ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ, ನಾವು ಉಳಿಯಬೇಕಾಗಿದೆ -ದೇವನೂರ ಮಹಾದೇವ

[7.5.2023ರಂದು ತಲಕಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ದೇವನೂರ ಮಹಾದೇವ ಅವರು ಮಾಡಿದ ಭಾಷಣದ ಅಕ್ಷರ ರೂಪ]
ನಾನು, ಸಾಮಾನ್ಯವಾಗಿ ಯಾವ ಪಕ್ಷದ ಚುನಾವಣಾ ಪ್ರಣಾಳಿಕೆಗಳನ್ನು ಓದುವುದಿಲ್ಲ. ನಾನು ನುಡಿ ನೋಡಲ್ಲ, ಬದಲಿಗೆ- ಆ ಪಕ್ಷದ ನಡೆಯ ಚರಿತ್ರೆಯನ್ನು ನೋಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ಈ ಸಲ 2023ರ ವಿಧಾನಸಭೆಯ ಚುನಾವಣೆ ಸಂದರ್ಭಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಓದಬೇಕಾಗಿ ಬಂತು. ಈ ದೇಶದ ಪ್ರಧಾನಮಂತ್ರಿಯವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಕಾಲಂ ಒಂದನ್ನು ಉಲ್ಲೇಖಿಸಿ ಅದರ ವಿರುದ್ಧವಾಗಿ ಅನೇಕ ಕಡೆ ಉಗ್ರ ಭಾಷಣ ಮಾಡಿದರು. ನಾನು ಕುತೂಹಲಕ್ಕೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಂತಹದು ಏನಿರಬಹುದು ಎಂದು ಗಮನವಿಟ್ಟು ಓದಿದೆ.
“ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು, ಯಾವುದೇ ವ್ಯಕ್ತಿಗಳಾಗಲಿ ಭಜರಂಗ ದಳ ಮತ್ತು ಪಿಎಫ್ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.”
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಓದಿದ್ದೇನೆ. ನನಗೆ ಪ್ರಮುಖವಾಗಿ ಕಂಡಿದ್ದು ಇಷ್ಟು: 1) ಸಮಾಜದ ವಿಭಜನೆಗೆ ಅಂದರೆ ಒಡಕಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧ (2) ಕಾಂಗ್ರೆಸ್ಗೆ ಸಂವಿಧಾನ ಪವಿತ್ರ (3) ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಬಾರದು (4) ಇದನ್ನು ಉಲ್ಲಂಘಿಸುವವರು ಯಾರೇ ಆಗಲಿ ಭಜರಂಗದಳ, ಪಿಎಫ್ಐ ಇತ್ಯಾದಿಗಳ ಮೇಲೆ ಕಾಂಗ್ರೆಸ್ ಪಕ್ಷ ಬಲವಾದ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಇದು ಆ ಪ್ರಣಾಳಿಕೆಯ ಸಾರಾಂಶ. ಅಂದರೆ ಯಾರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೊ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಆಶಯ ಇಲ್ಲಿದೆ. ರಾಜ್ಯದ Law and Order ಕಾಪಾಡುವುದು ತನ್ನ ಧರ್ಮ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳುತ್ತಿದೆ.
ನನಗೆ ಅನಿಸುವಂತೆ, ಯಾವುದೇ ಒಂದು ಸರ್ಕಾರಕ್ಕೆ ತನ್ನ ರಾಜ್ಯದ, ದೇಶದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಎಂದರೆ ಅದು ಆ ಸರ್ಕಾರದ ಕನಿಷ್ಠ ಅರ್ಹತೆ. ಈ ಕನಿಷ್ಠ ಅರ್ಹತೆ ಇಲ್ಲದಿರುವುದರಿಂದಾಗಿ ಇದುವರೆಗೂ ರಾಜ್ಯವನ್ನು ಆಳ್ವಿಕೆ ನಡೆಸುತ್ತಿದ್ದ ಬಿಜೆಪಿ ಸರ್ಕಾರದ ಜಮಾನದಲ್ಲಿ ಒಂದೆರಡಲ್ಲ-ನೂರಾರು ಸಲ, ಕೆಲವು ಗುಂಪುಗಳು ದಾಂಧಲೆ ಎಬ್ಬಿಸಿ ಗಲಭೆ ಆಯ್ತು. ವ್ಯಾಪಾರ ನಿಷೇಧ, ಹಿಜಾಬ್, ಹಲಾಲ್, ಗೋವು ಸಾಗಾಣಿಕೆ ಇತ್ಯಾದಿ, ಇತ್ಯಾದಿ ಸರಮಾಲೆಯಲ್ಲಿ ಕೊಲೆ ಸುಲಿಗೆ ಹೊಡೆ ಬಡಿ ಎಲ್ಲಾ ನಡೆಯಿತು. ಸರ್ಕಾರ ಎನ್ನುವುದು ಇದೆಯೋ ಇಲ್ಲವೋ ಎಂದು ಅನುಮಾನ ಬರುವ ಪರಿಸ್ಥಿತಿ ಉಂಟಾಯ್ತು. ಇದೇ ಪರಿಸ್ಥಿತಿ ಮತ್ತೆ ಬರಬೇಕೆ?
ಹೀಗಿದ್ದೂ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾನೂನನ್ನು ತನ್ನ ಕೈಗೆತ್ತಿಕೊಳ್ಳುವ ಭಜರಂಗದಳದ ನಿಷೇಧ ಪ್ರಸ್ತಾಪವನ್ನು ವಿರೋಧಿಸುತ್ತಾರೆ. ಆಕ್ರೋಶಭರಿತರಾಗುತ್ತಾರೆ. ಬ್ಯಾಲೆಟ್ ಬಾಕ್ಸ್ ನಲ್ಲಿ ಬಟನ್ ಒತ್ತುವಾಗ ‘ಜೈ ಭಜರಂಗ ಬಲಿ’ ಎಂದು ಮತ ನೀಡಿ ಎಂದು ಮತದಾರರಿಗೆ ಬಹಿರಂಗ ಕರೆಯನ್ನೂ ಕೊಡುತ್ತಾರೆ. ಆದರೆ ಹನುಮಂತ, ಹನುಮಾನ್ ಪರಮಭಕ್ತಿಯ ಸಂಕೇತವಾಗಿ ನಮ್ಮ ಜನಸಮುದಾಯದ ಸುಪ್ತಪ್ರಜ್ಞೆಯಲ್ಲಿ ವಾಸ ಮಾಡುತ್ತಿದ್ದಾನೆ. ಇಂತಹ ಪರಮಭಕ್ತಿಯ ಹನುಮಾನ್ ಯಾವ ಕಾರಣಕ್ಕೂ ‘ಭಕ್ತಿಯೇ ಇಲ್ಲದ ವೇಷಧಾರಿ ಭಕ್ತ’ರ ಗದ್ದಲದ ಮಾತುಗಳನ್ನು ಕೇಳಿಸಿಕೊಳ್ಳಲಾರ. ವಚನ ಪಾಲನೆಯ ಸಂಕೇತವಾದ ರಾಮನ ಭಕ್ತನಾದ ಹನುಮಾನ್ ವಚನಭ್ರಷ್ಠ ಭಕ್ತರನ್ನಂತೂ ಕ್ಷಮಿಸಲಾರ. ಇದೇ ಭಾರತದ ಪರಂಪರೆಯ ಅಂತಃಸಾಕ್ಷಿ.
ನಮ್ಮ ಪ್ರಧಾನಿಯವರಿಗೆ ಒಂದು ಪ್ರಶ್ನೆ. ಕಾನೂನು ಕೈಗೆತ್ತಿಕೊಳ್ಳುವ ಹಿನ್ನೆಲೆಯ ಭಜರಂಗದಳ ಮತ್ತು ಪಿಎಫ್ಐ ಇತ್ಯಾದಿಗಳ ಅವಾಂತರ ನೋಡಿಕೊಂಡು ಸರ್ಕಾರವೊಂದು ಸುಮ್ಮನಿರಬೇಕೆ? ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಇಂತಹ ಮತಾಂಧರ ಬಗ್ಗೆ- ಕನ್ನಡ ಮಹೋನ್ನತ ಲೇಖಕ ಪಿ.ಲಂಕೇಶ್ ಅವರು ಒಂದು ಮಾತು ಹೇಳುತ್ತಾರೆ- “ನಗು ಮರೆತ, ಅಳು ಮರೆತ, ದಯೆ ಮರೆತ ಧರ್ಮಾಂಧರು ಯಾವುದೇ ಅಣುಬಾಂಬಿಗಿಂತ ‘ಅಪಾಯದ ಮನುಷ್ಯರು’ ” ಅಂತ. ಲಂಕೇಶರ ಈ ಒಳಗಣ್ಣಿನ ನುಡಿಗಳನ್ನು ನಾವು ಆಲಿಸಬೇಕಾಗಿದೆ.
ಇತ್ತೀಚೆಗೆ ನಾನು ನಂಜನಗೂಡಿನ ಹತ್ತಿರದ ತಗಡೂರಿಗೆ ಒಂದು ಸಭೆಗೆ ಹೋಗಿದ್ದೆ. ಅಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಸೇರಿದ್ದರು. ಅಲ್ಲಿ ಶಾಲಾಮಕ್ಕಳು, ತರುಣರು, ಮಹಿಳೆಯರು, ಸಂಘಟನೆಗಳ ನಾಯಕರು, ಆ ಊರಿನ ಯಜಮಾನರು ಎಲ್ಲರೂ ಸೇರಿದ್ದರು. ನಾನು ಸುಮಾರು ಅರ್ಧ ಗಂಟೆಗಳ ಕಾಲ ಮಾತಾಡಿದೆ. ಮಾತಾಡಿದೆ ಅನ್ನುವುದಕ್ಕಿಂತ ನಾನು ಬರೆದುಕೊಂಡಿದ್ದನ್ನು ಓದಿದೆ ಅನ್ನಬಹುದು. ನಾನೇ ಚಕಿತನಾಗುವಂತೆ ಎಲ್ಲರೂ ಆಲಿಸಿದರು. ಸಭೆ ಮುಗಿದ ಮೇಲೆ ನಾಕಾರು ಹುಡುಗರು –“ನಮಗೆ ಅರ್ಥವಾಯ್ತು. ನಾವು ಬಿಜೆಪಿಗೆ ಮತ ನೀಡುವುದಿಲ್ಲ” ಅಂದರು. ಆಮೇಲೆ ಹತ್ತಾರು ಜನ ತರುಣರು ರಾತ್ರಿ 12.30ರವರೆಗೆ ಅಂದು ನಾನು ಹೇಳಿದ್ದ ಮುಖ್ಯ ಮಾತೊಂದನ್ನು ಚರ್ಚಿಸುತ್ತಿದ್ದರು ಎಂದು ತಿಳಿದು ಬಂತು. ತಗಡೂರು ಸಭೆಯಲ್ಲಿ ಹೇಳಿದ್ದ ಮಾತುಗಳ ಸಾರಾಂಶ ಏನೆಂದರೆ-“ಈ 2023ರ ವಿಧಾಸಭಾ ಚುನಾವಣೆ ಮತ್ತು ಮುಂಬರುವ 2024ರ ಲೋಕಸಭಾ ಚುನಾವಣೆ ನಿರ್ಣಾಯಕ. ಇಂದಿನ ರಾಜಕಾರಣದ ಒಳಹೊಕ್ಕು ನೋಡಿದರೆ, ಇಂದಿನ ಚುನಾವಣೆ ವ್ಯಕ್ತಿ ವ್ಯಕ್ತಿಗಳ ನಡುವೆ ಅಲ್ಲ. ಪಕ್ಷ ಪಕ್ಷಗಳ ನಡುವೆಯೂ ಅಲ್ಲ. ಇಂದಿನ ಸ್ಪರ್ಧೆ ನಡೆಯುತ್ತಿರುವುದು ಸಮಾನತೆಯ ಹಾಲಿ ಸಂವಿಧಾನ V/S ಅಸಮಾನತೆಯ ಮಾಜಿ ಮನುಧರ್ಮಶಾಸ್ತ್ರ ಸಂವಿಧಾನಗಳ ನಡುವೆ. ಮನುಧರ್ಮ ಶಾಸ್ತ್ರದ ಭಕ್ತರಾದ ಸಂಘಪರಿವಾರ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದರೆ, ಆ ಮನುಧರ್ಮ ಶಾಸ್ತ್ರದಂತೆ ಒಕ್ಕಲಿಗರು, ಲಿಂಗಾಯಿತರು, ತಳಸಮುದಾಯದವರು ಮತ್ತೆ ಸೇವಕರಾಗಬೇಕಾಗುತ್ತದೆ. ಆಗ ದಲಿತರು, ಅಲೆಮಾರಿ, ಆದಿವಾಸಿಗಳು ಊರಾಚೆ ತಳ್ಳಲ್ಪಡುತ್ತಾರೆ, ನೆನಪಿಡಿ” –ಎಂದು ಹೇಳಿದ್ದೆ. ಈಗ ಬಿಜೆಪಿ ಸರ್ಕಾರಗಳು ತರುತ್ತಿರುವ ಕಾಯ್ದೆಗಳನ್ನು ಮೂಸಿ ನೋಡಿದರೂ, ಅಲ್ಲಿ ಮನುಧರ್ಮ ಶಾಸ್ತ್ರದ ವಾಸನೆ ಇರುವುದನ್ನು ಗುರುತಿಸಬಹುದು. ಹೀಗಿರುವಾಗ, ಸ್ನೇಹಿತರೇ ಸಂಘಪರಿವಾರ ಬಿಜೆಪಿಯನ್ನು ಸೋಲಿಸಲೇಬೇಕು. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಭಾರತದ ಸಂವಿಧಾನವನ್ನು ಪವಿತ್ರ ಎಂದು ಭಾವಿಸಿರುವ ಕಾಂಗ್ರೆಸ್ಗೆ, ಇಂದಿನ ಪರಿಸ್ಥಿತಿಯಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಬೆಂಬಲ ನೀಡಬೇಕಾಗಿದೆ. ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಿ ನಾವು ಉಳಿಯಬೇಕಾಗಿದೆ.
ಸಾಮಾನ್ಯವಾಗಿ ಯಾವುದೇ ಕ್ಷೇತ್ರಕ್ಕೆ ಹೋದರೂ ಮತದಾರರು- ‘ಆ ಸ್ಪರ್ಧಿ ಹೀಗೆ, ಈ ಸ್ಪರ್ಧಿ ಹಾಗೆ’ ಎಂದು ಹೋಲಿಕೆ ಮಾಡ್ತಾ ಮಾತಾಡ್ತಾ ಇರ್ತಾರೆ. ‘ಆ ಸ್ಪರ್ಧಿ ಚೆನ್ನಾಗಿ ಮಾತಾಡಿಸುತ್ತಾನೆ. ಈ ಸ್ಪರ್ಧಿಗೆ ಅಹಂ ಜಾಸ್ತಿ, ಮಾತಾಡಿಸಲ್ಲ’. ಹಾಗೇನೇ ‘ಅವರ ಮಕ್ಕಳು ಸರಿ ಇಲ್ಲ; ಇವರ ಮಕ್ಕಳು ಒಳ್ಳೆಯವರು’ ಇಂಥವೇ ಮಾತುಗಳು ಕೇಳಿ ಬರುತ್ತಿರುತ್ತವೆ. ಇದಲ್ಲ ನಾವು ನೋಡಬೇಕಾಗಿರುವುದು. ನಾವು ಆಯ್ಕೆ ಮಾಡುವ ಶಾಸಕನಿಗೆ ಜನಹಿತ ಕಾಯ್ದೆಗಳನ್ನು ರೂಪಿಸುವ ಸಾಮರ್ಥ್ಯ ಇದೆಯೋ ಇಲ್ಲವೋ? ಹಾಗೇ ಜನವಿರೋಧಿ ಶಾಸನಗಳನ್ನು ಗುದ್ದಾಡಿ ತಡೆಗಟ್ಟುವ ತಾಕತ್ತು ಇದೆಯೋ ಇಲ್ಲವೋ –ಇದನ್ನು ಗಮನಿಸಬೇಕು. ಜನಹಿತ ಕಾಯ್ದೆಗಳನ್ನು ರೂಪಿಸುವ ಶಾಸಕನ ಅರ್ಹತೆ ಮೇಲೆ ಜನಜೀವನದ ದಿನನಿತ್ಯದ ಬವಣೆಯ ಬದುಕು ಸುಧಾರಿಸುವುದು ನಿಂತಿದೆ. ನನ್ನದೇ ಉದಾಹರಣೆ ಒಂದನ್ನು ಹೇಳುತ್ತೇನೆ. ಮಳವಳ್ಳಿ ಮಾಜಿ ಶಾಸಕ ಸೋಮಶೇಖರ್ ಹೆಸರನ್ನು ನೀವು ಕೇಳಿರುತ್ತೀರಿ. ಇವರು ಸಚಿವರಾಗಿದ್ದರು. ಇವರನ್ನು ಎಲ್ಲರೂ ‘ಜನ ಸೇರದವ’ ಅಂತ ಲೇವಡಿ ಮಾಡುತ್ತಿದ್ದರು. ತನ್ನ ಸ್ನೇಹಿತರು, ಹತ್ತಿರದವರು, ಕುಟುಂಬದವರನ್ನೂ ಆತ ಹತ್ತಿರ ಸೇರಿಸುತ್ತಿರಲಿಲ್ಲ. ಈತ ನನ್ನ ಬ್ಯಾಚ್ಮೇಟ್, ಗೆಳೆಯನೂ ಕೂಡ. ಈತ ಸಚಿವನಾದ ಮೇಲೆ, ನಾನು ಎದುರಾದರೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆದರೆ ಒಬ್ಬ ಸಚಿವನಾಗಿ ಜನಹಿತದ ಒಳ್ಳೊಳ್ಳೆ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದರು. ಯಾವುದಾದರೂ ಜನವಿರೋಧಿ ಕಾಯ್ದೆ ಬರುತ್ತದೆ ಎಂದು ಸುಳಿವು ಸಿಕ್ಕರೆ ಸೋಮಶೇಖರ್ ಹಲ್ಲುಮುಡಿ ಕಚ್ಚಿ ಗುದ್ದಾಡಿ ತಡೆಗಟ್ಟುತ್ತಿದ್ದರು. ಇಂಥಹವರು ಸಚಿವರಾದರೆ ಇಡೀ ರಾಜ್ಯದ ಜನಜೀವನ ಸುಧಾರಿಸುತ್ತದೆ. ಇದು ಇಂದು ಬೇಕಾಗಿರುವುದು.
ಆ ಸಂದರ್ಭದಲ್ಲೇ ನನಗೊಬ್ಬರು ಪತ್ರಿಕಾ ಮಿತ್ರರು ಒಂದು ಪ್ರಶ್ನೆ ಕೇಳಿದರು- “ರಾಜ್ಯದಲ್ಲಿ ಈಗ ಇರುವ ಸಚಿವರಲ್ಲಿ ನಿಮಗೆ ಓಕೆ ಅನ್ನಿಸುವ ದಲಿತ ಸಚಿವ ಯಾರು?” ಅಂತ. ಅದಕ್ಕೆ ನಾನು ಹೇಳಿದೆ-“ದಲಿತ ಅಂತ ಯಾಕೆ? ಸಚಿವ ಸಂಪುಟದಲ್ಲಿ ಸಮರ್ಥ ಸಚಿವ ಸೋಮಶೇಖರ್” ಎಂದು ಹೇಳಿದ್ದೆ. ಮತದಾರರೂ ನಿರ್ಧರಿಸಬೇಕಾದುದು ಬಹುಶಃ ಹೀಗೇನೇ. ಒಬ್ಬ ಶಾಸಕನಾದವನು ಕಾಯ್ದೆ ರೂಪಿಸಲು ಸಮರ್ಥ ಎಂಬುದನ್ನೂ ಗಮನಿಸಿ ನಾವು ಮತ ನೀಡಬೇಕಾಗಿದೆ.
ಕೊನೆಯದಾಗಿ, ಇತ್ತೀಚೆಗೆ ನನ್ನ ಗೆಳೆಯ ಶ್ರೀನಿವಾಸ್ ಪ್ರಸಾದ್ರ ಒಂದು ಹೇಳಿಕೆ ನನಗೆ ಅತೀವ ನೋವು ಉಂಟು ಮಾಡಿತು. ಶ್ರೀನಿವಾಸ್ ಪ್ರಸಾದ್ ‘ಮಲ್ಲಿಕಾರ್ಜುನ ಖರ್ಗೆಯವರು ಅವಕಾಶವಾದಿ’ ಎಂದು ಹೇಳಿದ ಮಾತಿಗೆ ನಾನು ನೊಂದುಕೊಂಡೆ. ನಾನು ಬಲ್ಲಂತೆ, ಮಲ್ಲಿಕಾರ್ಜುನ ಖರ್ಗೆಯವರದು ಹಿತಮಿತ ವ್ಯಕ್ತಿತ್ವ. ಖರ್ಗೆಯವರು ತಾವು ನಂಬಿದ ಸಿದ್ಧಾಂತ, ಪಕ್ಷಕ್ಕೆ ಪರಮ ನಿಷ್ಠರು. ಅಧಿಕಾರ ದಾಹ ಇಲ್ಲದವರು. ಅವರು ಈ ಹಿಂದೆ ಸಚಿವರಾಗಿದ್ದಾಗ ಒಳ್ಳೊಳ್ಳೆಯ ಜನಹಿತ ಕಾಯ್ದೆಗಳನ್ನು ತಂದಿದ್ದಾರೆ. ಅವರು ಮುತ್ಸದ್ದಿ ಕೂಡ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸರ್ವಸಮ್ಮತ ಪ್ರಧಾನಮಂತ್ರಿ ಅಭ್ಯರ್ಥಿ ಆಗುವ ಸಾಧ್ಯತೆಗಳೂ ಇವೆ. ಹೀಗಿರುವಾಗ, ಇಂತಹ ಘನ ವ್ಯಕ್ತಿತ್ವ ಖರ್ಗೆಯವರಿಗೆ ಇರುವಾಗ ಶ್ರೀನಿವಾಸ್ ಪ್ರಸಾದ್ರಿಗೆ ಖರ್ಗೆಯವರನ್ನು ಅವಕಾಶವಾದಿ ಅನ್ನಲು ಹೇಗೆ ಬಾಯಿ ಬಂತು? ನನಗೆ ಪ್ರಶ್ನೆಯಾಗಿದೆ. ಪ್ರಸಾದ್ರಿಗೆ ನನ್ನ ಸಂಕಟದ ಭಾವನೆಗಳು ಮುಟ್ಟಬಹುದು ಅಂದುಕೊಂಡಿದ್ದೇನೆ.
ಹಾಗೂ ಇನ್ನೊಂದು ಸಂಗತಿ- ಪ್ರಿಯಾಂಕ ಖರ್ಗೆ ಸಂಘ ಪರಿವಾರದ ಬಿಜೆಪಿಗೆ ಸಿಂಹಸ್ವಪ್ನವಾಗಿದ್ದಾರೆ. ಅವರ ವ್ಯಕ್ತಿತ್ವವೂ ಒಂದು ಮರಿಸಿಂಹದಂತೆಯೇ ಇದೆ. ಜೊತೆಗೆ ಇವರು ಪ್ರಖರ ಬುದ್ಧಿವಂತ. ವಾಗ್ಮಿ ಕೂಡ. ಇವರ ಬಗ್ಗೆ ಬೆದರಿದ ಸಂಘ ಪರಿವಾರದ ಬಿಜೆಪಿಯವರು ಪ್ರಿಯಾಂಕ ಖರ್ಗೆ ವಿರುದ್ಧ ಮಣಿಕಂಠ ರಾಥೋಡ್ ಎಂಬ ರೌಡಿಶೀಟರ್ ನ ನಿಲ್ಲಿಸಿದೆ. ‘ಯಥಾ ಪಕ್ಷ, ತಥಾ ಅಭ್ಯರ್ಥಿ!’ ಮಣಿಕಂಠ ರಾಥೋಡ್ ಮೇಲೆ ಅವರ ವಯಸ್ಸು ಎಷ್ಟಾಗಿದೆಯೋ ಹೆಚ್ಚುಕಮ್ಮಿ ಅದರ ಡಬಲ್ ಕೇಸುಗಳಿವೆ. ಗಡಿಪಾರೂ ಆಗಿದೆ. ಜೈಲೂ ಆಗಿದೆ. ಈತ ಪಿಸ್ತೂಲು ತಿರುಗಿಸುತ್ತಾ ಠೇಂಕಾರದ ಶೋ ಕೊಡುತ್ತಾನೆ. ನಾಳೆ ಪಿಸ್ತೂಲು ತಿರುಗಿಸುತ್ತಾ ರೋಡ್ ಶೋ ಮಾಡಲೂಬಹುದು. ಈಗ ಈತ ಖರ್ಗೆಯವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದು ಸುದ್ದಿಯಾಗಿದೆ. ಈತನ ಬೆದರಿಕೆ ಖರ್ಗೆಯವರ ಕುಟುಂಬಕ್ಕೆ ಮಾತ್ರವಲ್ಲ. ಇಡೀ ನಾಡಿಗೇ ಹಾಕಿದ ಬೆದರಿಕೆ. ನಾಗರೀಕ ಸಮಾಜ, ಪ್ರಗತಿಪರ ಸಂಘಟನೆಗಳು ತಕ್ಷಣವೇ ರಾಜ್ಯಾದ್ಯಂತ ಕೇವಲ ಒಂದು ಗಂಟೆ ಧರಣಿ ಮಾಡಿ, ‘ಮಣಿಕಂಠ ರಾಥೋಡ್ ನಡಾವಳಿ ಸಹಿಸುವುದಿಲ್ಲ’ ಎಂದು ಹೇಳಬೇಕಾಗಿದೆ. ನಿಮ್ಮೊಡನೆ ನಾನೂ ಇದ್ದೇನೆ.