ಸಾಕು, ಮಿಥ್ಯಾವತಾರ ಸಾಕು -ದೇವನೂರ ಮಹಾದೇವ

[ಕೇಂದ್ರದ ಕೃಷಿ ಕಾಯ್ದೆಗಳು ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಮುಂದುವರೆದ ಹೋರಾಟದಲ್ಲಿ 21.12.2020ರಂದು ನಡೆದ ಪ್ರತಿಭಟನಾ ಧರಣಿಯಲ್ಲಿ ಐಕ್ಯ ಹೋರಾಟ ಸಮಿತಿ, AIKSCC, ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ಜನಶಕ್ತಿ ನೇತೃತ್ವ ವಹಿಸಿದ್ದವು. ಈ ಸಂದರ್ಭದಲ್ಲಿ ದೇವನೂರ ಮಹಾದೇವರವರು ಭಾಗವಹಿಸಿ ಆಡಿದ ಮಾತುಗಳ ಬರಹ ರೂಪ ಇಲ್ಲಿದೆ.]

ರಾಜ್ಯದ ರಾಜಧಾನಿಯಲ್ಲಿ ಕುಳಿತು ನಾವು ಕೂಗಿ ಕೂಗಿ ಹೇಳುತ್ತಿದ್ದೇವೆ. ನಮ್ಮ ಸುತ್ತ ಮುತ್ತಲೂ ಮೂರು ದಾರಿ ಇದೆ. ನಮ್ಮ ಸುತ್ತಲೂ ಚಲಿಸುತ್ತಿರುವ ವಾಹನಗಳೇ ಹೆಚ್ಚು. ವಾಹನಗಳಿಗೆ ತಮ್ಮ ಅಕ್ಕ ಪಕ್ಕ ನೋಡುವ ವ್ಯವಧಾನ ಇರುವುದಿಲ್ಲ. ಈ ಧಾವಂತ ಮತ್ತು ವೇಗವನ್ನು ನಗರಗಳ ಲಕ್ಷಣ ಎನ್ನುತ್ತಾರೆ. ಇಂಥ ಕಡೆ ನಮ್ಮ ಮಾತು ಕೇಳಿಸುತ್ತಾ?
ಆದರೂ, ವೇಗವಾಗಿ ಓಡುತ್ತಿರುವವರಿಗೆ ಒಂದು ಕಿವಿಮಾತು ಹೇಳುತ್ತಿರುವೆ. ಏನೆಂದರೆ ನೀವು ನಮ್ಮ ಮಾತನ್ನು ಕೇಳುವುದು ಬೇಡ. 78 ಮಾಜಿ ಐಎಎಸ್, ಐಪಿಎಸ್ ಅಧಿಕಾರಿಗಳು ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಅದರಲ್ಲಿ “ಕೃಷಿ ಕ್ಷೇತ್ರ ರಾಜ್ಯಗಳಿಗೆ ಸಂಬಂಧಪಟ್ಟಿದ್ದು, ಇಂಥದರಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಕೃಷಿ ಕಾನೂನುಗಳಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದು ಯಾಕೆ?” ಎಂದು ಪ್ರಶ್ನಿಸಿದ್ದಾರೆ. ಈ (ಮೋದಿ) ಕಾನೂನುಗಳು ಭಾರತದ ಸಂವಿಧಾನದ ಫೆಡರಲ್ ಸ್ವರೂಪದ ಮೇಲಿನ ದಾಳಿ ಎಂದು ಆತಂಕಪಡುತ್ತಾರೆ.
ಮುಂದೆ ಆ ಅನುಭವಸ್ಥ ನಿವೃತ್ತ ಉನ್ನತಾಧಿಕಾರಿಗಳು “ಈ ಕೃಷಿ ಕಾನೂನುಗಳು ನೇರವಾಗಿ ಬಾಧಿಸುವ ರೈತರ ಜತೆ ಸರಕಾರ ಅವುಗಳನ್ನು ಜಾರಿಗೊಳಿಸುವ ಮುನ್ನ ಚರ್ಚಿಸಿಲ್ಲ. ಸಂಸತ್‌ನಲ್ಲಿ ಕಾನೂನುಗಳ ವಿರುದ್ಧ ಕೇಳಿಬಂದ ಆಕ್ಷೇಪಗಳಿಗೆ ಸರ್ಕಾರ ಕಿವಿಗೊಟ್ಟಿಲ್ಲ. ಮಸೂದೆಗಳ ಕುರಿತು ಚರ್ಚೆಗೆ ಸಮಯಾವಕಾಶ ನೀಡಲಾಗಿರಲಿಲ್ಲ. ಹಾಗೂ ಗೊಂದಲಕಾರಿ ವಾತಾವರಣದ ನಡುವೆ ಧ್ವನಿಮತದಿಂದ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಇದು ಅನುಮಾನಾಸ್ಪದ” ಎನ್ನುತ್ತಾರೆ.
ಹೌದು, ಇದು ದಾಳಿ ಮತ್ತು ಅನುಮಾನಾಸ್ಪದ. ಕೋವಿಡ್ ಸಾಂಕ್ರಾಮಿಕದ ಈ ದಯನೀಯ, ದಾರುಣ ಕಾಲಮಾನದಲ್ಲಿ ಯಾರೂ ಉಸಿರೆತ್ತುವುದಿಲ್ಲ, ಇದೇ ಸರಿಯಾದ ಕಾಲ ಅಂದುಕೊಂಡು ಈ ಹಿಂದೆ ಬಿಜೆಪಿ ಸರ್ಕಾರ ಹಿಂತೆಗೆದುಕೊಂಡಿದ್ದ ಕೃಷಿ ಕಾನೂನುಗಳನ್ನು ಈಗ ಜಾರಿಗೊಳಿಸಲು ಹೊರಟಿದೆ. ಇದು ಕ್ರೌರ್ಯದ ಪರಮಾವಧಿ.
ಹೌದು, ಇದು ಸಂವಿಧಾನ, ಪ್ರಜಾಪ್ರಭುತ್ವ, ಭಾರತದ ಒಕ್ಕೂಟದ ಸ್ವರೂಪದ ಮೇಲೆ ಅಂದರೆ ಭಾರತ ಸ್ವಾತಂತ್ರ್ಯ ಪಡೆದ ಕನಸಿನ ಮೇಲೆ ನಡೆದ ದಾಳಿಯಾಗಿದೆ. ಅಂದರೆ ಇದು ಎಲ್ಲಾ ಪ್ರಜೆಗಳ ಮೇಲೆ ನಡೆಸಿದ ದಾಳಿಯಾಗಿದೆ.
ಹಾಗೆ ಇನ್ನೊಂದು ಕಿವಿಮಾತು. ಯಾವ ಕಡೆಗೂ ನೋಡದೆ ವೇಗವಾಗಿ ಚಲಿಸುತ್ತಿರುವವರಿಗೆ ಆಲಿಸಿ ಎಂದು ವಿನಂತಿಸುವೆ. 107 ದೇಶಗಳಲ್ಲಿ ನಡೆಸಲಾದ ಜಾಗತಿಕ ಹಸಿವಿನ ಸೂಚ್ಯಂಕ ಅಧ್ಯಯನದ ಪ್ರಕಾರ 2015- 2020ರ ಅವಧಿಯಲ್ಲಿ ಭಾರತ 94ನೇ ಸ್ಥಾನದಲ್ಲಿದ್ದು, ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದು ಮೋದಿ ಸಾಹೇಬರ ಜಮಾನದಲ್ಲೇ ಆಗಿದೆ. ಆಫ್ರಿಕಾದ ಕಡುಬಡರಾಷ್ಟ್ರ ಸೂಡಾನ್ ಜತೆ ಇದೆ. ಅಷ್ಟು ಮಾತ್ರವಲ್ಲ ಭಾರತದ ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಗಳ ಪರಿಸ್ಥಿತಿ ಭಾರತಕ್ಕಿಂತ ಉತ್ತಮವಾಗಿದೆ ಎಂದು ಆ ಅಧ್ಯಯನ ವರದಿ ಹೇಳುತ್ತದೆ. ಇಷ್ಟು ಸಾಕೇ? ಅಥವಾ ಮೋದಿ ಶಾ ಉಣಬಡಿಸುತ್ತಿರುವ ಮಾತಿನ ಮೃಷ್ಠಾನ್ನ ಭೋಜನ ಇನ್ನೂ ಬೇಕೆ?
ಇಂಥ ದಯಾನೀಯ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರ ಭಾರತದ ಆಹಾರ ಭದ್ರತೆ ಮೇಲೂ ದಾಳಿ ನಡೆಸುತ್ತಿದೆ. ಕೇಂದ್ರ ಸರ್ಕಾರ ನೇಮಿಸಿದ್ದ ಶಾಂತಕುಮಾರ್ ಕಮಿಟಿಯು ಈಗ ಆಹಾರ ಭದ್ರತೆಯ ಕಾನೂನು ಮುಖಾಂತರ ಶೇಕಡಾ 67 ರಷ್ಟು ನೀಡಲಾಗುತ್ತಿದ್ದ ಆಹಾರ ಪಡಿತರವನ್ನು ಶೇಕಡ 40ಕ್ಕೆ ಇಳಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಹಾಗಾಗಿಯೇ ಕೃಷಿಯ ಕತ್ತು ಹಿಸುಕುವ ಈ ಕಾನೂನುಗಳು ಬಂದಂತಿವೆ. ಪರಿಣಾಮ ಏನಾಗಬಹುದು?
ಈಗಾಗಲೇ ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ ಅಪೌಷ್ಠಿಕತೆಯಲ್ಲಿ ಭಾರತದ ಪಾಲು 1/3 ಭಾಗ ಇದೆ. ಆಫ್ರಿಕಾಗಿಂತ ದುಪ್ಪಟ್ಟು. ವಿಶ್ವಸಂಸ್ಥೆಯ ಆಹಾರ ಮತ್ತು ವ್ಯವಸಾಯ ಸಂಘಟನೆಯ ರಕ್ತಹೀನತೆಯ ಬಳಲುವಿಕೆಯ ಸರ್ವೇ ವರದಿ ಪ್ರಕಾರ 180 ದೇಶಗಳ ಪೈಕಿ ಭಾರತದ ಸ್ಥಾನ 170. ಹಾಗೇ ಮಕ್ಕಳ ಬೆಳವಣಿಗೆ ಕುಂಠಿತ ಸರ್ವೆಯಲ್ಲಿ 132 ದೇಶಗಳಲ್ಲಿ ಭಾರತದ ಸ್ಥಾನ 114. ಅಷ್ಟೇ ಯಾಕೆ ನಮ್ಮ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿ 2015-2020ರ ಅವಧಿಯಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದೇ ವರದಿ ಮಾಡಿದೆ. ಹೀಗಿರುವಾಗ ಮುಂದೇನು?
ಇನ್ನಾದರೂ ನಾವು ಕೇಳಬೇಕು – ಬಡತನದ, ಹಸಿವಿನ, ಅಪೌಷ್ಠಿಕತೆಯ, ರಕ್ತಹೀನತೆಯ ಅಭಿವೃದ್ದಿ ಮಾಡಿದ್ದು ಸಾಕು, ನಿಲ್ಲಿಸಿ ಎಂದು ಹೇಳಬೇಕು. ಬೆಲೆ ಏರಿಕೆಗೆ ಕಾರಣವಾಗುವ, ಕೃಷಿ ಆಧಾರ ಕಿತ್ತು ಗ್ರಾಮೀಣ ಸಮುದಾಯ ಬೇರು ಕಿತ್ತುಕೊಂಡು ನಗರಕ್ಕೆ ಜೋತು ಬೀಳುವ, ಸ್ಲಂ ಹೆಚ್ಚು ಮಾಡುವ ಸ್ಲಂ ಭಾರತ ನಮಗೆ ಬೇಡ ಎಂದು ಹೇಳಬೇಕು.
ಆದರೆ ಮೋದಿ-ಶಾರು ಕೇಳಿಸಿಕೊಳ್ಳುತ್ತಿಲ್ಲ. ತಮ್ಮ ಭ್ರಮೆ ಮತ್ತು ಸುಳ್ಳುಗಳಲ್ಲಿ ತಾವೇ ಹೂತು ಹೋಗಿದ್ದಾರೆ. ಇವರು ಮಿಥ್ಯಾವತಾರ ಪುರುಷರು. ಇವರಿಗೆ ಕಣ್ಣೂ ಕಾಣಿಸುತ್ತಿಲ್ಲ. ಕಿವಿಯೂ ಕೇಳಿಸುತ್ತಿಲ್ಲ. ಏನು ಮಾಡಬೇಕು? ‘ಗೊತ್ತು.. ಹೇಗೆ ಗೆಲ್ಲೋದು ಅಂತ ಗೊತ್ತು’ ಎಂಬ ಅಹಂಭಾವದಲ್ಲಿ ಅವರು ಇದ್ದಿರುವಂತಿದೆ. ಇಂತಹ ರಾಜಕಾರಣದ ಹಿಮ್ಮಡಿ ನರ ಕತ್ತರಿಸಿ, ಇವರ ಅಧಿಕಾರದ ಚಲನೆ ನಿಲ್ಲಿಸುವಂತಾದರೆ ಇವರಿಗೆ ಕಣ್ಣು ಕಾಣಿಸಬಹುದು, ಕಿವಿಯೂ ಕೇಳಿಸಬಹುದು. ಸಂವೇದನಾಶೀಲತೆ ಉಂಟಾಗಲೂಬಹುದು. ಇಂಥವರ ಒಳಗೂ ಮಾನವೀಯತೆ ಉಸಿರಾಡಬಹುದು. ಇದಕ್ಕಾಗಿ ಮತದಾರರತ್ತ ಎಲ್ಲರ ಚಿತ್ತ ನಡೆಯಬೇಕಾಗಿದೆ.