ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -3 // ಡಾ.ಕೆ.ಜಿ.ಮಹೇಶ್ವರಪ್ಪ//

[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ, “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ ‘ಮೂರ್ಛಾವಸ್ಥೆಯಲ್ಲಿ ಕಾರುಣ್ಯ’ ಬರಹದ ವಾಚನ ಡಾ.ಕೆ.ಜಿ.ಮಹೇಶ್ವರಪ್ಪ ಅವರಿಂದ]

 

‘ಮೂರ್ಛಾವಸ್ಥೆಯಲ್ಲಿ ಕಾರುಣ್ಯ’

ಬುದ್ಧನ ಕಾರುಣ್ಯ ನನ್ನ ಮನದೊಳಗೆ ಕೂತ ಬಗೆಯನ್ನು ಒಂದು ಉದಾಹರಣೆಯಿಂದ ಹೇಳಲು ಪ್ರಯತ್ನಿಸುವೆ. ಇತ್ತೀಚೆಗೆ ಶಿವಮೊಗ್ಗದ ಡಾ.ಅಶೋಕ ಪೈ ಅವರು ಮೈಸೂರಿಗೆ ಬಂದಿದ್ದರು. ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು. ಏನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಇಸ್ಪೀಟ್ ಆಡುತ್ತಲೊ, ಏನೊ ಮಾತುಕತೆಯಾಡುತ್ತಲೊ ಅಲ್ಲಿ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಷನ್‍ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುತ್ತಿರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಷನ್‍ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕೆ ತಾವೇ ಇಸ್ಪೀಟು ಆಡುವವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ.

ಈ ನಿಜ ಏನನ್ನು ಹೇಳುತ್ತದೆ? ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ. ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೊ. ಈ ಅನುಕಂಪನ ನಿಜವು ಇಡೀ ಜೀವ ಸಂಕುಲವನ್ನೆ ಒಂದು ಎಂದು ಹೇಳುತ್ತದೆ. ಬುದ್ಧನ ಕಾರುಣ್ಯ ಇಲ್ಲಿಂದಲೇ ಮೂಡಿರಬಹುದು.
ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು- ಅದು ಘಾಸಿಗೊಳಿಸುವುದು- ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನೆ. ಈ ಸಮಷ್ಟಿ ಮನಸ್ಸಲ್ಲಿ ಇಲ್ಲಿ ಎಲ್ಲರೂ ಇರುತ್ತಾರೆ. ನಾವು ಮನುಷ್ಯರು ಗುಣವಾಗಬೇಕಾಗಿದೆ. ನಮ್ಮೊಳಗೆ  ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.
ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ. ಆಗ ಮಾತ್ರವೇ ಅದು ಜಾಗತೀಕರಣ.