ಅತ್ಯುತ್ತಮ ಸುಸಜ್ಜಿತ ಸಾರ್ವಜನಿಕ ಶಾಲೆಗಳನ್ನು ತೆರೆದರೆ ಖಾಸಗಿ ಶಾಲೆಗಳು ಬಂದ್ -ನಿರಂಜನಾರಾಧ್ಯ.ವಿ.ಪಿ

navodaya

“ಶಿಕ್ಷಣ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಒಂದು ಬಹುದೊಡ್ಡ ಹಾನಿಕರ ಪರಿಣಾಮವೆಂದರೆ ಅದು ಶಿಕ್ಷಣ ಸಾರ್ವತ್ರೀಕರಣದ ಮಹತ್ವವನ್ನು ಕಡೆಗೆಣಿಸುತ್ತದೆ. ಖಾಸಗಿ ಶಿಕ್ಷಣವು ಅವಕಾಶವಂಚಿತರಿಗೆ ಮತ್ತು ಬಡವರಿಗೆ ಅದರಲ್ಲೂ ವಿಶೇಷವಾಗಿ ಯಾರಿಗೆ ಅತಿ ಹೆಚ್ಚಿನ ಶಿಕ್ಷಣದ ಅವಶ್ಯಕತೆ ಇರುತ್ತದೆಯೋ ಅವರಿಗೆ ಶಿಕ್ಷಣವನ್ನು ನಿರಾಕರಿಸುತ್ತದೆ . ಖಾಸಗಿ ಸಂಸ್ಥೆಗಳಲ್ಲಿ ಪ್ರವೇಶವು ಅರ್ಹತೆ ಅಥವಾ ಸಾಮರ್ಥ್ಯವನ್ನು ಅವಲಂಬಿಸದೆ ಯಾರು ಹೆಚ್ಚಿನ ಹಣ ನೀಡುವ ಸಾಮರ್ಥ್ಯವಿದೆಯೋ ಅಂಥವರಿಗೆ ದೊರುಕುತ್ತದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿನ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಮತ್ತು ಮಾನವ ಹಕ್ಕುಗಳ ಒಡಂಬಡಿಕೆಗಳಿಗೆ ವ್ಯತಿರಿಕ್ತವಾಗಿರುತ್ತದೆ. ಯಾರು ಹಣವಂತರಿರುತ್ತಾರೋ ಅವರು ಆರ್ಥಿಕವಾಗಿ ಕೆಳಸ್ಥರದಲ್ಲಿರುವವರಿಗಿಂತ ಕಡಿಮೆ ಅರ್ಹತೆಯನ್ನು ಹೊಂದಿದ್ದರೂ ಶಿಕ್ಷಣವನ್ನು ಪಡೆದುಕೊಳ್ಳುತ್ತಾರೆ (ನಿಜ ಹೇಳಬೇಕೆಂದರೆ, ಕೊಂಡುಕೊಳ್ಳುತ್ತಾರೆ)”. ಈ ಪ್ಯಾರಾವನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೆ ಶಿಕ್ಷಣ ಹಕ್ಕು ವಿಶೇಷ ವರದಿಗಾರರಾದ ಕಿಶೋರ್ ಸಿಂಗ್‍ರವರು ಸಲ್ಲಿಸಿದ ವರದಿಯಿಂದ ಉದ್ಧರಿಸಲಾಗಿದೆ.
ಮೊನ್ನೆ ಕಳೆದ ವಾರ ಖಾಸಗಿ ಶಾಲೆಗಳ ಮಾಲೀಕರ ಮನಸ್ಥಿತಿ ಮತ್ತು ಧೋರಣೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಆಂಜನೇಯರವರ ಹೇಳಿಕೆ ಖಾಸಗಿ ಶಾಲೆಗಳ ಮಾಲೀಕರ ಮನಸ್ಸಿನಲ್ಲಿ ತಳಮಳ ಹುಟ್ಟಿಸಿದೆ. ಸಚಿವರು, ‘ವಿದ್ಯಾರ್ಥಿ ಮತ್ತು ಪಾಲಕರಿಂದ ಹಣ ವಸೂಲಿ ಮಾಡುವುದನ್ನು ದೊಡ್ಡ ದಂಧೆ ಮಾಡಿಕೊಂಡಿರುವ ಖಾಸಗಿ ಶಾಲೆಗಳ ವರ್ತನೆ ವೇಶ್ಯಾವಾಟಿಕೆಗಿಂತ ಕಡೆ’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ಈ ಹೇಳಿಕೆ ವ್ಯಾಪಕ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಸಚಿವರು, ಬಳಸಿದ ಭಾಷೆಯ ಬಗ್ಗೆ ನನ್ನ ತಕರಾರುಗಳಿದ್ದರೂ ಪ್ರಸ್ತಾಪಿಸಿರುವ ವಿಷಯ ಸಾರ್ವತ್ರಿಕ ಕಟು ಸತ್ಯವಾಗಿದೆ ಮತ್ತು ಕರ್ನಾಟಕದಲ್ಲಿ ಇದು ದಿನ ನಿತ್ಯದ ಸಮಸ್ಯೆಯಾಗಿದೆ.
ನಿಜ ಹೇಳಬೇಕೆಂದರೆ, ಸಚಿವರು ಖಾಸಗಿ ಶಾಲೆಗಳ ವ್ಯಾಪಾರೀ ಧೋರಣೆಯನ್ನು ವೇಶ್ಯಾವಾಟಿಕೆಗೆ ಹೋಲಿಸುವ ಮೂಲಕ ಆ ಸಮುದಾಯಕ್ಕೆ ಅವಮಾನವೆಸಗಿದ್ದಾರೆ. ಅವರಿಗೊಂದು ವ್ಯಾಪಾರ ಧರ್ಮವಿದೆ. ನಮಗೆಲ್ಲ ತಿಳಿದಿರುವಂತೆ ಅನೇಕ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದಾಗಿ ನಮ್ಮ ಅಕ್ಕ ತಂಗಿಯರು ಅಂಥಹ ಕೆಲಸಕ್ಕೆ ತೊಡಗಿಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಕ್ರೂರ ಸಮಾಜ ಸೃಷ್ಠಿಸಿದೆ. ಘನತೆ ಹಾಗು ಗೌರವದಿಂದ ಬದುಕುವ ಪರ್ಯಾಯ ವ್ಯವಸ್ಥೆಗಳನ್ನು ನಮ್ಮ ಸಮಾಜ ಕಟ್ಟಿಕೊಟ್ಟರೆ ಯಾರಿಗೂ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವ ಪ್ರಮೇಯ ಉದ್ಬವಿಸುವುದಿಲ್ಲ.
ಆದರೆ, ಖಾಸಗೀ ಶಿಕ್ಷಣ ಸಂಸ್ಥೆಗಳ ಉದ್ದೇಶವೇ ಲಾಭ ಮತ್ತು ಹಣಗಳಿಕೆ. ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸುವ ಮೂಲಕ ಮಾರಾಟಕ್ಕೆ ಮುಂದಾಗಿರುವ ಖಾಸಗೀ ಶಾಲೆಗಳ ಮಾಲೀಕ ವರ್ಗ ತಮ್ಮ ವ್ಯಾಪಾರದಲ್ಲಿ ನೀತಿ , ನಿಯಮ ಅಥವಾ ಯಾವುದೇ ಮಾನವೀಯತೆಯನ್ನು ಇಟ್ಟುಕೊಂಡಿಲ್ಲ. ಅವರ ಮಂತ್ರವೊಂದೇ ‘ಕನಿಷ್ಠ ಅವಧಿಯಲ್ಲಿ ಗರಿಷ್ಠ ಲಾಭ’. ಸಮವಸ್ತ್ರ, ಪುಸ್ತಕ, ಷ್ಯೂ-ಸಾಕ್ಸ್, ಶಾಲಾ ವಾಹನ, ಶಾಲಾ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸ ಎಲ್ಲವೂ ಹಣ ಗಳಿಕೆಯ ವಿವಿಧ ಮಾರ್ಗಗಳು.

ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 1986 , ಪ್ಯಾರ 2.2 ರ ಅನ್ವಯ “ ಶಿಕ್ಷಣವು ಮಹತ್ವವಾದ ಪಾತ್ರವನ್ನು ಹೊಂದಿದೆ. ಅದು ರಾಷ್ಟ್ರೀಯ ಏಕತೆ, ವೈಜ್ಞಾನಿಕ ಮನೋಭಾವ , ಮನೋಸ್ವಾತಂತ್ರ್ಯ ಹಾಗು ಮನೋಸ್ಥೈರ್ಯಗಳಿಗೆ ಪುಷ್ಟಿ ನೀಡುವಂತಹ ದೃಷ್ಟಿ ಹಾಗು ಸೂಕ್ಷ್ಮತೆಯ ಪರಿಶುದ್ಧತೆಯನ್ನು ನೀಡುತ್ತದೆ. ಈ ರೀತಿಯಾಗಿ ನಮ್ಮ ಸಂವಿಧಾನದಲ್ಲಿ ಉಲ್ಲೇಖಗೊಂಡಿರುವ ಗುರಿಗಳಾದ ಸಮಾಜವಾದ ,ಜಾತ್ಯತೀತತೆ, ಮತ್ತು ಪ್ರಜಾಪ್ರಭುತ್ವದ ಗುರಿಗಳನ್ನು ಮುಟ್ಟಲು ಸಹಾಯ ಮಾಡುತ್ತದೆ” ಎನ್ನುತ್ತದೆ. ಅಂದರೆ, ಶಿಕ್ಷಣ ಸಾಮಾಜಿಕ ಒಳಿತಿನ ಬಹು ಮುಖ್ಯ ಸಾಧನ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯತೆಗಳನ್ನು ತೊಡೆದು ಹಾಕಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಸಮ- ಸಮಾಜವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಶಿಕ್ಷಣದ ಪಾಲು ಬಹು ದೊಡ್ಡದು.

ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಲಾಭ ಗಳಿಕೆಯ ಸಾಧನ. ನವ-ವಸಾಹತುಶಾಹಿಯ ಮಾರುಕಟ್ಟೆಯ ಭಾಗವಾಗಿ ಬೆಳೆದಿರುವ ಈ ಹೊಸ ವ್ಯಾಪಾರೀ ವರ್ಗದ ಮೂಲ ಉದ್ದೇಶವೇ ಪ್ರತೀ ಮಾನವ ಜೀವಿಯ ಮೂಲಭೂತ ಅಗತ್ಯ ಮತ್ತು ಮೂಲಭೂತ ಹಕ್ಕಾಗಿರುವ ಶಿಕ್ಷಣವನ್ನು ಮಾರಟಮಾಡಬಲ್ಲ ಸರಕನ್ನಾಗಿ ಮಾರ್ಪಡಿಸುವುದರ ಮೂಲಕ ಗರಿಷ್ಠ ಲಾಭಗಳಿಸುವ ಭೂಮಿಕೆಯನ್ನು ಕಟ್ಟಿಕೊಳ್ಳುವುದು. ಖಾಸಗೀ ಶಾಲೆಗಳ ಯುಗಧರ್ಮವೆಂದರೆ, ಮಾನವೀಯತೆಯ ಜಾಗದಲ್ಲಿ ಮಾರಾಟ ಮತ್ತು ಲಾಭಕೋರತನ ಸಂಸ್ಕತಿಯನ್ನು ಜೀವನಕ್ರಮವನ್ನಾಗಿಸುವುದು.
ಖಾಸಗೀ ಶಾಲೆಗಳ ಶಿಕ್ಷಣದ ಈ ವ್ಯಾಪಾರೀಕರಣದಿಂದಾಗಿ ಸಮಾಜದಲ್ಲಿ ಆನಾರೋಗ್ಯಕರ ಪೈಪೋಟಿ ಹೆಚ್ಚಿದ್ದು, ಖಾಸಗಿ ಶಾಲೆಗಳು ರಾಜ್ಯದಲ್ಲಿ ನಾಯಿಕೊಡೆಯಂತೆ ತಲೆಯೆತ್ತಿ ನಿಂತಿವೆ. ಮಾನವೀಯತೆಯ ನೆಲೆಯಲ್ಲಿ ಹೊಸ ನಾಗರೀಕನನ್ನು ರೂಪಿಸುವ ಶಿಕ್ಷಣ ನೀಡಬೇಕಾಗಿದ್ದ ಶಿಕ್ಷಣ ಸಂಸ್ಥೆಗಳು “ನಕಲಿ ವ್ಯಕ್ತಿತ್ವದ ಸಂಕುಚಿತ ಅರೆಶಿಕ್ಷಿತ ಹಣದಾಹಿ ಅನಾಗರೀಕರನ್ನು” ಹುಟ್ಟುಹಾಕುವ ಬೋಧನಾ ಅಂಗಡಿಗಳಾಗಿವೆ. ಇಲ್ಲಿ ಶಿಕ್ಷಣಕ್ಕಿಂತ ವ್ಯಾಪಾರ ಮತ್ತು ಲಾಭವೇ ನಿರ್ಣಾಯಕ ಅಂಶಗಳಾಗಿವೆ. ಶಿಕ್ಷಣದ ಮಾರಾಟಗಾರರು ನೀಡುವ ವಾಣಿಜ್ಯ ಜಾಹೀರಾತು ಮತ್ತು ಸುಳ್ಳು ಭರವಷೆಗಳಿಗೆ ಮೋಸಹೋಗುವ ಬಡ ಪಾಲಕರು-ಮಕ್ಕಳು ದಿನನಿತ್ಯ ಪರಿತಪಿಸುವಂತಾಗಿದೆ

ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ವ್ಯಾಪರೀಕರಣದ ವೇಗ ಎಷ್ಟಿದೆಯೆಂದರೆ, 2010-11ರಲ್ಲಿದ್ದ 45,677 ಸರ್ಕಾರಿ ಎಲಿಮೆಂಟರಿ ಶಾಲೆಗಳ ಸಂಖ್ಯೆ 2015-16ರ ವರದಿ ಅನ್ವಯ 44,101ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಖಾಸಗಿ ಆಂಗ್ಲ ಮಾಧ್ಯಮದ ಎಲಿಮೆಂಟರಿ ಶಾಲೆಗಳ ಸಂಖ್ಯೆ 10,252 ರಿಂದ 12,891 ಕ್ಕೆ ಏರಿದೆ. ಅತ್ಯಂತ ಆತಂಕದ ವಿಷಯವೆಂದರೆ , 2010-11 ರಲ್ಲಿ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯಲ್ಲಿದ್ದ ಶೇಕಡ 54.54 ರ ದಾಖಲಾತಿ ಪ್ರಮಾಣ 2015-16ರಲ್ಲಿ ಶೇಕಡಾ 47.46ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶೇಕಡ ದಾಖಲಾತಿ ಪ್ರಮಾಣ 28.76 ರಿಂದ 36.51ಕ್ಕೆ ಏರಿದೆ.

ಶಿಕ್ಷಣದ ಖಾಸಗೀಕರಣದ ಮತ್ತು ವ್ಯಾಪರೀಕರಣದ ಮೊದಲನೆಯ ಬಹುದೊಡ್ಡ ಅಪಾಯವೆಂದರೆ ಆಂಗ್ಲ ಭಾಷೆಯನ್ನು ಶಿಕ್ಷಣದಲ್ಲಿ ಯಜಮಾನಿಕೆಯ ಭಾಷೆಯನ್ನಾಗಿಸುವ ಮೂಲಕ ಜಾಗತಿಕ ಮಾರುಕಟ್ಟೆಯನ್ನು ಎಲ್ಲ ಸೇವಾ ವಲಯಗಳಿಗೆ ವಿಸ್ತರಿಸಿ ಮೂಲಭೂತ ಸೇವೆಗಳನ್ನು ವ್ಯಾಪಾರೀಕರಣಗೊಳಿಸಿ ನಾಗರೀಕತೆಯ ಎಲ್ಲ ಮಾನವ ಸಂಬಂಧಗಳನ್ನು ಮಾರಾಟದ ಸಂಬಂಧಗಳನ್ನಾಗಿ ಮಾರ್ಪಡಿಸುವುದು.
ಆದರೆ,ಇಂಥಹ ಸತ್ಯಗಳನ್ನು ಮರೆಮಾಚುವ ಶಿಕ್ಷಣದ ಉದ್ಯಮಶೀಲ ವ್ಯಾಪಾರಿಗಳು ಆಂಗ್ಲ ಭಾಷೆಯನ್ನು ವೈಭವೀಕರಿಸುವ ಮೂಲಕ ತಮ್ಮ ಲಾಭಕ್ಕಾಗಿ ಮುಗ್ಧ ಜನರ ಅಸಹಾಯಕತೆಯನ್ನೇ ಬಂಡವಾಳವಾಗಿಸಿಕೊಂಡು ಶಿಕ್ಷಣದ ಹೆಸರಿನಲ್ಲಿ ಜನಸಾಮಾನ್ಯರನ್ನು ನಿರಂತರವಾಗಿ ಶೋಷಿಸುತ್ತಾರೆ. ಶೋಷಣೆಯ ಮೂಲಕ ಗಳಿಸುವ ಅಪಾರ ಸಂಪತ್ತಿನಲ್ಲಿ ತಮ್ಮ ಖಾಸಗೀ ಸಾಮ್ರಾಜ್ಯಗಳನ್ನು ಸ್ಥಾಪಿಸಿ ಹಣ ಬಲದಿಂದ ಪ್ರಭುತ್ವವನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಶಿಕ್ಷಣ ಉದ್ಯಮೀಕರಣ ಮತ್ತು ವ್ಯಾಪರೀಕರಣದ ಮತ್ತೊಂದು ಅಪಾಯವೆಂದರೆ ಶಿಕ್ಷದಲ್ಲಿ ಅಸಮಾನತೆ,ಪ್ರತ್ಯೇಕತೆ ಮತ್ತು ಕಣ್ಣಿಗೆ ರಾಚುವ ತಾರತಮ್ಯತೆಯ ಮೂಲಕ ಪರಕೀಯ ಭಾಷೆಯೊಂದನ್ನು ಮೆರೆಸಿ ಮಾತೃಭಾಷೆಯ ಬಗ್ಗೆ ಕೀಳಿರಿಮೆ ತರಿಸಿ ಸಾಮಾಜಿಕ , ಆರ್ಥಿಕ ಮತ್ತು ಸಾಂಸ್ಕೃತಿಕ  ಪಲ್ಲಟವನ್ನುಂಟು ಮಾಡುವುದು .
ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಬಗ್ಗೆ ಸಚಿವರೊಬ್ಬರು ಧ್ವನಿ ಎತ್ತಿರುವುದು, ಲಕ್ಷಾಂತರ ಜನ ಅಮಾಯಕ ಪಾಲಕರಿಗೆ ಮತ್ತು ಮಕ್ಕಳಿಗೆ ಧ್ವನಿ ಬಂದಂತಾಗಿದೆ. ಆದರೆ , ಇದು ಇಲ್ಲಿಗೆ ನಿಲ್ಲಬಾರದು ,ಸರ್ಕಾರ ತನ್ನ ಪ್ರತಿಯೊಂದು ಶಾಲೆಯನ್ನು ಅತ್ಯುತ್ತಮ ನೆರೆಹೊರೆಯ ಶಾಲೆಯನ್ನಾಗಿ ಪರಿವರ್ತಿಸುವ ಸಂಕಲ್ಪ ಕೈಗೊಳ್ಳಬೇಕಿದೆ. ಶಿಕ್ಷಣ ಖಾಸಗೀಕರಣದ ಕ್ರೂರತೆಯನ್ನು ಅನುಭವಿಸಿರುವ ಸಚಿವರು ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ,ಕಿತ್ತೂರು ರಾಣಿ ಚೆನ್ನಮ್ಮ , ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳ ಮೂಲಕ ಅತ್ಯುತ್ತಮ ಸುಸಜ್ಜಿತ ಸಾರ್ವಜನಿಕ ಶಾಲೆಗಳನ್ನು ಸ್ಥಾಪಿಸುತ್ತಿರುವ ಸರ್ಕಾರ , ಪಂಚಾಯತಿ ಹಾಗು ವಾರ್ಡ್‍ಗೊಂದು ತಾಯಿ ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ ಕೇಂದ್ರೀಯ /ನವೋದಯ ಮಾದರಿಯ ಸಮಾನ ಶಾಲೆಗಳನ್ನು ತೆರೆದರೆ ಖಾಸಗಿ ಶಾಲೆಗಳು ತಾವಾಗಿಯೇ ಬಾಗಿಲು ಮುಚ್ಚಿಕೊಳ್ಳುತ್ತವೆ. ಕತ್ತಲನ್ನು ಹೋಗಲಾಡಿಸಲು ದೀಪ ಹಚ್ಚುವ ಕೆಲಸವಾಗಬೇಕು. ಇದಕ್ಕೆ ಗಟ್ಟಿಯಾದ ರಾಜಕೀಯ ಇಚ್ಛಾಶಕ್ತಿ ಬೇಕು!