ಆರ್ ಎಸ್ ಎಸ್ ಪದ ಬಳಸಿಲ್ಲ: ದೇವನೂರ ಮಹಾದೇವ ಸ್ಪಷ್ಟನೆ

(18.2.2023ರಂದು ಪ್ರಜಾವಾಣಿ ಪತ್ರಿಕೆಗೆ ದೇಮ ನೀಡಿದ ಸ್ಪಷ್ಟನೆ)
ಮೈಸೂರು: ‘ಇಲ್ಲಿ ಪ್ರಕಾಶ್ ಕಮ್ಮರಡಿ ತಂಡದ ಚುನಾವಣಾ ಸಮೀಕ್ಷೆ ಅಧ್ಯಯನ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದ ನಾನು, ಆರ್‌ಎಸ್‌ಎಸ್‌ ಪದವನ್ನು ಬಳಸಿಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಅವರು ಸ್ಪಷ್ಟನೆ ನೀಡಿದ್ದಾರೆ.
ಪ್ರಕಟಣೆ ನೀಡಿರುವ ಅವರು, ‘ಸಂಘ ಪರಿವಾರದಂತಹ ಗಟ್ಟಿ ಸಾಂಸ್ಥಿಕ ತಳಪಾಯದ ಮೂಲಕ ಬಿಜೆಪಿ ‘ಸಾಂಸ್ಥಿಕ ರಣಗೊಂಡ ಪಕ್ಷ ರಚನೆಯನ್ನು ಹೊಂದಿರುತ್ತದೆ’ ಎಂಬ ಅಧ್ಯಯನಕಾರರ ಅಭಿಪ್ರಾಯ ನಿಜವೆನ್ನಿಸುತ್ತದೆ. ತಳಮಟ್ಟದವರೆಗೂ ಬೇರೂರಿರುವ ವಿವಿಧ ಪ್ರಗತಿಪರ, ಸಂಘ, ಸಂಸ್ಥೆ ಮತ್ತು ಸಂಘಟನೆಗಳು ಜೊತೆಗೆ ಯುವ ಕಾರ್ಯಕರ್ತರ ಪಡೆಗಳು ಹೊಸ ರಾಜಕೀಯ ಪ್ರಯೋಗಕ್ಕೆ ಈ ರೀತಿಯ ಸಾಂಸ್ಥಿಕ ರಚನೆಯನ್ನು ಒದಗಿಸಬಹುದು ಎಂದು ವರದಿ ಹೇಳುತ್ತದೆ. ಅಂದರೆ ಠೇವಣಿಯ೦ತೆ ಸಾಂಸ್ಥಿಕ ರಚನೆಯೂ ಬೇಕು. ಈ ಹಿನ್ನೆಲೆಯ ರಾಜಕೀಯ ಪಕ್ಷ ಅಥವಾ ಒಕ್ಕೂಟ ಅಲೆ ಎಬ್ಬಿಸಬೇಕು ಎಂದಿದ್ದೆ’ ಎಂದು ಹೇಳಿದ್ದಾರೆ.
‘ಇಂದು ಕರ್ನಾಟಕದ ಮುನ್ನಡೆಯ ಸಮಾಜಮುಖಿ ರಾಜಕೀಯ ಪಕ್ಷಗಳು ಅಲೆ ಎಬ್ಬಿಸುತ್ತಿಲ್ಲ. ಇವುಗಳ ಸಾಂಸ್ಥಿಕ ರಚನೆ ಗಟ್ಟಿಯಾಗೇ ಇದೆ. ಆದರೆ, ಈ ಪಕ್ಷ ಅಥವಾ ಒಕ್ಕೂಟದ ಸಾಂಸ್ಥಿಕ ರಚನೆಯಲ್ಲಿ ರಾಜಕೀಯ ಪ್ರಜ್ಞೆ ಅಷ್ಟಾಗಿ ಇಲ್ಲ. ಸಂಘ ಪರಿವಾರದಂತೆ, ತನ್ನ ರಾಜಕೀಯ ಪಕ್ಷ ಗೆಲುವಿನಲ್ಲೆ ತನ್ನ ಅಳಿವು- ಉಳಿವು ಎಂಬಂತೆ ಮುನ್ನಡೆಯ ಪಕ್ಷಗಳ ಸಾಂಸ್ಥಿಕ ರಚನೆಗಳು ವರ್ತಿಸುತ್ತಿಲ್ಲ ಎಂದು ಹೇಳಿದ್ದೆ’ ಎಂದು ಅವರು ತಿಳಿಸಿದ್ದಾರೆ.