‘ಕುಸುಮಬಾಲೆ’ ಲಯಾಕಾರ ವಿನ್ಯಾಸಕರ ನುಡಿ -ಎಲ್.ಬಸವರಾಜು

ಪ್ರತಿಯನ್ನು ಡೌನ್ಲೋಡ್ ಮಾಡಿ

L Basavaraju.jpg-2

[‘ಕುಸುಮಬಾಲೆ’ ಲಯಾಕಾರ ವಿನ್ಯಾಸಕರಾದ  ಪ್ರೊ. ಎಲ್.ಬಸವರಾಜು ಅವರ ಪ್ರಸ್ತಾವನೆಯ ನುಡಿ ನಮ್ಮ ಮರು ಓದಿಗಾಗಿ… ]

 

ನಾನು, ಕಲ್ಯಾಣ ಬನವಾಸಿ ವಿಜಯನಗರ ಮೇಲುಕೋಟೆ ಶಂಭುಲಿಂಗನ ಬೆಟ್ಟ ಶಿವಮೊಗ್ಗ ಚಿತ್ರದುರ್ಗ ಆಂಧ್ರ ತಮಿಳುನಾಡು ಎಂದು ಮುಂತಾಗಿ ದಕ್ಷಿಣ ಭಾರತದ ಕರ್ಮಭೂಮಿಯನ್ನೆಲ್ಲಾ ಪ್ರವಾಸಮಾಡಿ ಸುಮಾರು 6೦ ವರ್ಷಗಳಾದ ಮೇಲೆ ಮೈಸೂರಿಗೆ ಬಂದುದೇ ಕ್ರಿ. ಶ. 2006ರಲ್ಲಿ- ಕುಸುಮಬಾಲೆ ಓದುತ್ತಾ- ನನ್ನ ಆಧ್ಯಾತ್ಮಿಕ ಸಂಚಾರದಲ್ಲಿ ನಾನು ಆಲಿಸ  ಬೇಕೆಂದಿದ್ದ ಈ ಸೂಕ್ಷ್ಮ ಸಂವೇದನೆಯು ಜನರ ವೇದನೆಯನ್ನು ಕಳೆಯಲು ಸಣ್ಣಗೆ ಹಾಡಿದ ಸಂತೈಕೆಯ ಸ್ವರದ ಸಂಜೀವಿನಿ ಧ್ವನಿಯಂತೆ ಕೇಳಿಸಿತು.

ಎಲ್ಲಿಯೂ ವಾಚ್ಯ ಮಾಡದ ಕುಶಾಲು ಚೇಷ್ಟೆ ವಿಡಂಬನೆಗಳಿಂದಲೆ ಸುತ್ತಿದ ಒಂದು ಕರುಣೆಯ ಕತೆಯನ್ನು ಕಾರುಣ್ಯದಿಂದಲೇ ಹೇಳಿದಂತಿರುವ ಈ ಕುಸುಮಬಾಲೆಯ ಪುಟಗಳನ್ನು ಮರಳಿ ಮೊದಲಿನಿಂದ ತಿರುವಿ ಹಾಕುತ್ತಾ- ಕ್ರಿಸ್ತನು ಸತ್ತ ಮೇಲೆ ಅವನ ಶಿಷ್ಯರು ಬಿಟ್ಟ ನಿಟ್ಟುಸಿರಿನಂತೆಯೆ ಇದಾಗಿದ್ದು- ತನ್ನ ದುಃಖವನ್ನು ರೂಪಾಂತರದಲ್ಲಿ ಕಥೆ ಮಾಡಿ ಹೇಳುತ್ತಲಿರುವಂತೆನಿಸಿತು. ಇದು ಹೊರಗಿನಿಂದ ಹೇಳಿದ ಕೇವಲ ಸಾಹಿತ್ಯವಲ್ಲ, ಒಳಗಿನಿಂದ ಅರಳಿದ ಅನುಭವ ಎಂದು ಸಹೃದಯ ಇದನ್ನು ಒಪ್ಪುವುದರಲ್ಲಿ  ಅತಿಶಯವೇನೂ ಇಲ್ಲ.