ಅಂಗನವಾಡಿ_ಅಮ್ಮಂದಿರ_ಹೋರಾಟದಹಾದಿ-ಬರಗೂರು_ರಾಮಚಂದ್ರಪ್ಪ

 

 

ಮಾರ್ಚ್‌ ೨೦ರಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೃಹತ್‌ ಪ್ರತಿಭಟನೆ ಆರಂಭವಾಗಿ ಐದಾರು ದಿನಗಳ ಕಾಲ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಂಕಿಯಲ್ಲಿ ಅರಳಿದ ಹೂಗಳ ಅನುಭವಕ್ಕೆ ಕಾರಣವಾಯಿತು. ಇಲ್ಲಿ ಸೇರಿದ್ದವರೆಲ್ಲ ಅಂಗನವಾಡಿಯ ಅಮ್ಮಂದಿರು. ಬೇರೆಯವರ ಮಕ್ಕಳಿಗೆ ತಾಯ್ತನದ ಆರೈಕೆ ಮಾಡುವ ಅಂತಃಕರಣರೂಪಿಗಳು. ಇವರ ಹೋರಾಟವನ್ನು ಸಂಘಟಿಸಿದ ಸಂಸ್ಥೆಗೆ (ಸಿಐಟಿಯು) ಓಟಿನ ಲೆಕ್ಕಾಚಾರವಿರಲಿಲ್ಲ. ಎಡಪಕ್ಷವೊಂದರ ಅಂಗಸಂಸ್ಥೆಯಾದ ಇದು ಅಂಗನವಾಡಿಯ ಮೂಲಕ ಓಟು ಗಿಟ್ಟಿಸಿಕೊಳ್ಳುವ ಗಿಲೀಟು ಮಾಡಲು ಸಾಧ್ಯವೇ ಇರಲಿಲ್ಲ. ಮೊದಲನೆಯದಾಗಿ ಹೋರಾಟಕ್ಕೆ ಬಂದವರೆಲ್ಲ ಹೋರಾಟ ಸಂಘಟಿಸಿದವರಿಗೇ ಓಟು ಹಾಕುತ್ತಾರೆಂಬ ನಂಬಿಕೆಯಿಲ್ಲ. ಎರಡನೆಯದಾಗಿ ಇಡೀ ದೇಶದಲ್ಲೇ ಎಡಪಕ್ಷಗಳು ದುಃಸ್ಥಿತಿಯಲ್ಲಿದ್ದು, ಕರ್ನಾಟಕದಲ್ಲಂತೂ ಸ್ವಯಂಶಕ್ತಿಯಿಂದ ಯಾವ ಕ್ಷೇತ್ರದಲ್ಲೂ ಗೆಲ್ಲುವ ಸ್ಥಿತಿಯಿಲ್ಲ. ಇದು ಕಟುವಾಸ್ತವ. ಆದರೆ ಎಡಪಕ್ಷಗಳಿಗೆ ಓಟಿನ ರಾಜಕೀಯವೇ ಸದಾ ಆದ್ಯತೆಯಲ್ಲ. ಚಳವಳಿಯ ಆಯಾಮವನ್ನು ಬಿಟ್ಟುಕೊಡದ ಗುಣದಿಂದ ಗೆಲ್ಲಲಿ ಸೋಲಲಿ ಹೋರಾಟಗಳಿಂದ ಹಿಮ್ಮೆಟ್ಟುವುದಿಲ್ಲ. ಆದ್ದರಿಂದ ರೈತ, ಕಾರ್ಮಿಕ ಚಳವಳಿಗಳು ಚುನಾವಣೆಯ ರಾಜಕೀಯದ ಲಾಭ ಪಡೆಯುವುದು ಅಷ್ಟರಲ್ಲೇ ಇದೆ. ಲೆನಿನ್‌ ಆದಿಯಾಗಿ ಕೆಲವು ಕೆಂಪು ನಾಯಕರು ಚಳವಳಿಗಳು ಬೇಡಿಕೆಗಳಿಗಷ್ಟೇ ಸಿಮಿತವಾಗಬಾರದೆಂದೂ ದುಡಿಯುವವರ ಪರವಾದ ತಾತ್ವಿಕ ತಳಹದಿಯಾಗಬೇಕೆಂದು ಹೇಳುತ್ತಾ ಬಂದರೂ ಬೇಡಿಕೆಗಳೇ ಮುಖ್ಯವಾದ ಹೋರಾಟಗಳೇ ವಾಸ್ತವವಾಗುತ್ತಿವೆ. ಆದರೆ ಈ ಹೋರಾಟದ ಸಂಘಟನಾ ಸಂಸ್ಥೆಗಳಿಗೆ ಓಟಿನ ರಾಜಕೀಯ ಮುಖ್ಯವಾಗಿಲ್ಲವೆನ್ನುವುದೇ ಒಂದು ನಿಸ್ವಾರ್ಥನೆಲೆಯಾಗಿದೆ: ಹೋರಾಟಗಳನ್ನು ಸೈದ್ಧಾಂತಿಕವಾಗಿ ಜೀವಂತವಾಗಿಡಬೇಕೆಂಬ ಹಂಬಲವೇ ಅಂತಃಶಕ್ತಿಯಾಗಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ ಕರ್ನಾಟಕದಲ್ಲಿ ವಿವಿಧ ಸಂಘಟನೆಗಳು ರೂಪಿಸುತ್ತ ಬಂದಿರುವ ಅಂಗನವಾಡಿ ಹೋರಾಟ.

ಹಾಗೆ ನೋಡಿದರೆ, ಅಂಗನವಾಡಿ ಪರಿಕಲ್ಪನೆಯೇ ಅನೇಕ ಅನಿಷ್ಟಗಳ ವಿರುದ್ಧದ ಹೋರಾಟ. ಅಂಗನವಾಡಿಗಳು ರೂಪು ತಳೆಯುವುದಕ್ಕೆ ಕಾರಣವಾದದ್ದು ನಮ್ಮ ದೇಶದ ಮಕ್ಕಳು, ಮಹಿಳೆಯರು ಅನುಭವಿಸುತ್ತ ಬಂದ ಅಪೌಷ್ಟಿಕತೆಯ ಅನಿಷ್ಟ. ಇದು ಆರೋಗ್ಯಕ್ಕೆ ಸಂಬಂಧಿಸಿದ್ದಾದರೂ ಸಾಮಾಜಿಕ -ಆರ್ಥಿಕ ಅಸಮಾನತೆಯ ಆಯಾಮವನ್ನು ಒಳಗೊಂಡಿದೆ. ಯಾವ ದೇಶದಲ್ಲಿ ಮಾನವ ಅಭಿವೃದ್ಧಿಗೆ ಆದ್ಯತೆಯಿರುವುದಿಲ್ಲವೊ ಅಲ್ಲಿ ಅಪೌಷ್ಟಿಕತೆ, ಅನಾರೋಗ್ಯ, ಅಸಮಾನತೆಗಳ ಅನಿಷ್ಟಗಳು ಕಾಡುತ್ತಲೇ ಇರುತ್ತವೆ. ಅದರಲ್ಲೂ ಈ ಅನಿಷ್ಟಗಳು ಬಡವರ ಬದುಕಿನ ಬೆಂಕಿ ಬಾಣಲೆಯಾಗಿ ಸುಡುತ್ತಾ ಬರುತ್ತವೆ. ಇದನ್ನು ಮನಗಂಡ ಕೇಂದ್ರ ಸರಕಾರವು ೧೯೭೪ರಲ್ಲಿ ಮಕ್ಕಳ ಬಗ್ಗೆ ರಾಷ್ಟ್ರೀಯ ನೀತಿಯನ್ನು ಅಂಗೀಕರಿಸಿತು. ಅಪಾಯಕಾರಿ ಮಟ್ಟದ ಶಿಶುಮರಣ ಮತ್ತು ಜನನ ಪೂರ್ವ ಸಂಕಷ್ಟಗಳ ನಿವಾರಣೆ ಮಾಡಿ ಸಾಮಾಜಿಕ (ಮಾನಸಿಕ) ಅಭಿವೃದ್ಧಿಗೆ ಮುಂದಾಗಲು ಈ ನೀತಿ ಕರೆ ನೀಡಿತು. ಈ ನೀತಿಯ ಆಶಯಗಳ ಈಡೇರಿಕೆಗಾಗಿ ೧೯೭೫ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್‌) ಆರಂಭಿಸಲಾಯಿತು.

ಯುಪಿಎ ಸರಕಾರದ ಅವಧಿಯಲ್ಲಿ ಐಸಿಡಿಎಸ್‌ ಯೋಜನೆಯನ್ನು ಸಾರ್ವತ್ರೀಕರಿಸಲು ಮುಂದಾಯಿತು. ಈ ಸರಕಾರದ ರಾಷ್ಟ್ರೀಯ ಸಲಹಾ ಮಂಡಳಿಯ ಪ್ರಕಾರ ಗ್ರಾಮೀಣ ಮತ್ತು ನಗರಗಳ ಮಕ್ಕಳು ಮತ್ತು ಗರ್ಭಿಣಿಯರನ್ನು ಈ ಯೋಜನೆಯ ವ್ಯಾಪ್ತಿಗೆ ತರಬೇಕಾದರೆ ಸುಮಾರು ೧೭ ಲಕ್ಷ ಅಂಗನವಾಡಿ ಕೇಂದ್ರಗಳ ಅಗತ್ಯವಿದೆಯೆಂದು ಅಂದಾಜಿಸಿತು. ಆದರೆ ಇನ್ನೂ ಈ ಗುರಿಯನ್ನು ಮುಟ್ಟಲಾಗಿಲ್ಲ. ನಮ್ಮ ದೇಶದಲ್ಲಿ ೧೬.೬ ಕೋಟಿ ಮಕ್ಕಳಿದ್ದು ಅವರಲ್ಲಿ ೭ ಕೋಟಿ ಮಕ್ಕಳು ಮತ್ತು ಕರ್ನಾಟಕದಲ್ಲಿ ೭೦ ಲಕ್ಷ ಮಕ್ಕಳಿದ್ದು ಅವರಲ್ಲಿ ೩೫ ಲಕ್ಷ ಮಕ್ಕಳು ಐಸಿಡಿಎಸ್‌ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಮಕ್ಕಳು ಮತ್ತು ಗರ್ಭಿಣಿಯರಷ್ಟೇ ಅಲ್ಲ ಜಗತ್ತಿನ ಒಟ್ಟು ಜನರಲ್ಲಿ ಶೇ.೪೨ರಷ್ಟು ಜನರು ಅಪೌಷ್ಟಿಕತೆಯ ವಲಯದವರೆಂದು ಹೇಳಲಾಗುತ್ತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ವರದಿಯ ಪ್ರಕಾರ ಭಾರತದಲ್ಲಿ ಇನ್ನೂ ೧೯.೪ ಕೋಟಿ ಜನರು ಪೌಷ್ಟಿಕಾಂಶ ವಂಚಿತರಾಗಿದ್ದಾರೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಮಕ್ಕಳಿಗಾಗಿ ಅಂಗನವಾಡಿಗಳು ಆರಂಭವಾದವು. ಅಪೌಷ್ಟಿಕತೆಯ ವಿರುದ್ಧದ ಕ್ರಮ ಬದ್ಧ ಹೋರಾಟ ಆರೆಂಭಿಸಿದವು.

ಮಕ್ಕಳ ಉಳಿವಿಗಾಗಿ ಹುಟ್ಟಿಕೊಂಡ ಅಂಗನವಾಡಿಗಳನ್ನು ನಿರ್ವಹಿಸುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಈಗ ತಮ್ಮ ಉಳಿವಿಗಾಗಿ ಹೋರಾಟ ಮಾಡುತ್ತಲೇ ಇರಬೇಕಾಗಿದೆ. ಈ ನಡುವೆ ಅಂಗನವಾಡಿಯ ಕಾರ್ಯವ್ಯಾಪ್ತಿಯೂ ವಿಸ್ತಾರಗೊಂಡಿದೆ. ಆರಂಭಿಕ ಶಿಶು ಆರೈಕೆ ಜತೆಗೆ ಶಿಕ್ಷಣವನ್ನೂ ಕೊಡಲಾಗುತ್ತಿದೆ. ಮಕ್ಕಳ ಮತ್ತು ಅಗತ್ಯವಿರುವ ಗರ್ಭಿಣಿಯರಿಗೆ ಪೌಷ್ಟಿಕಾಂಶ ಪೂರೈಕೆ ಮತ್ತು ಸಲಹೆ ನೀಡಬೇಕಾಗಿದೆ. ಬಾಣಂತಿಯರಿಗೆ ಮಾರ್ಗದರ್ಶನ ಕೊಡಬೇಕಾಗಿದೆ. ಜತೆಗೆ ಅನಧಿಕೃತವಾಗಿ ಅನೇಕ ಕೆಲಸಗಳನ್ನು ವಹಿಸಲಾಗುತ್ತದೆ. ಚುನಾವಣೆ ಸಂದರ್ಭದ ಕೆಲಸಗಳು, ಭಾಗ್ಯಲಕ್ಷ್ಮಿ ಯೋಜನೆಯ ಕೆಲಸ, ಸ್ತ್ರೀ ಶಕ್ತಿ ಸಂಘಗಳ ಕೆಲಸಗಳನ್ನೂ ನಿರ್ವಹಿಸಬೇಕಾಗುತ್ತದೆ. ಜತೆಗೆ ಪ್ರಭಾರಿಯಾಗಿ ಎರಡನೇ ಅಂಗನವಾಡಿಯ ಕೆಲಸಕ್ಕೂ ನಿಯೋಜಿಸಲಾಗುತ್ತಿದೆ. ಈ ಪ್ರಭಾರಿ ಕೆಲಸಕ್ಕೆ ತಿಂಗಳಿಗೆ ಕೇವಲ ೫೦ ರೂಪಾಯಿ ನೀಡಲಾಗುತ್ತಿದೆ.

ಇಂತಹ ಸ್ಥಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ಗೌರವಧನ ಹೆಚ್ಚಳವನ್ನು ಒಳಗೊಂಡಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕಳೆದ ತಿಂಗಳು ಮಾರ್ಚ್‌ನಲ್ಲಿ ನಡೆದ ಹೋರಾಟಕ್ಕೂ ಮುನ್ನ ೨೦೧೫ರಲ್ಲೂ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಆಗ ಸಾಹಿತಿಗಳು-ಚಿಂತಕರನ್ನೂ ಒಳಗೊಂಡು ವಿಭಾಗಾವಾರು ಸಮಾವೇಶಗಳು ನಡೆದವು. ೮೮ ತಾಲೂಕುಗಳಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ೨,೫೦೦ ಗ್ರಾಮ ಪಂಚಾಯಿತಿ ಮಟ್ಟದ ಸಭೆಗಳು ನಡೆದವು. ಫೆಬ್ರವರಿಯಲ್ಲಿ (೨೦೧೫) ಬೃಹತ್‌ ಮುಷ್ಕರವೂ ನಡೆಯಿತು. ಹೀಗೆ ಆಗಾಗ್ಗೆ ನಡೆದ ಹೋರಾಟಗಳು ಅಲ್ಪಪ್ರಮಾಣದ ಯಶಸ್ಸನ್ನು ತಂದುಕೊಟ್ಟಿವೆ. ಆದರೆ ಬಹುಪಾಲು ಸಮಸ್ಯೆಗಳು ಪರಿಹಾರವಾಗದೆ ಉಳಿದಿವೆ. ೨೦ಕ್ಕೂ ಹೆಚ್ಚು ಬೇಡಿಕೆಗಳನ್ನಿಟ್ಟುಕೊಂಡು ಮೊನ್ನೆ ಮಾರ್ಚ್‌ನಲ್ಲಿ ನಡೆದ ಹೋರಾಟ ಐತಿಹಾಸಿಕವಾದುದು. ಹಳ್ಳಿಗಳಿಂದ ಬಂದ ಅಂಗನವಾಡಿ ಅಮ್ಮಂದಿರು ಬಯಲಲ್ಲೇ ಬೀಡುಬಿಟ್ಟರು. ‘ಪ್ರಾಯೋಜಿತ’ ಹೋರಾಟವಲ್ಲವಾದ್ದರಿಂದ ಆರಂಭದಲ್ಲಿ ನೈಸರ್ಗಿಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ರಾತ್ರಿ ಬೀದಿಯಲ್ಲಿ ಮಲಗುವಂತಾಯಿತು. ಆದರೆ ಅಮ್ಮಂದಿರು ಅಳುಕಲಿಲ್ಲ. ಬದ್ಧತೆ ಬಿಡಲಿಲ್ಲ. ರಾಜ್ಯ ಸರಕಾರದ ಆಶ್ವಾಸನೆಯನ್ನು ನಂಬಲಿಲ್ಲ. ಆದರೆ ಹೋರಾಟಗಳು ಹಗ್ಗ ಹರಿಯುವವರೆಗೂ ಸಾಗುವ ಜಗ್ಗಾಟವಾಗಬಾರದೆಂಬ ವಿವೇಕ ನಾಯಕರಿಗೆ ಅಗತ್ಯ. ಇಲ್ಲದಿದ್ದರೆ ಹೋರಾಟಗಳೇ ವಿಫಲವಾಗುತ್ತವೆ. ಆದ್ದರಿಂದ ಯಾವುದಾದರೊಂದು ಹಂತದಲ್ಲಿ ಸಕಾರಾತ್ಮಕ ಸಂದರ್ಭಕಂಡು ಬಂದಾಗ ತಾತ್ಕಾಲಿಕ ವಿರಾಮ ನೀಡಬೇಕಾಗುತ್ತದೆ. ಆಳುವ ವರ್ಗ ಮೊಂಡುತನ ತೋರಿದರೆ ಹೋರಾಟದ ಮೊನಚುತನ ಮುಕ್ಕಾಗದಂತೆ ಕಾಯ್ದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಹೋರಾಟ ತಾತ್ಕಾಲಿಕವಾಗಿ ಸ್ಥಗಿತವಾದದ್ದು ಸರಿ. ಏಕೆಂದರೆ ಹೋರಾಟ ಹಟದಾಟವಾಗಬಾರದು. ಬದಲಾದ ಸಂದರ್ಭದಲ್ಲಿ ಸೂಕ್ತ ಕಾರ್ಯತಂತ್ರಗಳ ಮೂಲಕ ಯಶಸ್ಸಿನತ್ತ ಸಾಗಬೇಕಾಗುತ್ತದೆ. ರಾಜ್ಯ ಸರಕಾರವು ಉಪಚುನಾವಣೆಗಳ ನೀತಿಸಂಹಿತೆಯ ಕಾರಣ ನೀಡಿ ಪರಿಹಾರೋಪಾಯಗಳ ಸಭೆಯನ್ನು ಮುಂದೂಡಿದೆ. ಕೇಳಿದ್ದೆಲ್ಲವನ್ನೂ ಅಲ್ಲದಿದ್ದರೂ ಕೆಲವು ಬೇಡಿಕೆಗಳು ಈಡೇರುವ ಆಶಾಭಾವನೆ ಹೋರಾಟಗಾರರಲ್ಲೂ ಇರುವಂತೆ ಕಾಣುತ್ತದೆ.

ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಖಾಯಂ ನೌಕರರನ್ನಾಗಿ ಮಾಡುವುದು ಸುಲಭದ ಕೆಲಸವಲ್ಲ. ೧೯೯೬ರಲ್ಲಿ ಕರ್ನಾಟಕ ಅಡ್ಮಿನಿಸ್ಪ್ರೇಟಿವ್‌ ಟ್ರಿಬ್ಯೂನಲ್‌ (ಕೆಎಟಿ) ಇವರನ್ನು ಖಾಯಂ ಮಾಡಬೇಕೆಂದು ತೀರ್ಪುಕೊಟ್ಟಿತ್ತು. ಆದರೆ ಅಂದಿನ ಜೆ.ಎಚ್‌.ಪಟೇಲ್‌ ನೇತೃತ್ವದ ಸರಕಾರವು ಸುಪ್ರೀಂಕೋರ್ಟಿಗೆ ಮೇಲ್‌ ಮನವಿ ಸಲ್ಲಿಸಿತು. ವಿಚಾರಣೆ ನಡೆದ ದಶಕದ ಅನಂತರ ಬಂದ ಸುಪ್ರೀಂ ತೀರ್ಪು ಖಾಯಂಗೊಳಿಸಲಾಗದೆಂದು ಹೇಳಿತು. ಈಗ ರಾಜ್ಯ ಸರಕಾರ ಇವರ ಗೌರವಧನವನ್ನು ಗೌರವಯುತವಾಗಿ ಹೆಚ್ಚಿಸಬೇಕು. ಅಂಗನವಾಡಿಯ ಅಧಿಕೃತ ಕೆಲಸಗಳಿಗೆ ಮಾತ್ರ ಇವರನ್ನು ಸೀಮಿತಗೊಳಿಸಬೇಕು. ಕಾಲಕಾಲಕ್ಕೆ ಭತ್ಯೆ ಮತ್ತು ಗೌರವ ಧನವನ್ನು ಹೆಚ್ಚಿಸಬೇಕು. ಬಡವರ ಮಕ್ಕಳ ಆರೈಕೆ ಮಾಡುವ ಬಡ ಅಮ್ಮಂದಿರ ಬದುಕಿಗೆ ಅಗತ್ಯ ಆರ್ಥಿಕ ಭದ್ರತೆ ಒದಗಿಸಬೇಕು.

ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಅಂಗನವಾಡಿಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳನ್ನಾಗಿ ಪರಿವರ್ತಿಸುವ ಸಲಹೆ ನೀಡಿದ್ದೆ. ಈ ಬಗ್ಗೆ ಪರಿಶೀಲಿಸಲು ಅಂದಿನ ಪ್ರಾಥಮಿಕ ಶಿಕ್ಷಣ ಸಚಿವರಾದ ವಿಶ್ವನಾಥ್‌, ಮಹಿಳಾ-ಮಕ್ಕಳ ಖಾತೆ ಸಚಿವರಾದ ಮೋಟಮ್ಮನವರು, ನಾನು ಮತ್ತು ಎರಡೂ ಇಲಾಖೆಗಳ ಕಾರ್ಯದರ್ಶಿಗಳಿರುವ ಸಮಿತಿಯೊಂದು ಅಧಿಕೃತವಾಗಿ ರಚನೆಯಾಗಿತ್ತು. ಈ ಬಗ್ಗೆ ಮೂರ್ನಾಲ್ಕು ಸಭೆಗಳು ನಡೆದು ತಾತ್ವಿಕವಾಗಿ ನನ್ನ ಸಲಹೆಯನ್ನು ಒಪ್ಪಲಾಗಿತ್ತು. ಜಾರಿಗೊಳಿಸುವ ವಿಧಾನಗಳನ್ನು ಚರ್ಚಿಸಬೇಕಾಗಿತ್ತು. ಏಕೆಂದರೆ ಅಂಗನವಾಡಿ ಪರಿಕಲ್ಪನೆ ಮೂಲತಃ ರಾಜ್ಯದ್ದಲ್ಲ. ಕೇಂದ್ರ ಸರಕಾರದ್ದು. ಆದರೂ ರಾಜ್ಯ ಸರಕಾರವೇ ಜವಾಬ್ದಾರಿ ಹೊರಲು ಕಾನೂನಿನ ತೊಡಕಿಲ್ಲ ಎಂದು ಭಾವಿಸಲಾಗಿತ್ತು.

ಇಲ್ಲಿಯೇ ಮುಖ್ಯವಾದ ಅಂಶವೊಂದನ್ನು ಪ್ರಸ್ತಾಪಿಸಲೇಬೇಕು. ಅಂಗನವಾಡಿ ಅಮ್ಮಂದಿರ ಸಂಕಷ್ಟದ ಹಿಂದೆ ನಮ್ಮ ದೇಶದಲ್ಲಿ ಈಗ ಜಾರಿಯಲ್ಲಿರುವ ಮನಮೋಹನ್‌ ಸಿಂಗ್‌ ಮೂಲದ ಮುಕ್ತ ಆರ್ಥಿಕ ನೀತಿಯ ದುಷ್ಪರಿಣಾಮವಿದೆ. ಇದರ ಫಲವಾಗಿ ಮಾನವ ಅಭಿವೃದ್ಧಿಗಿಂತ ಆರ್ಥಿಕ ಸುಧಾರಣೆಯೇ ಮುಖ್ಯವಾಗಿಬಿಟ್ಟಿದೆ. ಆರ್ಥಿಕ ಸುಧಾರಣೆಯೆಂದರೆ ಬಂಡವಾಳಶಾಹಿ ಆರ್ಥಿಕ
ಸುಧಾರಣೆ; ಆದ್ದರಿಂದ ಅದರಲ್ಲಿ ಬಂಡವಾಳ ಹೂಡಿಕೆಯೇ ಮುಂತಾದ ಕ್ರಮಗಳಿಗೆ ಆದ್ಯತೆ. ಇದರ ಫಲವಾಗಿ ಭಾರತದ ಮಾನವ ಅಭಿವೃದ್ಧಿ ಸುಧಾರಣೆಗಳಿಗೆ ಹಿನ್ನಡೆಯಾಗಿದೆ. ಭೂ ಸುಧಾರಣೆ, ಸಾಮಾಜಿಕ ಸುಧಾರಣೆ, ಮಹಿಳೆ ಮತ್ತು ಮಕ್ಕಳ ಸುಧಾರಣೆಯೆಂಬಂತಹ ಪರಿಕಲ್ಪನೆಗಳಿಗೆ ಆದ್ಯತೆಯೇ ಇಲ್ಲ. ಆರ್ಥಿಕ ಸುಧಾರಣೆಯೆಂಬ ಅಬ್ಬರದಲ್ಲಿ ‘ಮಾನವ’ ಮೂಲೆಗುಂಪಾಗಿದ್ದಾನೆ. ಇತ್ತೀಚಿನ ಸಮೀಕ್ಷೆಯೊಂದು ಭಾರತದಲ್ಲಿ ಮಾನವಾಭಿವೃದ್ಧಿ ಸೂಚ್ಯಂಕ ಸಾಕಷ್ಟು ಕುಸಿದಿದೆ ಎಂದು ಸಾಧಾರವಾಗಿ ನಿರೂಪಿಸಿದೆ. ವಾಸ್ತವವಾಗಿ ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದ ಸಮತೋಲನ ಸಾಧಿಸಬೇಕಾಗಿದೆ.

ಅಂಗನವಾಡಿ ಸಮಸ್ಯೆಗೂ ಮಾನವಾಭಿವೃದ್ಧಿ ಕುಸಿತವೇ ಆರ್ಥಿಕ ಆದ್ಯತೆಯಾಗಿರುವುದಕ್ಕೂ ಸಂಬಂಧವಿದೆ. ಇತ್ತೀಚಿನ ಕೇಂದ್ರ ಸರಕಾರಿ ಬಜೆಟ್‌ ಸಾಮಾಜಿಕ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡುತ್ತಲೇ ಇದೆ. ಇದರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯೂ (ಅಂಗನವಾಡಿ) ಸೇರಿದೆ. ೨೦೧೪-೧೫ರಲ್ಲಿ ಈ ಯೋಜನೆಗೆ ೧೮,೩೯೧ ಕೋಟಿ ಕೊಡಲಾಗಿತ್ತು. ಇದು ೨೦೧೫-೧೬ರ ಕೇಂದ್ರ ಬಜೆಟ್‌ನಲ್ಲಿ ೮,೭೫೪ ಕೋಟಿಗೆ ಇಳಿಯಿತು. ಅಷ್ಟೇ ಅಲ್ಲ ಕೇಂದ್ರ ಸರಕಾರವು ಕಟ್ಟಡ, ಉಪಕರಣ ವೆಚ್ಚಗಳಿಗೆ ಮಾತ್ರ ಅನುದಾನ ನೀಡುವ ನೀತಿಯನ್ನು ಅಳವಡಿಸಿಕೊಳ್ಳತೊಡಗಿತು. ಕೇಂದ್ರ ಅನುದಾನದಲ್ಲಿ ಗೌರವಧನಕ್ಕೂ ಸ್ವಲ್ಪ ಪಾಲು ಬಳಸಲಾಗುತ್ತಿದೆಯಾದರೂ ಈ ಬಾಬ್ತು ರಾಜ್ಯ ಸರಕಾರಕ್ಕೆ ಹೆಚ್ಚು ಅನ್ವಯಿಸಲಾಗುತ್ತಿದೆ. ಒಟ್ಟಾರೆ ರಾಜ್ಯ ಸರಕಾರವೇ ಹೆಚ್ಚು ಭಾಗವನ್ನು ಭರಿಸಬೇಕಾಗಿದೆ. ಕೇಂದ್ರ ಸರಕಾರವು ಅಂಗನವಾಡಿಗಳಿಗೆ ಕೊಡುತ್ತಿದ್ದ ಅನುದಾನದಲ್ಲಿ ಈಗ ಶೇ.೪೦ ರಷ್ಟು ಕಡಿತಗೊಳಿಸಿದೆ. ಈಗಲಾದರೂ ಹೋರಾಟದ ಮುಖ್ಯಮೂಲ ಯಾವುದೆಂದು ಗೊತ್ತಾಯಿತಲ್ಲ? ಹಾಗೆಂದು ರಾಜ್ಯ ಸರಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ.

ಕಡೆಯಲ್ಲಿ ನಮ್ಮ ಯುವಕವಿ ಅರುಣ್ ಜೋಳದಕೂಡ್ಲಗಿ ಬರೆದ ‘ಅವ್ವನ ಅಂಗನವಾಡಿ’ ಸಂಕಲನದ ಕವಿತೆಯ ಕೆಲ ಸಾಲುಗಳು ನೆನಪಾಗುತ್ತಿದೆ. ಈ ಕವಿಯ ತಾಯಿಯೂ ಅಂಗನವಾಡಿಯ ಅವ್ವ. ಕವಿಯ ನುಡಿ ಹೀಗಿದೆ: ”ಬಡ ಮಕ್ಕಳ ತೊಟ್ಟಿಲು ಅಂಗನವಾಡಿಯಲ್ಲಿ! ನನ್ನವ್ವ ಏಸೊಂದು ಮಕ್ಕಳ ತಾಯಿ!,”ಈ ತಾಯಿ ”ಪ್ರತಿ ಬಾರಿ ಮಕ್ಕಳ ತೂಕ ಮಾಡುವಾಗ ಬಡಕಲು ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಇರುವ ಲೆಕ್ಕ ಬರೆದು ತಳಮಳಿಸುತ್ತಿದ್ದಳು”.

ಈ ತಾಯಂದಿರ ತಳಮಳ ತಣ್ಣಗಾಗಲಿ. ಅಂಗನವಾಡಿಗಳಲ್ಲಿ ಆನಂದದ ಹಾಡು ಹರಿಯಲಿ. ಪೂರ್ವ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಳ್ಳಲಿ.