ಭೂಮ್ತಾಯ ಒಡಲಸೊಲ್ಲು-ಅವಿನಾಶ್ ಟಿ ಜಿ ಎಸ್

(ಜನವರಿ 14 ನೈಸರ್ಗಿಕ ಕೃಷಿ ತಜ್ಞ ನಾರಾಯಣ ರೆಡ್ಡಿಯವರ ಪುಣ್ಯತಿಥಿ. ತನ್ನಿಮಿತ್ತ ಬೆಳಕಿನ ಬೇಸಾಯವನ್ನು ಪ್ರಚುರಪಡಿಸುತ್ತಿರುವ ಕೃಷಿಕ ಅವಿನಾಶ್ ಟಿ ಜಿ ಎಸ್ ಅವರು 2021ರ ಜನವರಿ 11 ಮತ್ತು 12ರ ವಾರ್ತಾಭಾರತಿಗೆ ಎರಡು ಕಂತುಗಳಲ್ಲಿ ಬರೆದ ಬರಹದ ಒಟ್ಟು ರೂಪ ನಮಗಾಗಿ ಇಲ್ಲಿದೆ.)

ನಾರಾಯಣ ರೆಡ್ಡಿಯವರ ಹೆಸರು ಕೇಳಿದ ತಕ್ಷಣ ನನಗೆ ನೆನಪಿಗೆ ಬರುವುದು ಒಬ್ಬ ಸಾಮಾನ್ಯ ರೈತ ರಾಸಾಯನಿಕಗಳನ್ನು ಬಳಸದೆ ಕೃಷಿಯಲ್ಲಿ ನೆಮ್ಮದಿಯ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎನ್ನುವುದನ್ನು ಪ್ರಾತ್ಯಕ್ಷಿಕವಾಗಿ ನಿರೂಪಿಸಿದ ಮತ್ತು ಅದನ್ನು ಅನುಷ್ಟಾನಗೊಳಿಸಿದ ಅಸಾಮಾನ್ಯ ರೈತ ಎಂದು. ನನಗೆ ಅವರು ಕೃಷಿಯ ಗಾಂಧಿಯಂತೆ ಕಾಣುತ್ತಾರೆ.

ಕೃಷಿಯ ಬಗ್ಗೆ ನನಗೆ ಗಂಧಗಾಳಿಯಿಲ್ಲದ ಸಮಯ ಅದು. ಕೃಷಿಯನ್ನು ಮಾಡಬೇಕು ಮತ್ತು ಅದರಲ್ಲಿ ಯಶಸ್ಸನ್ನು ಕಾಣಬೇಕು ಎಂದು ತವಕಿಸುತ್ತಿದ್ದ ದಿನಗಳಲ್ಲಿ ನನ್ನಲ್ಲಿದ್ದ ಹತ್ತಾರು ಪ್ರಶ್ನೆಗಳಿಗೆ ಸರಳವಾದ, ಸ್ಪಷ್ಟ ಉತ್ತರವನ್ನು ಕೊಟ್ಟವರು ನಾರಾಯಣ ರೆಡ್ಡಿಯವರು. ರಾಸಾಯನಿಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯುವುದು ಬಹು ಸುಲಭದ ಕೆಲಸ ಎಂದು ಕೊಳ್ಳುತ್ತಿದ್ದ ಆ ಕಾಲಮಾನದಲ್ಲಿ ರಾಸಾಯನಿಕಗಳನ್ನು ಬಳಸದೆ ಬೆಳೆಗಳನ್ನು ಬೆಳೆಯಬಹುದು ಎಂದು ಹೇಳುವುದರ ಜೊತೆಯಲ್ಲಿ ಕೃಷಿಯ ವಿಜ್ಞಾನವನ್ನು ಬಹಳ ಸರಳವಾಗಿ ಅರ್ಥಮಾಡಿಸಿ ನನಗೆ ತಿಳಿ ಹೇಳಿ ನಾರಾಯಣ ರೆಡ್ಡಿಯವರು ನನ್ನ ಗುರುಗಳಾಗಿಬಿಟ್ಟರು.
ನಾನು ನಾರಾಯಣ ರೆಡ್ಡಿಯವರಿಂದ ಕಲಿತ ಮತ್ತು ತಿಳಿದ ಕೆಲವೊಂದು ಅನುಭವದ ಸಂಗತಿಗಳನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ ಇದು.

ಭೂಮಿಯೊಳಗಡೆ ಒಂದು ಅದ್ಬುತವಾದ ಪ್ರಂಪಂಚವಿದೆ, ಅದು ಜೀವಂತವಾಗಿದ್ದರೆ ಭೂಮಿಯ ಮೇಲಿರುವ ಪ್ರಪಂಚವೂ ಸದಾ ಜೀವಂತವಾಗಿರುತ್ತದೆ ಎಂದು ಹೇಳಿದ ಮೊದಲ ವ್ಯಕ್ತಿ ನಾರಾಯಣ ರೆಡ್ಡಿಯವರು. “ಭೂಮಿಯಲ್ಲಿ ಬೇರುಗಳ ಬೆಳೆಯುವಿಕೆಯಲ್ಲಿ, ಸೂಕ್ಷ್ಮ ಜೀವಾಣುಗಳ ಚಟುವಟಿಕೆ ಅಂದರೆ ಅವು ರಂಧ್ರಗಳನ್ನು ಮಾಡುವುದು, ಓಡಾಡುವುದು… ಭೌತಿಕ ಕ್ರಿಯೆ. “ಬೇರುಗಳ ರಸ ಮತ್ತು ಜೀವಾಣುಗಳು ಬಿಡುವ ಜೊಲ್ಲು… ರಾಸಾಯನಿಕ ಕ್ರಿಯೆ. “ಜೀವಾಣುಗಳು, ಎರೆಹುಳುಗಳು, ಕೀಟಗಳು, ಇತ್ಯಾದಿ ಮಣ್ಣಿನಲ್ಲಿ ಸಹಜವಾಗಿ ಸತ್ತರೆ ಅದು ಜೈವಿಕ ಕ್ರಿಯೆ” ಎನ್ನುವ ಅವರ ಸರಳ ಅನುಭವದ ಮಾತುಗಳು ಕೃಷಿ ವಿಜ್ಞಾನವನ್ನು ಬಹು ದೊಡ್ಡ ರಾಕೆಟ್ ಸೈನ್ಸ್ ಎಂದು ಬಿಂಬಿಸುವವರಿಗೆ ನಾರಾಯಣ ರೆಡ್ಡಿಯವರ ಇಂತಹ ಸರಳವಾದ ಮಾತುಗಳು ಉತ್ತರವಾಗಿತ್ತು.
ಈ ಮೇಲಿನ ಸಾಲುಗಳ ಅರ್ಥ ಇಷ್ಟೆ – ನಮ್ಮ ಕೃಷಿ ಭೂಮಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ಜಾತಿಯ ಗಿಡಮರಗಳಿದ್ದರೆ ಅದರ ಬೇರುಗಳು ಭೂಮಿಯನ್ನು ಸದಾ ಜೀವಿಂತವಾಗಿಡುವುದರ ಜೊತೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜೀವಾಣುಗಳನ್ನು ತನ್ನ ಒಡಲಲ್ಲಿ ಬೆಳೆಯುವಂತೆ ಮಾಡುತ್ತದೆ, ಹಾಗೇ ಜೀವಾಣುಗಳು ಮರಗಿಡಗಳಿಗೆ ಆಹಾರವನ್ನು ಒದಗಿಸುತ್ತಾ ತನಗೆ ಬೇಕಾದ ಆಹಾರವನ್ನು ಬೇರುಗಳಿಂದ ಪಡೆಯುತ್ತವೆ ಎಂದು ತಿಳಿಸುತ್ತಾ, ಹೇಗೆ ಏಕಬೆಳೆ ಪದ್ಧತಿ ಕೃಷಿಗೆ ಮಾರಕ, ಬಹು ಬೆಳೆ ಪದ್ಧತಿ ಕೃಷಿಗೆ ಪೂರಕ ಎನ್ನುವ ಅವರ ಮಾತಗಳು ನನ್ನ ಕಿವಿಯೊಳಗೆ ಈಗಲೂ ರಿಂಗಣಿಸುತ್ತಿವೆ.

ಹ್ಯೂಮಸ್ : ನನಗೆ ನೆನಪಿರುವ ಹಾಗೆ ಹ್ಯೂಮಸ್ ಎನ್ನುವ ಪದವನ್ನು ಹಾಗೂ ಹ್ಯೂಮಸ್‍ನಲ್ಲಿರುವ ಅದ್ಬುತವಾದ ಶಕ್ತಿಯನ್ನು ಪರಿಚಯಿಸಿದ್ದೂ ಕೂಡಾ ನಾರಾಯಣ ರೆಡ್ಡಿಯವರೆ. ತಮ್ಮ ಎಲ್ಲಾ ಭಾಷಣಗಳಲ್ಲಿ, ಮಾತುಗಳಲ್ಲಿ ಹ್ಯೂಮಸ್‍ನ ಮಹತ್ವವನ್ನು ಅವರು ಹೇಳುತ್ತಿದ್ದರು. “ನಮಗೆ ಈ ಸಬ್ಸಿಡಿಗಳು, ಈ ಡ್ಯಾಂಗಳು, ಸಾಲಸೋಲಗಳು ಯಾವುದೂ ಬೇಡ. ಭೂಮಿಯಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಂಗೆ ಹ್ಯೂಮಸ್ ಉಂಟಾಗುವಂತೆ ಮಾಡಿ, ಜೀವಾಣುಗಳು ಹೆಚ್ಚಳವಾಗಲು ಮಣ್ಣಿನಲ್ಲಿ ಸೂಕ್ಷ್ಮವಾತಾವರಣ ಸೃಷ್ಟಿಸುವುದು ಹಾಗೂ ಸಾವಯವ ಇಂಗಾಲವನ್ನು ಶೇ 4 ಕ್ಕಿಂತ ಹೆಚ್ಚಾಗಿಸಿ, ಅದನ್ನು ಕಪಾಡಿಕೊಳ್ಳುವುದನ್ನು ನಮ್ಮ ರೈತರಿಗೆ ಹೇಳ್ಕೊಟ್ಟುಬಿಟ್ರೇ ನೆಮ್ಮದಿಯಿಂದ ಬದುಕುತ್ತಾರೆ”ಎನ್ನುತ್ತಿದ್ದರು. ಅವರ ಕೃಷಿ ಭೂಮಿಯನ್ನೊಮ್ಮೆ ನೋಡಿದರೆ ಈ ಮಾತುಗಳು ಅರ್ಥವಾಗುತ್ತದೆ.

ಇದು ಅತೀ ಕಡಿಮೆ ಮಳೆ ಬರುವ ಪ್ರದೇಶದಲ್ಲೂ ಕೂಡಾ ಯಶಸ್ಸನ್ನು ಕಂಡಿದೆ. ಹ್ಯೂಮಸ್ ಉಂಟಾಗಲು ಗಿಡಮರಗಳ ತರಗುಗಳು ಅತ್ಯವಶ್ಯಕ. ಪ್ರತಿಯೊಂದು ಎಲೆಯೂ ಒಂದು ರೂಪಾಯಿಗೆ ಸಮ ಎನ್ನುತ್ತಿದ್ದ ಅವರು ತಮ್ಮ ಜಮೀನಿನಲ್ಲಿ ದೊರೆತ ಎಲೆಗಳನ್ನು ಭೂಮಿಗೆ ಮುಚ್ಚಿಗೆಯನ್ನಾಗಿ ಮಾಡುವುದರ ಜೊತೆಯಲ್ಲಿ ಸುತ್ತ ಮುತ್ತ ದೊರೆಯುತ್ತಿದ್ದ ಎಲೆತರಗುಗಳನ್ನು ಪ್ರೀತಿಯಿಂದ ಕೊಂಡೊಯ್ಯುತ್ತಿದ್ದರು. ಅದಕ್ಕಾಗಿಯೇ ಅವರ ಜಮೀನಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇ 4 ಕ್ಕಿಂತ ಹೆಚ್ಚಿತ್ತೆಂದು ಕೇಳಿದ್ದೇನೆ.

ಇನ್ನೊಂದು ಬಹಳ ಮುಖ್ಯವಾದ ವಿಷಯ ಎಂದರೆ ನಾರಾಯಣ ರೆಡ್ಡಿಯವರ ಕೃಷಿ ಭೂಮಿಯ ಸುತ್ತ ಮುತ್ತಲ ಪ್ರದೇಶದಲ್ಲಿ ಸುಮಾರು 800 ಅಡಿಗಳಿಂದ 1000 ಅಡಿಗಳವರಗೂ ಬೋರ್ವೆಲ್‍ಗಳನ್ನು ಕೊರೆಸಿದರೂ ಕೂಡಾ ನೀರು ಸಿಗದ ಪರಿಸ್ಥಿತಿ. ಆದರೆ ಇವರ ಜಮೀನಿನಲ್ಲಿ ಕೇವಲ 400 ಅಡಿಗಳಲ್ಲಿ ನೀರು ಸಿಗುತ್ತಿರುವುದು ದಾಖಲೆಯೇ ಸರಿ. ಇದಕ್ಕೆ ಕಾರಣ ಮರಗಿಡಗಳನ್ನು ಬೆಳೆಸಿರುವುದು, ಹ್ಯೂಮಸ್ ಹಾಗೂ ಸಾವಯವ ಇಂಗಾಲದ ಪ್ರಮಾಣ ಶೇ 4 ಕ್ಕಿಂತ ಹೆಚ್ಚಿರುವುದು. ಈ ವಿಚಾರಗಳನ್ನು ಅವರು ಬರಿ ಮಾತಲ್ಲಿ ಹೇಳುತ್ತಿರಲಿಲ್ಲ; ಕಣ್ಣಿಗೆ ಕಾಣುವಂತೆ ತೋರಿಸುತ್ತಿದ್ದರು.

ನಾನು ಅವರನ್ನು ಭೇಟಿಯಾದಾಗಲೆಲ್ಲಾ ಒಂದಲ್ಲ ಒಂದು ವಿಷಯದ ಬಗ್ಗೆ ಪ್ರಸ್ತಾಪ ಇದ್ದೇ ಇರುತ್ತಿತ್ತು.
‘ಕೆಲವರು ನಾಟಿ ಹಸು ಇದ್ದರೆ ಮಾತ್ರ ನೈಸರ್ಗಿಕ ಕೃಷಿ ಅಥವಾ ಸಹಜ ಕೃಷಿ ಮಾಡಬಹುದು ಇಲ್ಲದಿದ್ದರೆ ಕೃಷಿ ಮಾಡೋಕ್ಕಾಗೊಲ್ಲ ಎಂಬ ಅಭಿಪ್ರಾಯ ಇದೆಯಲ್ಲಾ ಸರ್’ ಎನ್ನುವ ಪ್ರಶ್ನೆಯನ್ನು ಅವರ ಮುಂದಿಟ್ಟೆ. ಆಗ ಅವರು – “ನಾಟಿ ಹಸು ಕೃಷಿಗೆ ಮೂಲ ನಿಜ. ಬೇರೆ ಜಾತಿಯ ಹಸುವಿಗಿಂತ ಅತೀ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಅದರೆ ಇದೇ ಬೇಕು ಅಂದರೆ ರೈತರು ಎಲ್ಲಿಗೆ ಹೋಗಬೇಕು? ಕಷ್ಟ ಆಗುತ್ತಪ್ಪಾ. ಇರೋದ್ರಲ್ಲೆ ಏನಾದ್ರು ಮಾಡಕ್ಕಾಗುತ್ತಾ ಅಂತಾನೂ ನೋಡಬೇಕು. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದು ಒಬ್ಬ ರೈತ ನಾಟಿ ಹಸುವಿನ ಬದಲು ಹೆಚ್. ಎಫ್ ಜರ್ಸಿಯನ್ನು ಸಾಕಿ, ವರ್ಮಿ ಕಾಂಪೋಶ್ಟ್ ತಯಾರಿಸಿ, ಅನಿವಾರ್ಯವಾದರೆ ಹೈಬ್ರಿಡ್ ತಳಿಗಳನ್ನು ಬಳಸಿದರೆ ಅದನ್ನು ಅಪರಾಧ ಎಂದು ನೋಡಬೇಕಾಗಿಲ್ಲ. ಆಯಾ ವಾತಾವರಣಕ್ಕೆ ತಕ್ಕಂತೆ, ಅವನ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ, ಕೃಷಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡ್ಕೋಬೇಕಾಗುತ್ತೆ” – ಇದು ನಾರಾಯಣ ರೆಡ್ಡಿಯವರ ಉತ್ತರವಾಗಿತ್ತು. ಜೀವನದ ಕಷ್ಟ ಸುಖ ಉಂಡವರಂತೆ, ಏಳುಬೀಳು ಕಂಡವರಂತೆ ಅವರ ಮಾತುಗಳು ಇರುತ್ತಿದ್ದವು.

ನಾಟಿ ಹಸುವಿನ ಸಗಣಿ ಮತ್ತು ಗಂಜಳ ಎಷ್ಟೇ ಶ್ರೇಷ್ಟ ಎಂದರೂ ಕೂಡ ಹೆಚ್ಚು ಹಾಲು ಕೊಡೋದಿಲ್ಲ ಎನ್ನುವ ವಾದವನ್ನು ಮುಂದಿಟ್ಟು ಹೈಬ್ರಿಡ್ ತಳಿಗಳ ಮೊರೆ ಹೊಗುತ್ತಿದ್ದಾರೆ ನಮ್ಮ ರೈತರು. ಇದನ್ನು ನಾವು ಅರ್ಥಮಾಡಿಕೊಂಡು ಮುಂದಿನ ಹೆಚ್ಚೆಗಳನ್ನು ಇಡಬೇಕು. ಎಲ್ಲಿಯವರೆಗೆ ನಾವು ನಾಟಿ ಹಸುವಿನ ತಳಿಗಳ ಬಗ್ಗೆ, ಪಶು ಆಹಾರದ ಬಗ್ಗೆ ಜಾಗೃತಿಯನ್ನು ಮೂಡಿಸಿ, ಹಾಲಿನ ಪ್ರಮಾಣದಲ್ಲಿ ಗಣನೀಯ ಏರಿಕೆಯನ್ನು ತೋರಿಸುವುದಿಲ್ಲವೊ ಅಲ್ಲಿಯವರೆಗೂ ನೀನು ಹೀಗೆ ಮಾಡು, ಇದನ್ನೆ ಮಾಡು ಎಂದು ಹೇಳುವುದಕ್ಕಿಂತ ಆಯಾ ರೈತರಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೆಲ್ಲಾ ಕ್ರೋಢೀಕರಿಸಿ, ಅದರಿಂದಲೆ ಯಶಸ್ಸಿನ ಹಾದಿಯನ್ನು ಕಾಣಿಸಬೇಕಾಗಿದೆ. ಇದು ನಾವಿಡುವ ಮೊದಲ ಹೆಚ್ಚೆಯಾಗಬಹುದು.

ನಾವು ಪ್ರಸ್ತುತ ಅಳವಡಿಸಿಕೊಂಡಿರುವ ಹತ್ತಾರು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳ ಬಗ್ಗೆ ಮಾತನಾಡುತ್ತಾ “ಇಷ್ಟೊಂದು ಪದ್ಧತಿಗಳು ರೈತರಿಗೆ ಕನ್‍ಪ್ಯೂಸ್ ಮಾಡುತ್ತಿವೆ ಸರ್, ಒಬ್ಬರು ಒಂದೊದು ತರವಾದ ಪದ್ಧತಿಗಳನ್ನು ಅನುಸರಿಸುತ್ತಿದ್ಧಾರೆ, ನಾವ್ಯಾಕೆ ಅವರೆಲ್ಲರನ್ನು ಒಟ್ಟುಗೂಡಿಸಿ ಒಂದು ನಿರ್ದಿಷ್ಟವಾದ ಪದ್ಧತಿಯನ್ನು ರೈತರಿಗೆ ಪರಿಚಯಿಸಬಾರದು?” ಎಂದು ಕೇಳಿದ್ದೆ.
‘ನನ್ನ ಮಾತು ಯಾರು ಕೇಳ್ತಾರಪ್ಪಾ, ನಾನು ಸಾವಯವ ಕೃಷಿ ಅಂತೀನಿ, ಇನ್ನೊಬ್ಬರದು ಇನ್ನೊಂದು ಹೆಸರು, ಯಾಕೆ ನೀವೆ ಬೆಳಕಿನ ಬೇಸಾಯ ಅಂತೀಲ್ವೇನು? ಹೆಸರಲ್ಲೇನಿದೆ, ಬೇಸಿಕ್ ಸೈೀನ್ಸ್ ಮರಿಬಾರದು. ನಾನು ಹೆಚ್ ಎಫ್, ಜರ್ಸಿ ಹಸು ಸಾಕಿದರೂ ಪರವಾಗಿಲ್ಲ, ಅಗತ್ಯ ಬಿದ್ದರೆ ಸ್ವಲ್ಪ ಪ್ರಮಾಣದ ರಾಸಾಯನಿಕಗಳನ್ನು ಮೊದಮೊದಲು ಬಳಸಿ ಅಂತೀನಿ. ಉಳುಮೆ ಮಾಡೊದಾದರೆ 2 ರಿಂದ 3 ಇಂಚು ಮಾಡಿ ಅಂತೀನಿ, ಅನಿವಾರ್ಯವಾದರೆ ಬೋರ್ವೆಲ್ ಕೊರೆಸೋದನ್ನ ಸಮರ್ಥಿಸ್ತಿನಿ. ನಾವು ಒಂದೊಂದೆ ಹೆಜ್ಜೆ ಮುಂದಿಡಬೇಕಲ್ಲವೆ? ಎಲ್ಲಿಯವರೆಗೂ ರೈತರ ಕಷ್ಟ, ಸುಖ ಅರ್ಥಮಾಡಿಕೊಂಡು ಅವರ ಬಗ್ಗೆ ಗೌರವ, ಕೃಷಿಯ ಬಗ್ಗೆ ಅರಿವನ್ನು ನಾವು ಹೊಂದೊದಿಲ್ಲವೋ ಅಲ್ಲಿಯವರೆಗೂ ಈ ಪ್ರಶ್ನೆಗೆ ಉತ್ತರ ದೊರಕುವುದಿಲ್ಲ’ ಎಂದರು.

ನಾನು ಅಷ್ಟಕ್ಕೇ ಬಿಡಲಿಲ್ಲ – “ಅದು ಹೇಗೆ ಸರ್, ಫುಕುವೊಕಾರವರು, ದಾಬೋಲ್ಕರ್, ಸಾವೆಯವರು, ನೀವು, ಪಾಲೇಕರ್ ರೈತರಿಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು ಕೆಲಸ ಮಾಡಿದವರು. ನಿಮ್ಮ ಮತ್ತು ಅವರೆಲ್ಲರ ಪದ್ಧತಿಯೇ ಅಲ್ಲವಾ ಸರ್ ನಾವೆಲ್ಲಾ ಅಳವಡಿಸಿಕೊಂಡಿರೊದು. ಹೆಸರು ಮಾತ್ರ ಬೇರೆ ಬೇರೆ ಇದೆ. ಇವೆಲ್ಲವನ್ನು ಒಟ್ಟುಗೂಡಿಸಿ ನಮ್ಮ ರೈತರಿಗೆ ಯಾಕೆ ಪರಿಚಯಿಸಬಾರದು?” ಎಂದು ಮತ್ತೆ ಕೇಳಿದೆ. ಈ ಪ್ರಶ್ನೆಗೆ ಅವರು ಉತ್ತರಿಸುತ್ತಾ “ನಿಜ, ಅವರೆಲ್ಲರು ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ಲಕ್ಷಾಂತರ ರೈತರಿಗೆ ಅನುಕೂಲ ಆಗಿದೆ. ಆದರೆ ಏನ್ ಮಾಡೊದು ಇವತ್ತು ನಾನು- ಪಾಲೇಕರ್ ಮಾತ್ರ ಇದೀವಿ. ಆ ಪಾಲೇಕರ್‍ಗೆ ಶೂನ್ಯ ಬಂಡವಾಳ ಕೃಷಿನೇ ಗ್ರೇಟ್. ನಮ್ದು ಕೃಷಿ ಪದ್ಧತಿನೇ ಅಲ್ಲ ಅಂತಾರಂತೆ” ಅಂದು ಮೌನವಾದರು. ಅದಕ್ಕೆ ನಾನು – “ಎಲ್ಲರನ್ನೂ ಸೇರಿಸೋ ಪ್ರಯತ್ನ ಅಷ್ಟೆ ಸರ್ ನನ್ನ ಆಸೆ” ಎಂದು ಹೇಳಿ ಮಾತನ್ನು ಬದಲಾಯಿಸಿದೆ. “ಸರ್, ಅಲ್ಲಲ್ಲಿ ಗಿಡಗಳ ಕೆನಾಪಿಯ ನೇರಕ್ಕೆ ಚಿಕ್ಕ ಚಿಕ್ಕ ಗುಂಡಿಗಳನ್ನು ಮಾಡಿದ್ದೀರಲ್ಲ ಏನಕ್ಕೆ ಸರ್?” ಎಂದು ಕೇಳಿದೆ. “ಆಯಾ ಗಿಡದ ಕೆನಾಪಿಗೆ ತಕ್ಕಂತೆ ನಾವು ನೀರನ್ನು ಕೊಡಬೇಕು. ಆಗ ಆ ಬೇರುಗಳು ಆ ನೀರಿನ ತೇವಾಂಶವನ್ನು ಹೀರಿಕೊಳ್ಳಲು ಸುಲಭವಾಗುತ್ತೆ. ಅದಕ್ಕೆ ಅಲ್ಲಲ್ಲಿ ಮಾಡಿದಿವಿ” ಎಂದರು.

ಅವರ ಮಾತುಗಳು ನನಗೆ ಅರ್ಥಮಾಡಿಸಿತ್ತು – ಸಾಮಾನ್ಯವಾಗಿ ಗಿಡಮರಗಳ ಎಲೆಯ ತುದಿಯ ವಿಸ್ತೀರ್ಣದವರೆಗೂ ಬೇರುಗಳು ಬೆಳೆದಿರುತ್ತವೆ. ಆ ಕಟ್ಟ ಕಡೆ ತುದಿಯ ಬೇರು ಮಾತ್ರ ನೀರಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಒಂದು ವೇಳೆ ಆ ಗಿಡಮರಗಳ ಬುಡಕ್ಕೆ ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ನಿರಂತರವಾಗಿ ಕೊಡುವುದರಿಂದ ಬೇರುಗಳು ಹೆಚ್ಚು ಉದ್ದ ಬೆಳೆಯದೆ ಗಟ್ಟಿಯಾಗಿ ನಿಲ್ಲಬೇಕಿದ್ದ ಮರಗಿಡಗಳು ಅತೀ ಕಡಿಮೆ ಒತ್ತಡದಲ್ಲಿ ಗಾಳಿ ಬೀಸಿದರೂ ಬಿದ್ದು ಹೋಗುವ ಪರಿಸ್ಥಿತಿ ಎದುರಾಗುತ್ತದೆ ಎನ್ನುವುದನ್ನು ಮನಗಂಡೆ.

ನಾರಾಯಣ ರೆಡ್ಡಿಯವರು ಪ್ರತಿಯೊಂದು ವಿಷಯದ ಬಗ್ಗೆನೂ ಆಳವಾಗಿ, ಕೂಲಕುಂಶವಾಗಿ ಅಧ್ಯಯನ ಮಾಡುತ್ತ, ಸಾಧ್ಯತೆ ಬಾಧ್ಯತೆಗಳನ್ನು ನೋಡುತ್ತಾ, ತಮ್ಮ ಜಮೀನಿನಲ್ಲಿ ಸತತವಾಗಿ ಪ್ರಯೋಗಗಳನ್ನು ಮಾಡುತ್ತಾ ಯಶಸ್ಸನ್ನು ಕಂಡು ಆ ನಂತರ ಇತರರಿಗೆ ಹೇಳುತ್ತಿದ್ದರು. ಕೃಷಿಯ ಯಶಸ್ಸಿಗೆ ಬೇರೆಯವರು ಕಂಡು ಹಿಡಿದ ಅಥವಾ ಯಶಸ್ವಿಯಾದ ಯಾವುದೇ ಪದ್ಧತಿಗಳನ್ನು ಅಥವಾ ವಿಚಾರಗಳನ್ನು ಒಪ್ಪಿಕೊಳ್ಳುವ ವಿಶಾಲ ಮನಸ್ಸು ಅವರಿಗಿತ್ತು. ಯಾವುದಾದರೂ ಆಗಲಿ ಅದು ರೈತರಿಗೆ ಒಳ್ಳೆದು ಮಾಡಲಪ್ಪ ಎನ್ನುವ ಅವರ ಅಂತಃಕರಣದಿಂದಲೆ ನಾರಾಯಣ ರೆಡ್ಡಿಯವರು ನಮಗೆ ದೊಡ್ಡವರಾಗಿ ಕಾಣುತ್ತಾರೆ.
ಇನ್ನೊಮ್ಮೆ ಹೀಗೆ ಮಾತಿಗೆ ಕೂತಾಗ ‘ಏನು ನೀವು ನಿಮ್ಮ ತೋಟವನ್ನು ಒಂದು ಯೂನಿವರ್ಸಿಟಿ ಮಾಡಲು ಹೊರಟಿದ್ದೀರಂತೆ?” ಎಂದು ಕೇಳಿದರು. ಅದಕ್ಕೆ ನಾನು, “ಹಾಗೇನಿಲ್ಲ ಸರ್, ಪಾಲೇಕರ್‍ರವರು ನಮ್ಮ ತೋಟಕ್ಕೆ ಭೇಟಿ ಕೊಟ್ಟಿದ್ದರು, ಆ ಸಂಧರ್ಬದಲ್ಲಿ ಯುನಿವರ್ಸಿಟಿ ಮಾತು ಬಂತು ಅಷ್ಟೆ’ ಎಂದೆ. ಅದಕ್ಕವರು ‘ಮಾಡಿ, ಮಾಡಿ… ರೈತರಿಗೆ ಅನುಕೂಲವಾಗುತ್ತೆ ಎನ್ನುವುದಾದರೆ ಅದಕ್ಕಿಂತ ಒಳ್ಳೆಯ ಕೆಲಸ ಬೇರೆ ಏನಿದೆ?” ಎಂದರು. ನಾನು ಮಾತು ಮುಂದುವರೆಸುತ್ತಾ, ಕರ್ನಾಟಕ ಪ್ರತಿಯೊಂದು ಹಳ್ಳಿಯಲ್ಲೂ ಒಂದೊಂದು ಮಾದರಿ ತೋಟವನ್ನು (ರಾಸಾಯನಿಕ ಮುಕ್ತ ಕೃಷಿ ಪದ್ಧತಿಯಡಿ) ಕಟ್ಟುವ ಕನಸಿದೆ, ಈ ಕೆಲಸಕ್ಕೆ ನೀವೇ ಮುಂದಾಳತ್ವವನ್ನು ವಹಿಸಿಕೊಂಡು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಬೇಕೆಂಬ ಬೇಡಿಕೆಯನ್ನು ಅವರ ಮುಂದಿಟ್ಟೆ. ಸ್ವಲ್ಪ ಹೊತ್ತು ಯೋಚಿಸುತ್ತಾ ನಿಧಾನವಾಗಿ ಹೇಳಿದರು- “ಆದು ಅಷ್ಟು ಸುಲಭದ ಕೆಲಸವಲ್ಲ, ನನಗೂ ವಯಸ್ಸಾಗುತ್ತಾ ಇದೆ, ಎಷ್ಟು ಅಂತ ಓಡಾಡಲಿ. ನಿಮ್ಮ ಪ್ರಯತ್ನವನ್ನು ಮುಂದುವರೆಸಿ ಒಳ್ಳೆಯದಾಗಲಿ” ಅಂತ ಹೃದಯ ತುಂಬಿ ಹಾರೈಸಿದರು. ಆಮೇಲೆ ನಿಧಾನವಾಗಿ ಹೇಳಿದರು – “ನೋಡಿ ಮೊದಲು ಆ ಹಳ್ಳಿಯ ವಾತಾವರಣಕ್ಕೆ ಅನುಗುಣವಾಗಿ, ಮಣ್ಣಿನ ಗುಣವನ್ನು ಪರೀಕ್ಷಿಸಿ, ನೀರಿನ ಲಭ್ಯತೆಯನ್ನು ತಿಳಿದು ಆ ನಂತರ ಆಯಾ ಜಾಗಕ್ಕೆ ಸೂಕ್ತವಾದ ಗಿಡಮರಗಳನ್ನು ಆಯ್ಕೆ ಮಾಡಬೇಕು. ಇದೆಲ್ಲದರ ಜೊತೆಯಲ್ಲಿ ಮುಖ್ಯವಾಗಿ ಹ್ಯೂಮಸ್ ಹಾಗೂ ಸಾವಯವ ಇಂಗಾಲದ ಪ್ರಮಾಣವನ್ನು ಹೆಚ್ಚಿಸುವಂತಹ ಕೆಲಸ ಮಾಡಬೇಕು. ಇಷ್ಟು ನೀವು ಮಾಡಿದರೆ ಸಾಕು ತಂನ್‍ತಾನೆ ತೋಟ ತಯಾರಾಗುತ್ತದೆ” ಎಂದರು.

ಪ್ರತಿ 8 ಕೀಲೋ ಮೀಟರ್‍ಗೂ ವಾತಾವರಣದಲ್ಲಿ, ಮಳೆಯ ಪ್ರಮಾಣದಲ್ಲಿ, ಮಣ್ಣಿನ ಲಕ್ಷಣದಲ್ಲಿ, ರೋಗ ಲಕ್ಷಣದಲ್ಲಿ, ಗಾಳಿಯ ಒತ್ತಡ ಕೂಡಾ ಬದಲಾಗುತ್ತಿರುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಬೆಳೆಗಳ ಆಯ್ಕೆಯನ್ನು ಮಾಡಿಕೊಳ್ಳಬೇಕು. ಹಾಗೂ ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆಗಳನ್ನು ಆಯೋಚಿಸಿಕೊಳ್ಳಬೇಕು ಎಂಬಿತ್ಯಾದಿ ಗಹನ ಸಂಗತಿಗಳು ಅವರೂಡನೆ ಒಡನಾಡುತ್ತಿದ್ದರೆ ಅವು ನಮ್ಮ ಅರಿವಿಗೆ ಇಳಿಯುತ್ತಿತ್ತು.
ನಾರಾಯಣ ರೆಡ್ಡಿಯವರನ್ನ ಮತ್ತು ಪಾಲೇಕರ್‍ರವರನ್ನ ಒಂದೆ ವೇದಿಕೆಯಲ್ಲಿ ನೋಡುವ ತವಕ ಬಹು ದಿನಗಳದ್ದು. ನಾನು ಆಯೋಜಿಸಿದ್ದ ಪಾಲೇಕರ್ ಅವರ 5 ದಿನಗಳ ಕಾರ್ಯಾಗಾರಕ್ಕೆ ರೆಡ್ಡಿಯವರನ್ನು ಆಹ್ವಾನಿಸಲು ಹೋದಾಗ ಪಾಲೇಕರ್ ಅವರ ಶೂನ್ಯ ಬಂಡವಾಳ ಕೃಷಿ ಪರಿಕಲ್ಪನೆ ಬಗ್ಗೆ ಮಾತು ಬಂತು. ನಾರಾಯಣ ರೆಡ್ಡಿಯವರು, “ಏನ್ ಶೂನ್ಯ ಬಂಡವಾಳ ರೀ ಅದು? ಕೃಷಿಗೆ ಬಂಡವಾಳ ಬೇಕೆ ಬೇಕು” ಎನ್ನುತ್ತಿದ್ದಂತೆ ಮಧ್ಯೆ ನಾನು ಮಾತನಾಡಿ “ಸರ್ ಶೂನ್ಯ ಬಂಡವಾಳದ ಕೃಷಿ ಎಂದರೆ ಮುಖ್ಯ ಬೆಳೆಗಳಿಗಾಗುವ ಖರ್ಚನ್ನು ಅಂತರ್ಬೆಳೆಗಳಿಂದ ಪಡೆಯುವುದು ಅಂತಾ ಸರ್” ಎಂದೆ. “ಅಂತರ್ಬೆಳೆಗಳನ್ನು ಬೆಳೆಯುವುದಕ್ಕಾದರೂ ಖರ್ಚಾಗುತ್ತದಲ್ಲಪ್ಪಾ, ಹೆಂಗೆ ಶೂನ್ಯ ಬಂಡವಾಳ ಅಂತ ಹೇಳ್ತಾರೆ? ಜೀವಾಮೃತವನ್ನು ಮಾತ್ರ ನಾನು ಒಪ್ಪುತ್ತಿನಿ. ಆದರೆ ಅವರ ಇಡಿ ಸಿದ್ಧಾಂತವನ್ನಲ್ಲ” ಅಂದರು.

ಆಮೇಲೆ, ತಮ್ಮ ಮಾತನ್ನು ಮುಂದುವರೆಸುತ್ತಾ – “ಕೃಷಿ ವಿಜ್ಞಾನ ಬಹಳ ಹಿಂದಿನಿಂದಲೂ ಇದೆ. ಕೃಷಿ ಯುನಿವರ್ಸಿಟಿ ಬಂದ ಮೇಲೆ ಸವಿವರವಾಗಿ ಒಂದು ಪಠ್ಯ ಕ್ರಮದಲ್ಲಿ ಕೃಷಿ ವಿಜ್ಞಾನ ನಮಗೆ ಅರ್ಥವಾಯಿತು. ಒಂದು ಕಡೆ ವಿಜ್ಞಾನ ಮತ್ತು ಆರಂಭ ಮಾಡುವಾಗ ದೊರೆತ ಅನುಭವದ ಜ್ಞಾನ, ಈ ಎರಡನ್ನೂ ಸೇರಿಸಿ ನಾವು ರೈತರಿಗೆ ಹೇಳಬೇಕು. ಒಬ್ಬ ಸಾಮಾನ್ಯ ರೈತನಿಗೆ ಭೂಮಿಯಲ್ಲಿ ಏನು ಮಾಡಬೇಕು ಅಂತ ಗೊತ್ತಾಗಿಸಬೇಕು” ಎಂದು ಹೇಳಿದ ಮೇಲೆ ಸ್ವಲ್ಪ ಹೊತ್ತು ಯೋಚಿಸುತ್ತಿದ್ದು, ಆಮೇಲೆ ಹೇಳಿದರು – “ನಮ್ಮ ಕೃಷಿ ವಿಜ್ಞಾನಿಗಳನ್ನ ಬೈಕೊಂಡು ಓಡಾಡ್ತಾರೆ, ಆಮೇಲೆ ನೈಸರ್ಗಿಕ ಕೃಷಿ ವಿಜ್ಞಾನ ನಂದೆ ಎನ್ನುವ ಅವರ ಧೋರಣೆ ಇದೆಯಲ್ಲ ಅದು ನನಗೆ ತುಂಬಾ ಮುಜುಗರ. ಆಮೇಲೆ ಪಾಲೇಕರ್‍ರವರು, ಒಂದು ಎಕರೆಗೆ ಇಷ್ಟೆ ದುಡ್ಡು ಬರುತ್ತೆ ಅಂತಾರಂತೆ. ಅದು ಆರು ಲಕ್ಷನೋ ಏಳು ಲಕ್ಷನೋ ಇರಬೇಕು. ಇಷ್ಟು ದುಡ್ಡು ದುಡಿದವರು ಯಾರಿದ್ದಾರೆ? ಪಾಲೇಕರ್ ಆದರೂ ಬೆಳೆದಿದ್ದಾರ ಎಂದರೆ, ಅವರ ತೋಟನೇ ಇಲ್ಲ ಅಂತ ಹೇಳ್ತಾರಲ್ಲಪ್ಪ” ಎಂದು ಮತ್ತೆ ಮೌನವಾದರು.

ನಾನೇ ಮಾತು ಆರಂಭಿಸಿ, ಸುಮಾರು 20 ಲಕ್ಷಕ್ಕೂ ಹೆಚ್ಚು ರೈತರು ಅವರ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರಂತೆ ಎಂದೆ. ಅದಕ್ಕವರು “ನೋಡಿ ಇಲ್ಲಿ ನಂಬರ್ ಮುಖ್ಯ ಅಲ್ಲ. ಆ ರೈತ ನಿಜವಾಗಿಯೂ ಖುಷಿಯಿಂದ ಇದ್ದಾನಾ? ನಾಲ್ಕು ಕಾಸು ಸಂಪಾದಿಸಿದ್ದಾನಾ? ನೆಮ್ಮದಿ ಜೀವನ ಸಿಕ್ಕಿದಿಯಾ ಅನ್ನೋದು ಮುಖ್ಯ ಆಗುತ್ತೆ. ನನ್ನಿಂದ ಕಲಿತವರು ಸುಮಾರು ನಲವತ್ತು ಸಾವಿರಕ್ಕಿಂತಲೂ ಜಾಸ್ತಿಯಿದ್ದಾರೆ. ನನ್ನ ತೋಟಕ್ಕೆ ಸಾವಿರಾರು ಮಂದಿ ಬಂದಿದ್ದಾರೆ. ಕಣ್ಣಾರೆ ನೋಡಿದ್ದಾರೆ. ನಾನು ಸುಮಾರು ರೈತರ ತೋಟಕ್ಕೆ ಹೋಗಿ ಸಲಹೆ ಸೂಚನೆ ಕೊಡುತ್ತೀನಿ. ಆಗ ಆ ರೈತನಿಗೆ ಅರ್ಥ ಆಗುತ್ತೆ. ಬರೀ ಭಾಷಣದಿಂದ ರೈತರನ್ನು ಉದ್ಧಾರ ಮಾಡೋಕಾಗೋಲ್ಲ. ನನ್ನ ತೋಟದಲ್ಲಿ ತೋಟದಲ್ಲಿ ಬೆಳೆದಿರುವ ಬೆಳೆಗಳ ಇಳುವರಿಯ ಬಗ್ಗೆ ಖಚಿತವಾದ ಮಾಹಿತಿಯನ್ನು ಕೊಡ್ತೀನಿ. ಸುಮ್ನೇ ಹಾರಿಕೆಯ ಉತ್ತರ ಕೊಡೊದಿಲ್ಲ. ಪ್ರತಿಯೊಂದು ಬೆಳೆಗೂ ನಿರ್ಧಿಷ್ಟವಾದ ಕೆಲಸ ಇರುತ್ತೆ. ರೋಗ ರುಜಿನಗಳ ಬಗ್ಗೆ, ಪೋಷಕಾಂಶಗಳ ಬಗ್ಗೆ, ನೀರಿನ ಅವಶ್ಯಕತೆಯ ಬಗ್ಗೆ, ಸಾಕಷ್ಟು ಅಧ್ಯಯನ ಮಾಡಬೇಕಾಗುತ್ತೆ. ಬರಿ ಜೀವಾಮೃತ, ಬೀಜಾಮೃತ ಅಂದರೆ ಸಾಕಾಗೊಲ್ಲ. ನಾವು ಯಾವಾಗಲೂ ಮಣ್ಣಲ್ಲಿ ನಿಂತು ಕೆಲಸ ಮಾಡಬೇಕು. ಇಲ್ಲಾಂದ್ರೆ ಜನಗಳ ಬಾಯಿ ಮುಚ್ಚಿಸೊಕೆ ಸುಳ್ಳು ಹೇಳಬೇಕಾಗುತ್ತೆ” ಎಂದರು.

ಮಾತು ಹಾಗೆ ಮುಂದುವರಿಯುತ್ತಾ, “ಶೂನ್ಯ ಬಂಡವಾಳ ಎನ್ನುವ ಪದ ತಪ್ಪು ಎನ್ನುವುದಾದರೆ ನೀವು ಹೇಳುವ ಸಾವಯವ ಕೃಷಿ ಎನ್ನುವ ಪದವೂ ನನಗೆ ಬೇರೆ ರೀತಿ ಕಾಣುತ್ತದೆ ಸರ್. ಇಂದು ಸಾವಯವ ಕೃಷಿಯಲ್ಲೂ ಕೂಡಾ ಒಳಸುರಿ ದಂಧೆ ಹೆಚ್ಚಾಗಿದೆ. ಅಂದರೆ ಸಾವಯವ ಗೊಬ್ಬರಗಳು, ಕ್ರಿಮಿನಾಶಕಗಳು, ಕಳೆನಾಶಕ ಮತ್ತು ಬಹಳ ಮುಖ್ಯವಾಗಿ ಒಂದು ಎಕರೆಗೆ ಹತ್ತಾರು ಟ್ರಾಕ್ಟರ್ ಗೊಬ್ಬರವನ್ನು ಹಾಕುವುದು, ಒಟ್ಟಿನಲ್ಲಿ ಬೇಸಾಯಕ್ಕಾಗುವ ಖರ್ಚು ಮಾತ್ರ ಕಮ್ಮಿ ಅಗಲ್ಲ. ಇದಕ್ಕೆ ಏನ್ ಮಾಡೊದು ಸರ್” ಎಂದೆ. ಅವರ ಉತ್ತರ ಸರಳವಾಗಿತ್ತು- “ನೋಡಿ ಸಾವಯವ ಕೃಷಿ ಎಂದರೆ ಸಾವಯವ ಪದಾರ್ಥಗಳನ್ನು ಬಳಸಿ ಮಾಡುವ ಕೃಷಿ. ನಾವು ಏನನ್ನು ಹೊರಗಡೆಯಿಂದ ತರಬೇಕಾಗಿಲ್ಲ. ಹಸು ಇದ್ರೆ ಸಾಕು. ಅದು ಹೆಚ್ ಎಫ್ ಆದರೂ ಸರಿಯೇ, ನಾಟಿ ಹಸು ಆದರೂ ಸರಿಯೇ. ಮಳೆಗಾಲದಲ್ಲಿ ಒಂದಿಂಚು ಜಾಗ ಬಿಡದೆ ಏನನ್ನಾದರು ಬೆಳಿರಿ. ಆ ತ್ಯಾಜ್ಯಗಳನ್ನು ಅಲ್ಲೆ ಬಿಡಿ. ಒಂದಷ್ಟು ದಿನದಲ್ಲಿ ಅದು ಮಣ್ಣಿನಲ್ಲಿ ಕಳೆತು ಗೊಬ್ಬರವಾಗುತ್ತೆ. ಮುಂದೆ ಒಂದು ದಿನ ಅದೆ ಹ್ಯೂಮಸ್ ಆಗುತ್ತೆ. ಭೂಮಿಗೆ ನೆರಳು ಕೊಡೊಕಂತ ಒಂದಷ್ಟು ಬೆಳೆಗಳಿಗೆ ಪೂರಕವಾದ ಗಿಡಮರಗಳನ್ನ ಬೆಳಿರಿ. ಜೀವಾಣುಗಳು ಉತ್ಪತ್ತಿಯಾಗುತ್ವೆ. ತೀರ ನಿಮಗೆ ಬೇಕು ಅಂದರೆ ವರ್ಮಿ ಕಾಂಪೋಷ್ಟ್ ತಯಾರಿಸಿ ಭೂಮಿಗೆ ಕೊಡಿ. ನನ್ನ ತೋಟದಲ್ಲಿ ಏನನ್ನು ಹಾಕದೆ ಬೆಳೆದು ನಿಂತಿರುವ ಗಿಡಮರಗಳನ್ನು ನೋಡ್ರಪ್ಪ… ನಿಮಗೆ ಅರ್ಥವಾಗುತ್ತೆ” ಅಂದರು. ಅಲ್ಲಿ ನಮ್ಮ ಸುತ್ತಲೂ ಸಮೃದ್ಧಿಯಾಗಿ ಬೆಳೆದು ನಿಂತ ಮರಗಿಡಗಳು ನಳನಳಿಸುತ್ತಿದ್ದವು.