ವರವರರಾವ್ ಬಿಡುಗಡೆಗೊಳಿಸಿ-ಪತ್ರಿಕಾ ಹೇಳಿಕೆ

[ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿರುವ, ಜನಪರ ಕವಿ ಹೋರಾಟಗಾರ ವರವರರಾವ್ ಬಿಡುಗಡೆಗೊಳಿಸಲು ಆಗ್ರಹಿಸಿ ನಾಡಿನ ಕವಿಗಳು, ಸಾಹಿತಿಗಳು, ಚಿಂತಕರು 18.7.2020ರಂದು  ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ, ಪ್ರಜಾವಾಣಿ, ವಾರ್ತಾಭಾರತಿ  ಮತ್ತಿತರ ಪತ್ರಿಕೆಗಳಲ್ಲಿ. ]

 

 

ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿರುವ, ನಕ್ಸಲ್ ಜತೆ ಸಂಬಂಧ ಹೊಂದಿದ ಆರೋಪ ಹೊತ್ತಿರುವ ಜನಪರ ಕವಿ ಹೋರಾಟಗಾರ ವರವರರಾವ್ ಮುಂಬೈ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಪತ್ರಿಕಾ ವರದಿ ನಮ್ಮನ್ನು ಆತಂಕಕ್ಕೆ ಗುರಿ ಮಾಡಿದೆ.
ಧೀರ್ಘ ಕಾಲದ ಬಂಧನದಲ್ಲಿರುವ ಅವರ ವಿರುದ್ಧ ಪೊಲೀಸರು ಇದುವರೆಗೂ ಚಾರ್ಜ್ ಶೀಟ್ ಹಾಕಿಲ್ಲ. ನ್ಯಾಯಾಂಗ ವಿಚಾರಣೆಯನ್ನೂ ಶುರುಮಾಡಿಲ್ಲ. ಜನಪರ ಹೋರಾಟಗಾರ, ಮಾನವ ಹಕ್ಕುಗಳ ಪ್ರತಿಪಾದಕರನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹೀಗೆ ಬಂಧಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವುದು ಒಳ್ಳೆಯ ಲಕ್ಷಣವಲ್ಲ.
ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕುತ್ತಿಲ್ಲ ಎಂದು ತಿಳಿದು ಆಘಾತ ಆಗಿದೆ. ಅವರ ಅತ್ಯುತ್ತಮ ಚಿಕಿತ್ಸೆಗೆ ಮಹಾರಾಷ್ಟ್ರ ಸರ್ಕಾರ ತಕ್ಷಣ ವ್ಯವಸ್ಥೆ ಮಾಡಬೇಕು. ಅವರ ಆರೋಗ್ಯವನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಬೇಕಾದ್ದು ಸರ್ಕಾರದ ಜವಾಬ್ದಾರಿ ಹಾಗೂ ಕರ್ತವ್ಯ ಆಗಿದ್ದರೂ, ಈ ವಿಚಾರದಲ್ಲಿ ಲೋಪವಾಗಿರುವುದು ಕಳವಳಕಾರಿಯಾಗಿದೆ.
ಜನಪರ ಕಾಳಜಿಗಳ ವರವರರಾವ್ ಮೇಲೆ ಆಪಾದನೆ ಏನೇ ಇರಲಿ ಅದನ್ನು ವಿಚಾರಣೆ ಮಾಡುವ ಬಗ್ಗೆ ನಮ್ಮ ತಕರಾರಿಲ್ಲ. ದೇಶದ ನ್ಯಾಯಾಂಗದ ಮೇಲೆ ನಮಗೆಲ್ಲಾ ಗೌರವ ಇದೆ. ವ್ಯಕ್ತಿಯ ಸೈದ್ಧಾಂತಿಕ ಹಿನ್ನೆಲೆ, ರಾಜಕೀಯ ಬದ್ಧತೆ ಏನೇ ಇದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಚಾರಣಾಧೀನ ಖೈದಿಯೂ ಸೇರಿದಂತೆ ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವುದು ಸರ್ಕಾರದ ಕರ್ತವ್ಯ.
ಆರೋಗ್ಯ ಸುಧಾರಣೆ ಆಗುತ್ತಿದ್ದಂತೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ನಂತರ ಅವರ ವಿಚಾರಣೆಯನ್ನು ಮುಂದುವರಿಸಬಹುದಾಗಿದೆ. ಅವರ ವಯಸ್ಸು, ಆರೋಗ್ಯ ಇವುಗಳ ಹಿನ್ನೆಲೆಯಲ್ಲಿ ತುರ್ತಾಗಿ ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಬೇಕೆಂದು ನಾವು ಆಗ್ರಹ ಪಡಿಸುತ್ತಿದ್ದೇವೆ.
-ಜಿ. ರಾಮಕೃಷ್ಣ,
ಜಿ.ಕೆ. ಗೋವಿಂದರಾವ್,
ದೇವನೂರ ಮಹಾದೇವ,
ಕೆ. ಮರುಳಸಿದ್ದಪ್ಪ,
ಬಾನು ಮುಷ್ತಾಕ್,
ಡಿ.ಎಸ್. ನಾಗಭೂಷಣ,
ರಹಮತ್ ತರೀಕೆರೆ,
ಕೋಡಿಹಳ್ಳಿ ಚಂದ್ರಶೇಖರ,
ಬಂಜಗೆರೆ ಜಯಪ್ರಕಾಶ್,
ಎನ್. ವೆಂಕಟೇಶ,
ಲಕ್ಷ್ಮೀನಾರಾಯಣ ನಾಗವಾರ,
ಮಾವಳ್ಳಿ ಶಂಕರ,
ಕೆ. ಶರೀಫಾ,
ರೂಪ ಹಾಸನ,
ಆರ್.ಜಿ. ಹಳ್ಳಿ ನಾಗರಾಜ,
ರವಿಕುಮಾರ್ ಬಾಗಿ ಮುಂತಾದವರು….