ಸ್ವಸಹಾಯ ಸಂಘಗಳಿಗೆ ಅಭಿವೃದ್ಧಿಯ ಅಧಿಕಾರ?-ಕೆ.ಪಿ.ಸುರೇಶ

Svasahaya sangha
ಮದ್ದೂರಿನ ರೈತ ಸಮಾವೇಶದಲ್ಲಿ ದೇವನೂರು ಮಹಾದೇವ ಸ್ವಸಹಾಯ ಸಂಘಗಳನ್ನು ಅಭಿವೃದ್ಧಿಯ ಕೇಂದ್ರ ಚಾಲನಾ ಶಕ್ತಿಯಾಗಿ ಮಾಡುವ ಬಗ್ಗೆ ಮಾತಾಡಿದ್ದಾರೆ. ಅವರ ಸ್ನೇಹಿತರಾಗಿರುವ ಮುಖ್ಯಮಂತ್ರಿಯವರ ಕಿವಿಗೂ ಈ ಮಾತು ಬಿದ್ದು ಅವರು ಇದನ್ನು ಗಂಭೀರವಾಗಿ ಪರಿಗಣಿಸಿಯಾರು ಎಂಬ ಆಶಾ ಭಾವ ನನ್ನದು. ಮಹಿಳೆಯ ದೃಷ್ಟಿಕೋನದಲ್ಲಿ ಏನನ್ನಾದರೂ ನೋಡಿದರೆ ಹೇಗಿದ್ದೀತು ಎಂಬ ಕಲ್ಪನೆ ನಮ್ಮ ಅಭಿವೃದ್ಧಿಯ ಮೀಮಾಂಸೆಯಲ್ಲಿ ಇಲ್ಲ. ಲಿಂಗ ಸಮಾನತೆಯ ದೃಷ್ಟಿಕೋನದಿಂದ ನೋಡುವುದೆಂದರೆ ಬಜೆಟ್‍ನ ಒಂದು ಅಧ್ಯಾಯಕ್ಕೆ ‘ಜೆಂಡರ್ ಬಜೆಟ್’ ಎಂದು ಹೆಸರಿಟ್ಟು ಅದರಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದ ಪಟ್ಟಿ ತುಂಬಿ ಕೈತೊಳೆದುಕೊಳ್ಳುವುದಾಗಿದೆ.
ಯಾರೂ ಸ್ವಾತಂತ್ರ್ಯ ನೀಡುವುದಿಲ್ಲ ಅದನ್ನು ಪಡಕೊಳ್ಳಬೇಕು ಎಂಬ ಮಾತಿದೆ. ಹಕ್ಕುಗಳ ವಿಚಾರದಲ್ಲಿ ಇದು ನಿಜ. ಆದ್ದರಿಂದಲೇ ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ, ಇನ್ನಿತರ ವಿಚಾರಗಳಲ್ಲಿ ಹೆಚ್ಚೇ ಸಂವೇದನಾಶೀಲವಾಗಿದ್ದೇನೆ ಎಂದು ತೋರಿಸಲು ಪರದಾಡುತ್ತಿರುತ್ತದೆ. ಆದರೆ ಅಭಿವೃದ್ಧಿಯ ಹರವು ದೊಡ್ಡದು ಮತ್ತು ಹೆಚ್ಚು ಕ್ಲಿಷ್ಟ. ಇದಕ್ಕೊಂದು ವಿಧಾಯಕ ಸಭೆ ಇರಬೇಕು. ಯೊಜನೆ ರೂಪಿಸಲು ಪರಿಣಿತರು(?) ಬೇಕು. ಹಣಕಾಸು ಹೊಂದಿಸಲು  ತೆರಿಗೆ ಸಂಗ್ರಹದ ಮಜಕೂರು ಇರಬೇಕು. ಇದನ್ನು ಅನುಷ್ಠಾನಗೊಳಿಸಲು ನೌಕರ ವೃಂದ ಇರಬೇಕು. ಇದೆಲ್ಲಾ ನಮ್ಮ ವ್ಯವಸ್ಥೆಯ ಭಾಗವಾಗಿರುವ ಅಭಿವೃದ್ಧಿ ಚಿಂತನೆ.
ಇದನ್ನು ಜನಸಾಮಾನ್ಯರ ಭಾಷೆಗೆ ತರ್ಜುಮೆ ಮಾಡಿದರೆ ಇದರರ್ಥ- ‘ನಮ್ಮ ಪರಿಣಿತರೇ ಯೋಜನೆ ಮಾಡುತ್ತಾರೆ, ನಾವೇ ಕಾಸು ಕೊಡುತ್ತೇವೆ. ನಮ್ಮ ಸರ್ಕಾರೀ ಅಧಿಕಾರಿಗಳೇ ಅನುಷ್ಠಾನ ಮಾಡುತ್ತಾರೆ’ ಎಂದು. ನಮ್ಮ ಸರ್ಕಾರದ ಯೋಚನಾ ವಿಧಾನ ಮತ್ತು ಅದರ ಕಾರ್ಯವೈಖರಿ ಪುರುಷ ಪ್ರಧಾನವಷ್ಟೇ ಅಲ್ಲ; ಅದು ಯಜಮಾನಿಕೆಯದ್ದು ಕೂಡಾ. ಈ ಧೋರಣೆಯಲ್ಲಿ ಪರ್ಯಾಯ ಅಭಿವೃದ್ಧಿಯ ಹೊಳಹುಗಳು ಬೆಳೆಯುವುದು ಬಿಡಿ; (ಸರ್ಕಾರೀ) ತಲೆಯೊಳಗೆ ನುಗ್ಗುವುದೂ ಕಷ್ಟ.
ಇದಿಷ್ಟನ್ನೇ ಹೇಳಿದರೆ ಸಾಕಾಗದು. ನಮ್ಮ ಕಲ್ಯಾಣ ಕಾರ್ಯಕ್ರಮಗಳ ಲಕ್ಷ್ಯವಿರುವ ಮೂರು ನಾಲ್ಕು ಕ್ಷೇತ್ರಗಳನ್ನು ಗಮನಿಸಿ. ಆದ್ಯತೆ ಇರುವುದು ಕೃಷಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಮತ್ತು ದಲಿತ ಅಭಿವೃದ್ಧಿ. ಸರ್ಕಾರ ವೆಚ್ಚ ಮಾಡಬೇಕಾಗಿರುವ ಒತ್ತಡ ಇರುವುದು ಈ ಕ್ಷೇತ್ರಗಳಲ್ಲಿ ( ಸೂಪರ್ ಹೈವೇಗಳೂ ಇವೆ..!!) ಇವುಗಳ ದುಸ್ಥಿತಿ ಬಗ್ಗೆ ರಾಶಿ ರಾಶಿ ಅಂಕಿ ಅಂಶಗಳಿವೆ; ಕ್ಷೇತ್ರಾನುಭವದ ದಾಖಲೆಗಳಿವೆ. ಶಿಕ್ಷಣದಲ್ಲಿ ನಮ್ಮ ಸರ್ಕಾರೀ ಶಾಲೆಗಳಲ್ಲಿ ಶೇ.20-40ರಷ್ಟು ಶಿಕ್ಷಕರ ಅಭಾವ ಇದೆ; ಕಟ್ಟಡಗಳು ನೆಟ್ಟಗಿಲ್ಲ ಇತ್ಯಾದಿ ಮೂಲಭೂತ ಸೌಕರ್ಯಗಳು ಒಂದೆಡೆಯಾದರೆ ಅಂಗನವಾಡಿ ಮತ್ತು ಬಿಸಿಊಟಗಳಲ್ಲಿ ನೀಡಬೇಕಾದ ಪೌಷ್ಟಿಕ ಆಹಾರದ ಗುಣಮಟ್ಟ ಇಳಿಕೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಹಾಗೇ ಕುಡಿಯುವ ನೀರಿನ ಸಮಸ್ಯೆ ಕೂಡಾ. ಸಮಸ್ಯೆ ಬಿಗಡಾಯಿಸಿದ ವರದಿ ಬಂದಂತೆಲ್ಲಾ ಸರ್ಕಾರವೂ ಯೋಜನೆ ಹಾಕಿಕೊಳ್ಳುತ್ತಲೇ ಇದೆ. ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಇದು ಇನ್ನಷ್ಟು ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತಿದೆ.
ಈ ಯೋಜನೆಗಳು; ಅವುಗಳ ಅನುಷ್ಠಾನಗಳ ಬಗ್ಗೆ ಯಾವ ಸರ್ಕಾರವೂ ಇದು ತಲುಪುವ ಪ್ರಜೆಗಳಲ್ಲಿ ಆಕಸ್ಮಿಕವಾಗಿಯೂ ಸಂವಾದ/ ಚರ್ಚೆ ನಡೆಸಿದ ಪುರಾವೆಗಳಿಲ್ಲ.
ಬಜೆಟ್ ಪೂರ್ವ ತಯಾರಿ ಅಂತ ಕೈಗಾರಿಕೋದ್ಯಮಿಗಳು/ ಹೂಡಿಕೆದಾರರ ಜೊತೆ ಚರ್ಚೆ ನಡೆಸುವ ಸರ್ಕಾರಗಳು ಗ್ರಾಮ ಭಾರತದ ಆದ್ಯತಾ ಕ್ಷೇತ್ರಗಳ ಸಾಮಾನ್ಯರ ಜೊತೆ ಬಿಡಿ ಪ್ರತಿನಿಧಿಗಳ ಜೊತೆಯೂ ಚರ್ಚಿಸುವುದು ಕಡಿಮೆ. ಶಿಕ್ಷಣಕ್ಕೆ ಈ ಬಾರಿ ಕೇಂದ್ರ ಸರ್ಕಾರ ಸ್ಪಂದಿಸಿದ ರೀತಿ ಗಮನಿಸಿ- ಉಚ್ಛ ಶಿಕ್ಷಣಕ್ಕೆ 46 ಸಾವಿರ ಕೊಟಿ ಕೊಟ್ಟರೆ ಪ್ರಾಥಮಿಕ ಹಂತದ ಶಿಕ್ಷಣಕ್ಕೆ 33 ಸಾವಿರ ಕೋಟಿ ಮಾತ್ರಾ.. ಈ ಹಂತದ ಮಕ್ಕಳ ಕಲಿಕೆಯ ಗುಣ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ; 5-6ನೇ ತರಗತಿಯ ಮಕ್ಕಳಿಗೆ ಸರಳ ಕೂಡು- ಕಳೆವ ಲೆಕ್ಕ, ಕಾಗುಣಿತವೂ ಬರುತ್ತಿಲ್ಲ ಎಂಬ ವರದಿ ಬಂದಿದೆ. ಈ ಕಲಿಕೆ ಬೋಧನೆಯ ಕಳಪೆ ಗುಣಮಟ್ಟ ಸುಧಾರಣೆಗೆ ಅವಶ್ಯವಿರುವ ವಿಶ್ಲೇಷಣೆಗೆ ಕೇಂದ್ರ ಸರ್ಕಾರವೇ ಮೀಸಲಿಟ್ಟ ಹಣ ಕೇವಲ 67ಲಕ್ಷ ರೂಪಾಯಿ!! ಪಿರಮಿಡ್‍ನ ತಳ ಹೆಚ್ಚು ವಿಸ್ತಾರವಾಗಿರುತ್ತೆ ಎಂಬ ನೆದರೂ ಇಲ್ಲದಂತಿರುವ ಗ್ರಹಿಕೆ ಇದು.ಮೂಲ ಸಮಸ್ಯೆ ಇರುವುದು ಸರ್ಕಾರದ ಧೋರಣೆಯಲ್ಲಿ. ಇದು ಆಡಳಿತಕ್ಕೆ ಬಂದ ಮೇಲೆ ತಲೆ ತಿರುಗುವ ದರ್ಪದ ಕಾರಣಕ್ಕೆ ಹುಟ್ಟಿದ್ದಲ್ಲ. ಇಡಿ ಯಂತ್ರ ಸ್ಥಾಪಿತವಾಗಿರುವುದೇ ಹೀಗೆ.
ಉದಾಹರಣೆಗೆ ಕೃಷಿ ಕ್ಷೇತ್ರದಲ್ಲಿ ರೈತರ ಆದಾಯ 2022 ರ ವೇಳೆಗೆ ದ್ವಿಗುಣ ಮಾಡಲಾಗುವುದು ಎಂಬ ಘೋಷಣೆ. ಈ ಮಾತು ನಿಜವಾಗಬೇಕಿದ್ದರೆ ಕೃಷಿ ಕ್ಷೇತ್ರದ ಬೆಳವಣಿಗೆ ಶೇ.20ರಷ್ಟಿರಬೇಕು. (ಈಗಿರುವುದು ಕೇವಲ ಶೇ.3-4 . ಅದು ಸರ್ಕಾರದ ಅಂಕಿಅಂಶ..!) ಈ ಕೃಷಿ ಕ್ಷೇತ್ರದ ಆದಾಯ ಕೃಷಿ ಒಂದರಿಂದಲೇ ಹುಟ್ಟುವುದಿಲ್ಲ. ಅತಿರಿಕ್ತ ಆದಾಯ ಬಹುಪಾಲು ಮಹಿಳೆಯ ಶ್ರಮದಿಂದಲೇ ಬರುತ್ತಿದೆ. (ಕೃಷಿಯ ಶ್ರಮದಲ್ಲೂ ಅವರದೇ ಸಿಂಹಪಾಲು) ಆದರೆ ಈ ವರ್ತಮಾನದ ವಾಸ್ತವದ ಅರಿವೇ ಇಲ್ಲದಂತೆ ಸರಕಾರದ ನಡವಳಿಕೆ ಇದೆ.
ದೇವನೂರು ಮಹಾದೇವ ಹೇಳಿದ ಆಂಧ್ರದ ಮಾದರಿಯನ್ನು ನಮ್ಮಲ್ಲಿ ಅನುಷ್ಠಾನ ಮಾಡುವುದರ ಬಗ್ಗೆ ನಾನು ಒಂದೆರಡು ಬಾರಿ ಬರೆದಿದ್ದೆ. ಈ ಮಾದರಿಯನ್ನು ನಾನು ಹಿಂದೊಮ್ಮೆ ಅಧ್ಯಯನ ಮಾಡಿದ್ದೆ. ಇಡೀ ಗ್ರಾಮ ಭಾರತದ ಹತ್ತು ಹಲವು ಕ್ಷೇತ್ರಗಳನ್ನು ಏಕೀಭವಿಸಿದ ಪ್ರಯತ್ನ ಇದು. ಅಂಗನವಾಡಿ ಇರಲಿ, ಶಾಲೆ ಇರಲಿ, ಪಡಿತರ, ಕೃಷಿ ಎಲ್ಲವೂ ಕೊನೆಗೆ ಅದೇ ಕುಟುಂಬಗಳಿಗೆ ತಗುಲಿಕೊಳ್ಳುವ ಕ್ಷೇತ್ರಗಳು. ಆಂಧ್ರದಲ್ಲಿ ಇವೆಲ್ಲವನ್ನೂ ಸ್ವಸಹಾಯ ಗುಂಪುಗಳ ಪಂಚಾಯತ್ ಮಟ್ಟದ ಫೆಡರೇಷನ್ನಿಗೆ ನೀಡಲಾಗಿದೆ. ಉಸ್ತುವಾರಿ, ವಿತರಣೆ, ಆಯ್ಕೆ, ಎಲ್ಲದರಲ್ಲೂ ಈ ಸಂಘವೇ ಸಂಬಂಧಿಸಿದ ಇಲಾಖೆಯ ಜೊತೆ ವ್ಯವಹರಿಸಿ ದಕ್ಷತೆ ತರುತ್ತಿದೆ. ಇದರಿಂದಾಚೆಗೆ ಭಾರತದ ಆಹಾರ ನಿಗಮಕ್ಕೆ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಮೂಲಕ ಕೊಳ್ಳುವ ಏಜೆಂಟ್ ಆಗಿ ಕೂಡಾ ಈ ಸಂಘ ಕೆಲಸ ಮಾಡುತ್ತಿದೆ. ಈ ಮಹಿಳೆಯರು ಸ್ವತಃ ಹಳ್ಳಿಯವರೇ ಆದ ಕಾರಣ ಹೆಚ್ಚಿನ ಎಚ್ಚರದಿಂದ ಕೆಲಸ ಮಾಡುತ್ತಿದ್ದಾರೆ. ಮೇಲ್ಜಾತಿ ಜಮೀಂದಾರನೂ ಕಳಪೆ ಭತ್ತ ಮಾರಲಾರದೇ ಚಡಪಡಿಸಿದ್ದ ಉದಾಹರಣೆಯನ್ನು ನನ್ನ ಗೆಳೆಯರು ಹೇಳಿದ್ದರು.
ಇದೇ ರೀತಿಯ ಕೆಲಸವನ್ನು ಕೇರಳದ ಕುಡುಂಬಶ್ರೀ ಕೂಡಾ ಮಾಡುತ್ತಿದೆ. ಇವೆರಡೂ ಎಷ್ಟು ಸಶಕ್ತಗೊಂಡಿವೆ ಎಂದರೆ ಗ್ರಾಮರಾಜಕಾರಣದ ಮಾಮೂಲಿ ವರಸೆಗಳನ್ನು ಎದುರಿಸಿವೆ ಮಾತ್ರವಲ್ಲ, ಪರ್ಯಾಯ ಅಭಿವೃದ್ಧಿ ರಾಜಕಾರಣದ ಹೊಸ ಸೂಚಿಗಳನ್ನೂ ಮುಂದಿಟ್ಟಿವೆ. ಕೇರಳದಲ್ಲಿ ಮುಂಚೂಣಿಯ ಪಕ್ಷಗಳು ಕೂಡಾ ಕುಡುಂಬಶ್ರೀಯನ್ನು ರಾಜಕೀಯಕ್ಕೆ ಎಳೆಯಲು ಹಿಂದೆ ಮುಂದೆ ನೊಡುತ್ತಿವೆ. ಸಿಪಿಎಂ ಪ್ರಣೀತ ಉದ್ದೇಶದೊಂದಿಗೆ ಆ ಸರ್ಕಾರ ಕುಡುಂಬಶ್ರೀಯನ್ನು ಸ್ಥಾಪಿಸಿದರೂ, ಈ ಸಂಘಟನೆ ಪಕ್ಷ ರಾಜಕಾರಣದಿಂದಾಚೆ ಮಹಿಳಾ ಕೇಂದ್ರಿತ ಹಿತಾಸಕ್ತಿಗಳನ್ನು ಶಿಸ್ತುಬದ್ಧವಾಗಿ ಜಾರಿಗೊಳಿಸುತ್ತಿವೆ. ಕಿರುಸಾಲ ಇತ್ಯಾದಿಯಿಂದಾಚೆ ಉದ್ಯಮಶೀಲತೆಯ ಉದಾಹರಣೆಗಳನ್ನೂ ಕುಟುಂಬಶ್ರೀ ಮುಂದಿಟ್ಟಿದೆ.
ಆಂಧ್ರ S.E.R.P  ( Society for the Elimination of Rural poverty) ದೈತ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸೊಸೈಟಿಯಾಗಿ ಹೊರಹೊಮ್ಮಿದೆ. ದಶಕದ ಹಿಂದೆ ಆಂಧ್ರದಲ್ಲಿ ರೈತ ಆತ್ಮಹತ್ಯೆಯಷ್ಟೇ ಅಪಾಯಕಾರಿಯಾಗಿ ಬೆಳೆದಿದ್ದು ಕಿರು ಸಾಲ ಸಂಸ್ಥೆಗಳು. ಇವುಗಳ ಬಡ್ಡಿದರ ಮತ್ತು ವಸೂಲಾತಿಯ ಕಿರುಕುಳದಿಂದಾಗಿ ಆಂಧ್ರ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವುದು ಅನಿವಾರ್ಯವಾಯಿತು. ಇಂದು ಈ ಸ್ವಸಹಾಯ ಸಂಘಗಳ ಸದಸ್ಯರಿಗೆ 24 ಗಂಟೆಗಳೊಳಗಾಗಿ ಮೊಬೈಲ್ ಆಧಾರಿತ ಸಾಲ ವ್ಯವಸ್ಥೆ ಕೂಡಾ ಇದೆ. ಸಾಲ ನೀಡಿಕೆಗೆಂದೇ ಬ್ಯಾಂಕ್ ಕೂಡಾ ಇದೆ. ಸುಸ್ಥಿರ ಕೃಷಿಯನ್ನು ಪ್ರಮುಖ ಆಯಾಮವಾಗಿ ಇಟ್ಟುಕೊಂಡು ಮಹಿಳಾ ರೈತರೇ ( ರೈತ ಎಂಬ ಪದಕ್ಕೆ ಸ್ತ್ರೀಲಿಂಗ ಸಮಾನಾರ್ಥಕವೂ ಇಲ್ಲ; ಅಷ್ಟರ ಮಟ್ಟಿಗೆ ಅದು ಪುರುಷ ಪ್ರಧಾನ!!) ಕೃಷಿಯಲ್ಲಿ ತೊಡಗುವ ತರಬೇತಿ, ಒಳಸುರಿ ಸಹಾಯಗಳ ವ್ಯವಸ್ಥೆ ಇದೆ. ಇವೆಲ್ಲವೂ ಸ್ವಸಹಾಯ ಸಂಘಗಳ ಮಹಾ ಒಕ್ಕೂಟದ ಮೂಲಕವೇ ಗ್ರಾಮಮಟ್ಟಕ್ಕೆ ಇಳಿಯುತ್ತಿದೆ. ಆಯಾಯ ಇಲಾಖೆಯ ಪುಡಿ ದೊಣೆನಾಯಕರು ಗ್ರಾಮಸಭೆಯಲ್ಲಿ ಮಣಮಣ ಒಪ್ಪಿಸಿ ಊರವರೆಲ್ಲಾ ಗೋಣು ಅಲ್ಲಾಡಿಸುವ ವ್ಯವಸ್ಥೆಯಲ್ಲ.
ಇದರಿಂದಾಗಿ ಮಹಿಳಾ ಸಂಘಗಳು ಆರ್ಥಿಕವಾಗಿ ಅರಮನೆ ಕಟ್ಟಿಸಿಕೊಂಡಿಲ್ಲ ನಿಜ. ಆದರೆ ನಮ್ಮ ಗ್ರಾಮದ ಪೋಷಣೆ ನಮ್ಮ ಹೊಣೆ ಎಂಬ ಪ್ರಜ್ಞೆ ಅವರಲ್ಲಿ ಆಳವಾಗಿ ಊರಿದೆ.
ನಮ್ಮ ಪಂಚಾಯತುಗಳಿಗೆ ಈ ಪ್ರಜ್ಞೆ ಬರಬೇಕಿತ್ತು. ಅದಕ್ಕೆ ಯಾವ ಅಧಿಕಾರವನ್ನೂ ನೀಡದೇ, ಹತ್ತು ಇಲಾಖೆಗಳ ಚಿಲ್ಲರೆ ಕಂಟ್ರಾಕ್ಟ್ ಮಟ್ಟಕ್ಕೆ ಅದನ್ನು ಇಳಿಸಿ, ಉದ್ಯೋಗ ಖಾತರಿಯಂಥಾದ್ದನ್ನೂ ಮೈಕ್ರೋ ಭ್ರಷ್ಟಾಚಾರದ ಮೂಲವೆಂದು ತೋರಿಸಿಕೊಟ್ಟು ಪಂಚಾಯತ್‍ಗಳು ಕುಲಗೆಟ್ಟು ಹೋಗಿರುವ ದೃಷ್ಟಾಂತಗಳಿವೆ ಆದ್ದರಿಂದಲೇ ಇಂಥಾ ಸಮಗ್ರ ಹೊಣೆಗಾರಿಕೆ ನೀಡಿ ಅನ್ನುವ ಧೈರ್ಯವೂ ಬರುತ್ತಿಲ್ಲ. ಮಹಿಳಾ ಸಂಘಗಳ ಮಹಾ ಫೆಡರೇಷನ್ ಸ್ಥಾಪಿಸಿ ಅವಕ್ಕೆ ಕೆಲವು ಕ್ಷೇತ್ರಗಳ ನಿಯಂತ್ರಣ ನೀಡುವುದು ಈಗ ಉಳಿದಿರುವ ದಾರಿ. ಆದರೆ ನಮ್ಮ ಸರ್ಕಾರದ ನಡವಳಿಕೆ ನೋಡಿದರೆ ಇದು ಸಾಧ್ಯವಾಗುವುದು ಕಷ್ಟ.
ನಮ್ಮ ವಿಕೇಂದ್ರೀಕರಣದ ಕಲ್ಪನೆಯಲ್ಲಿ ಜಿಲ್ಲಾ ಪಂಚಾಯತುಗಳಿಗೆ ಹಲವಾರು ಇಲಾಖೆಗಳ ನಿಯಂತ್ರಣ ನೀಡಲಾಗಿದೆ. ಆದರೆ ಗ್ರಾಮ ಪಂಚಾಯತುಗಳು ಮಾತ್ರಾ ಈ ಇಲಾಖೆಗಳ ವಿತರಣೆಯನ್ನು ಮಿಕಿಮಿಕಿ ನೋಡುವಷ್ಟರ ಮಟ್ಟಿಗೆ ಇವೆ. ಮಹಿಳಾ ಗ್ರಾಮಸಭೆಯನ್ನೂ ದಾಖಲೆಗಳಲ್ಲೇ ಮಾಡಿಮುಗಿಸಿರುವ ನೂರಾರು ಗ್ರಾಮ ಪಂಚಾಯತುಗಳನ್ನು ನಾನು ಬಲ್ಲೆ. ಹೀಗಿರುವಾಗ ಮಹಿಳಾ ಕೇಂದ್ರಿತ ಸಮಗ್ರ ನಿಯಂತ್ರಣವನ್ನು ನಿರೀಕ್ಷಿಸುವುದಾದರೂ ಹೇಗೆ?
ನಮ್ಮ ಬಡವರ ಆರೋಗ್ಯ, ಅವರ ಮಕ್ಕಳ ಶಿಕ್ಷಣ, ಕುಟುಂಬದ ದುಡಿಮೆ, ಕೃಷಿಯ ಏಗಾಟಗಳೆಲ್ಲಾ ಮಹಿಳೆಯ ಕರುಳಿನೊಂದಿಗೇ ಹೆಣೆದುಕೊಂಡಿವೆ. ಈ ಕುರಿತಾಗಿ ಉತ್ಕಟವಾಗಿ ಮಾತಾಡುವುದು ಈ ಮಹಿಳೆಯರೇ. ಏನಾಗಬೇಕು , ಹೇಗಿರಬೇಕು ಎಂಬ ಸ್ಪಷ್ಠತೆ ಅವರಿಗಿರುವುದನ್ನು ಕಂಡಿದ್ದೇನೆ.
ಆರೇಳು ದೊಡ್ಡ ಬ್ಯಾಂಕುಗಳ ತವರಾಗಿರುವ ಕರ್ನಾಟಕದಲ್ಲೇ ಕಳೆದ ಕೆಲವು ವರ್ಷಗಳಲ್ಲಿ ಕಿರು ಸಾಲ ಕಂಪೆನಿಗಳು ಬೆಳೆದಿರುವ ರೀತಿ ಆಂಧ್ರದ ಅನುಭವಕ್ಕೆ ಹತ್ತಿರವಾಗಿದೆ. ಸರ್ಕಾರದ ಕರ್ತವ್ಯ ಚ್ಯುತಿಯಿಂದಾಗೇ ಇವು ಹಬ್ಬಿಕೊಂಡಿವೆ ಎಂಬುದನ್ನು ನಾವು ಮರೆಯಬಾರದು. ಇವುಗಳ ಬಡ್ಡಿಯ ಹೊಡೆತಕ್ಕೆ ನಮ್ಮ ಸ್ವಸಹಾಯ ಸಂಘಗಳು ತತ್ತರಗೊಳ್ಳುತ್ತಿವೆ. ಈ ಸಾಲವೂ ಕೃಷಿ/ ಹೈನುಗಾರಿಕೆ ಇತ್ಯಾದಿಗೆ ಮಹಿಳೆಯರು ತೆಗೆದುಕೊಳ್ಳುತ್ತಾರೆಂಬುದನ್ನು ಗಮನಿಸಬೇಕು. ನೋಟು ರದ್ಧತಿ ತರುವಾಯ ಈ ಕಿರುಸಾಲ ಕಂಪೆನಿಗಳು ಸಾಲ ವಸೂಲಿಗೆ ಜುಲುಮೆ ಮಾಡಿದ ವರದಿಗಳೂ ಬಂದಿವೆ.. ಈ ಹಿನ್ನೆಲೆಯಲ್ಲೂ ಸರ್ಕಾರ ಸ್ವಸಹಾಯ ಸಂಘಗಳ ಕೇಂದ್ರವಾಗಿಟ್ಟುಕೊಂಡು ಗ್ರಾಮೀಣ ಅಭಿವೃದ್ಧಿ, ಬೇಡಿಕೆ, ಅಗತ್ಯಗಳನ್ನು ಜೋಡಿಸಬೇಕಾದ ತುರ್ತಿದೆ.
ಆದರೆ ಈ ಕಾನೂನು ನಿಯಮಗಳ ಸಿಕ್ಕು ಹೇಗಿದೆಯೆಂದರೆ ಈ ಸಮದಾಯದ ಬೇಕು ಬೇಡಗಳ ಜವಾಬ್ದಾರಿಯನ್ನು ಕಿತ್ತು ಪಡೆಯಲಾಗುವುದಿಲ್ಲ. ಸರ್ಕಾರದೆದುರು ಹೊಸ ನಿಯಮ ಮಾಡಿ, ಕಾನೂನು ಮಾಡಿ ಎಂದು ಗೊಗರೆಯಬೇಕು. ನಮ್ಮ ಮಹಿಳಾ ಅಧಿಕಾರಿಗಳು ತಮ್ಮ ಹುದ್ದೆಯ ಕಾರ್ಯಭಾರ ನಿರ್ವಹಿಸುತ್ತಾರೆಯೇ ವಿನಃ ಲಿಂಗ ಸೂಕ್ಷ್ಮತೆಯ ಅಭಿವೃದ್ಧಿ ಮಾದರಿ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಹಾಗೆ ಕಾಣುವುದಿಲ್ಲ. ಇನ್ನು ನಮ್ಮ ಶಾಸಕರು ವರ್ಷಕ್ಕೆ 60 ದಿನ ಶಾಸನಸಭೆಯಲ್ಲಿ ಇರುವುದಕ್ಕೇ ಮೈಗಳ್ಳತನ ತೋರುವವರು! ಇಂಥಾದ್ದನ್ನು ಮುಂಚೂಣಿಗೆ ತರುವುದು ಹೇಗೆ ಸಾಧ್ಯ?, ನಾಗರಿಕ ಸಮಾಜ, ಸ್ಥಳೀಯ ಹೋರಾಟಗಾರರಷ್ಟೇ ಇದನ್ನು ಚರ್ಚೆಯ ಕೇಂದ್ರವಾಗಿಸಿ ಸರ್ಕಾರವನ್ನು ಒಪ್ಪಿಸಬೇಕಾಗಿದೆ