಅಧಿಕಾರಿ, ಚುನಾಯಿತ ಪ್ರತಿನಿಧಿ ಹಾಗೂ ಪೋಷಕರ ಸಮಿತಿ ಸಮ್ಮುಖದಲ್ಲಿ – ಲಾಟರಿ ವ್ಯವಸ್ಥೆ ಮೂಲಕ ಶಾಲಾವಿದ್ಯಾರ್ಥಿಗಳ ಪ್ರವೇಶ ಹಂಚಿಕೆ ನಿರ್ಧರಿಸಬೇಕು.

2. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ 51ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಇರುವಂತೆ ತಿದ್ದುಪಡಿಯಾಗಬೇಕು.

3. ಖಾಸಗಿ (ಅನುದಾನ ಸಹಿತ-ರಹಿತ) ಶಿಕ್ಷಣ ಸಂಸ್ಥೆಗಳು ಸರ್ಕಾರದ ಏಜೆನ್ಸಿಯಂತೆ ಕಾರ್ಯನಿರ್ವಹಿಸುವಂತಹ ಕಾನೂನು ರೂಪಿಸಲು ಒತ್ತಾಯಿಸಬೇಕು.

4. ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ -ಕಲಂ 29 (ಎಫ್)ನಲ್ಲಿ   medium of instructions shall, as for as practicable, be in child`s mother tongue;  -ಎಂದಿದೆ. ಇಲ್ಲಿ as for as practicable   ಎಂದು ಇರುವುದು ಮಾತೃಭಾಷಾ ಶಿಕ್ಷಣ ಮಾಧ್ಯಮಕ್ಕೆ ತೊಡರುಗಾಲಾಗಿದೆ. ಆದ್ದರಿಂದ  as for as practicable  ಅನ್ನುವುದನ್ನು ಕಿತ್ತು ಹಾಕಿ ‘ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ಸಂವಿಧಾನದಿಂದ ಅಂಗೀಕರಿಸಲ್ಪಟ್ಟ ಇಪ್ಪತ್ತೆರಡು ಭಾಷೆಗಳಲ್ಲಿ ಯಾವುದಾದರೂ ಒಂದು, ಶಿಕ್ಷಣಮಾಧ್ಯಮ’ ಎಂದು ಆಯ್ಕೆ ನೀಡುವ ಕಾನೂನು ರೂಪಿಸುವಂತಾಗಲು ನಮ್ಮ ಶಾಸಕಾಂಗವನ್ನು ಒತ್ತಾಯಿಸಬೇಕಾಗಿದೆ.

5. ಮಕ್ಕಳ ಮನಸ್ಸು ಆಕಾರ ಪಡೆಯುವ ಅಂಗನವಾಡಿಯಿಂದ ಮೂರನೇ ತರಗತಿಯವರೆಗೆ ಆಯಾ ರಾಜ್ಯದ ಮಾತೃಭಾಷೆಗಳಲ್ಲಿ ಅಂದರೆ ಮಗುವಿನೊಳಗೆ ಪರಿಸರದಿಂದ ಒಡಮೂಡಿ ಉಂಟಾದ ಭಾಷೆಗಳಲ್ಲಿ (ಉದಾ: ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಭಾಷೆಗಳಾದ ತುಳು, ಕೊಂಕಣಿ, ಮರಾಠೀ, ಉರ್ದು, ತಮಿಳು, ಇತ್ಯಾದಿಗಳೊಡನೆ ಸಂವಿಧಾನ ಅಂಗೀಕರಿಸಲ್ಪಟ್ಟ ಭಾಷೆ ಕನ್ನಡವೂ ಸೇರಿದಂತೆ) ಶಿಕ್ಷಣ ಮಾಧ್ಯಮ; ಮುಂದಿನ ಪ್ರಾಥಮಿಕ ಶಿಕ್ಷಣದಲ್ಲಿ ಅಪೇಕ್ಷೆ ಪಟ್ಟವರಿಗೆ ಸಂವಿಧಾನದಿಂದ ಅಂಗೀಕರಿಸಲ್ಪಟ್ಟ ಭಾಷೆಗಳಲ್ಲಿ ಶಿಕ್ಷಣಮಾಧ್ಯಮ ಜಾರಿಯಾಗಲು ಒತ್ತಾಯಿಸಬೇಕು.

6. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಮುಚ್ಚಿರುವ ಶಾಲೆಗಳನ್ನು ಬೇರೆ ಉದ್ದೇಶಕ್ಕೆ ವಹಿಸಿಕೊಡುವುದು ಅಥವಾ ಪರಭಾರೆ ಮಾಡಬಾರದು. ಖಾಸಗಿ ಶಿಕ್ಷಣಸಂಸ್ಥೆಗಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಅನುಮತಿ ನೀಡದೇ ಸಾರ್ವಜನಿಕ ಶಾಲೆಗಳನ್ನೇ ಹೆಚ್ಚು ಮಾಡಬೇಕು.

7. ಭಾರತಕ್ಕೆ ಎಲ್ಲಾ ಜಾತಿ, ವರ್ಗ, ಧರ್ಮಗಳ ಮಕ್ಕಳು ಒಡನಾಡುವಂತಾಗುವುದೇ ಬಲುದೊಡ್ಡ ಶಿಕ್ಷಣವಾಗುವುದರಿಂದ, ಭಾರತದ ಐಕ್ಯತೆಯ ದೃಷ್ಟಿಯಿಂದ ಹಾಗೂ ಸಂವಿಧಾನದ ಆಶಯದಂತೆ ನಾಳಿನ ಭಾರತವನ್ನು ಕಟ್ಟಲೋಸುಗ- ಪ್ರಾಥಮಿಕ ಶಿಕ್ಷಣದಲ್ಲಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಕೋಟಾವನ್ನು ಶೇಕಡಾ 50ಕ್ಕೆ ಏರಿಸಿ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಕಾನೂನು ರೂಪಿಸಲು ಒತ್ತಾಯಿಸಬೇಕು.

ಇಂಥವು. ಇವುಗಳೇ ಅಂಥೇನಲ್ಲ. ಆದರೆ ಮನವಿ ಮಾಡಿದರೆ ತಂತಾನೇ ಯಾವುದೂ ಈಡೇರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಪೊರೆ ಕಳಚಿಕೊಂಡು ಎಲ್ಲರನ್ನು ಒಡಗೂಡಿ ಹೋರಾಡಿದರೆ ಒಂದಿಷ್ಟು ಈಡೇರಬಹುದು. ಹೀಗಿರುವಾಗ ಯಥಾಸ್ಥಿತಿಯಲ್ಲಿ ಯಾಂತ್ರಿಕವಾಗಿ ಜರುಗುತ್ತಿರುವ ಸಮ್ಮೇಳನಗಳಲ್ಲಿ ಭಾಗವಹಿಸುವುದಕ್ಕೆ ನನ್ನ ಮನಸ್ಸು ಹಿಂದೆಗೆಯುತ್ತದೆ. ಪರಿಷತ್ ಪೊರೆ ಕಳಚಿ ನಿಂತರೆ ನಾನೂ ಜೊತೆಗೂಡುತ್ತೇನೆ. ಅಷ್ಟೇ ಅಲ್ಲ ಭಾರತದ ಅನಾಥ ಅಬ್ಬೇಪಾರಿ ದೇಶೀ ಭಾಷೆಗಳ ಪ್ರಜ್ಞಾವಂತರೂ ತಮ್ಮೊಡನೆ ಜೊತೆಗೂಡುತ್ತಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಲು ನಾನು ಸಮ್ಮತಿಸುತ್ತಿಲ್ಲ. ಇದರಿಂದ ಸಾಹಿತ್ಯ ಪರಿಷತ್‍ನ ಒಂದು ಹಲ್ಲಿಗೆ ನೋವು ಮಾಡಿಬಿಟ್ಟಿರುವೆ! ಈ ನೋವಿನ ಕಡೆಗೆ ಪರಿಷತ್‍ನ ಹಾಗೂ ದೇಶಿ ಭಾಷಿಗರ ನಾಲಿಗೆಯು ಆಗಾಗಲಾದರೂ ಹೊರಳುತ್ತಿರಲಿ ಎಂಬ ಆಸೆಯಿಂದ. ಇದರಿಂದಲೂ ಒಂದಿಷ್ಟು ಸಾಧ್ಯತೆಗಳು ಹುಟ್ಟಬಹುದೇನೋ ಎಂಬ ಆಸೆಯಿಂದ.

(ದೇವನೂರ ಮಹಾದೇವ)
18/12/2014