ನರಸಿಂಹಮೂರ್ತಿ ಬಂಧನದಲ್ಲಿ ಅನುಮಾನ, ಆತಂಕ, ನಂಬಿಕೆ -ದೇವನೂರ ಮಹಾದೇವ

[ಪತ್ರಕರ್ತ, ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ರಾಯಚೂರಿನ ಪೊಲೀಸರು 24.10.2019ರಂದು ಬಂಧಿಸಿರುವ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು  28.10.2019ರಂದು ಬರೆದಿರುವ ಬರಹ]

                                                             

ಗೆಳೆಯ ನರಸಿಂಹಮೂರ್ತಿ ದೊಡ್ಡಿಪಾಳ್ಯರನ್ನು ರಾಯಚೂರು ಪೊಲೀಸ್, ಎರಡು ದಶಕಗಳ ಹಿಂದೆ ನಡೆದಿತ್ತು ಎನ್ನಲಾದ `ಕ್ರಿಮಿನಲ್ ಪ್ರಕರಣ’ಗಳಲ್ಲಿ ವಿನೋದ್ ಎಂಬ ಹೆಸರಿನಲ್ಲಿ ಭಾಗಿಯಾಗಿದ್ದು ತಲೆ ಮರೆಸಿಕೊಂಡಿದ್ದ ವ್ಯಕ್ತಿಯೇ ನರಸಿಂಹಮೂರ್ತಿ ಎಂದು ಪೊಲೀಸ್ ಸಾಕ್ಷಿ ಆಧರಿಸಿ ಗುಮಾನಿ ಮೇಲೆ ಬಂಧಿಸಲಾಗಿದೆ.

ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದರು ಎನ್ನುವುದೇ ಅನುಮಾನ ಆತಂಕ ಹುಟ್ಟಿಸುವಂತಿದೆ. ಯಾಕೆಂದರೆ ನರಸಿಂಹಮೂರ್ತಿ ಸಾರ್ವಜನಿಕ ವ್ಯಕ್ತಿ. ಪತ್ರಿಕಾ ಕ್ಷೇತ್ರದಲ್ಲಿ ಚಿರಪರಿಚಿತ. ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ. ಪ್ರಗತಿಪರ ಸಂಘಟನೆಗಳ ಸಖ. ದಶಕಗಳಿಂದಲೂ ರಾಯಚೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಸುತ್ತಾಟ ನಡೆಸಿದವರು, ಅವರು ಭಾಗವಹಿಸಿದ ಕಾರ್ಯಕ್ರಮ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 1997 ರಿಂದಲೇ ಬೆಂಗಳೂರು-ಮೈಸೂರು ಕಾರಿಡಾರ್ ವಿರುದ್ಧದ ಹೋರಾಟದಲ್ಲಿ ನರಸಿಂಹಮೂರ್ತಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರೊಡನೆ ಸಕ್ರಿಯವಾಗಿದ್ದನ್ನು ನಾವು ನೋಡಿದ್ದೇವೆ. ಗೌರಿ ಟ್ರಸ್ಟ್ ಗೆ ಎಚ್.ಎಸ್.ದೊರೆಸ್ವಾಮಿಯವರು ಅಧ್ಯಕ್ಷರು, ನರಸಿಂಹಮೂರ್ತಿ ಪ್ರಧಾನ ಕಾರ್ಯದರ್ಶಿ. ದೊರೆಸ್ವಾಮಿಯವರು ಇದ್ದ ಕಡೆ ಬಲಗೈಯಂತೆ ಅವರ ಜೊತೆ ನರಸಿಂಹಮೂರ್ತಿಯವರೂ ಸಾಮಾನ್ಯವಾಗಿ ಇದ್ದೇ ಇರುತ್ತಾರೆ.

ಹೀಗಿರುವಾಗ, ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದರು ಎನ್ನುವುದಾದರೆ ಎಚ್.ಎಸ್.ದೊರೆಸ್ವಾಮಿಯವರೂ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಬೇಕಾಗಿ ಬರುವ ದಯಾನೀಯ ಪರಿಸ್ಥಿತಿಯೂ ನಮಗೆ ಬರಬಹುದೇನೋ. ಇನ್ನೂ ತಮಾಷೆ ಎಂದರೆ, ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಪೊಲೀಸ್ ಕ್ವಾಟ್ರಸ್ ಎದುರೇನೆ ನರಸಿಂಹಮೂರ್ತಿ ಮನೆ. ನರಸಿಂಹಮೂರ್ತಿ ಮನೆ ಗುರುತು ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳನ್ನೆ ಮೂರ್ತಿ ಮನೆ ವಿಳಾಸ ಕೇಳುವ ಪರಿಪಾಠ ಉಂಟು. ಹೀಗಿರುವಾಗ ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದರು ಎಂದು ಹೇಳುವಲ್ಲಿ ಯಾವುದಾದರೂ ಕಾಣದ ಕೈಗಳ ಒತ್ತಡ ಇರಬಹುದೇ? ಈ ಅನುಮಾನ ಆತಂಕ ಕಾಡುತ್ತದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕೆ, ಪತ್ರಿಕಾಕರ್ತರು, ಭಿನ್ನ ಧ್ವನಿಗಳ ಕತ್ತು ಹಿಸುಕಲಾಗುತ್ತಿದೆ.

ಈ ಪ್ರಕರಣ ಸಂಬಂಧಪಟ್ಟಂತೆ, ರಾಯಚೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ವೇದಮೂರ್ತಿಯವರು ಪತ್ರಿಕಾಗೋಷ್ಠಿಯಲ್ಲಿ ಪ್ರಕರಣಗಳ ಬಗ್ಗೆ ನೀಡಿರುವ ವಿವರಗಳನ್ನು ವಿಶೇಷವಾಗಿ ಗಮನಿಸಬೇಕಾಗಿದೆ. ಅವರು ಹೇಳುತ್ತಾರೆ- 1) ಬಡವರಿಗೆ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಏಳೆಂಟು ಜನ ಸಭೆ ನಡೆಸುತ್ತಿದ್ದರು- ಇದೊಂದು ಪ್ರಕರಣ 2) ಬಿಡಿಓ ನೇತೃತ್ವದಲ್ಲಿ ಸಭಾ ಭವನ ಕಟ್ಟುತ್ತಿದ್ದಾಗ ಪಕ್ಕದಲ್ಲಿದ್ದ ಗರೀಬನ ಜೋಪಡಿಗೆ ತೊಂದರೆಯಾಗುತ್ತದೆ ಎಂದು ಒಂದಿಷ್ಟು ಜನ ಮಾರಾಕಾಸ್ತ್ರಗಳೊಡನೆ ಅಡಚಣೆ ಮಾಡಿದರು. 3) ಈ ಪ್ರಕರಣಗಳಲ್ಲಿ ಚಾರ್ಜ್‍ಷೀಟ್‍ ಆಗಿದೆ. ನ್ಯಾಯಾಲಯದಿಂದ ವಾರೆಂಟ್ ಇದೆ. ಈ ವಾರೆಂಟ್ ಮೇರೆಗೆ (ವಿನೋದ್ ಎಂಬ ಹೆಸರಲ್ಲಿ ಪ್ರಕರಣಗಳಲ್ಲಿ ಭಾಗವಹಿಸಿದ್ದ ವ್ಯಕ್ತಿಯೇ ತಲೆ ಮರೆಸಿಕೊಂಡಿದ್ದ ನರಸಿಂಹಮೂರ್ತಿ ಎಂದು’ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ. ಮುಂದಿನದು ನ್ಯಾಯಾಲಯಕ್ಕೆ ಬಿಟ್ಟಿದ್ದು- ಎನ್ನುತ್ತಾರೆ.

ಮೊದಲನೆಯದಾಗಿ ಎಸ್.ಪಿ. ವೇದಮೂರ್ತಿಯವರ ಸರಳ, ನೇರ ಮಾತುಗಳನ್ನು ನಾವು ಗೌರವಿಸಬೇಕು. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಲಯದ ವಾರೆಂಟ್ ಇದೆ. ಆ ಪ್ರಕಾರವಾಗಿ ಕರ್ತವ್ಯ ನಿರ್ವಹಿಸಿದ್ದೇವೆ ಎನ್ನುತ್ತಾರೆ. ಈಗ ಇರುವ ಯಥಾಸ್ಥಿತಿ ಜಡ ಕಾನೂನು ಪ್ರಕಾರ ಅವರು ಕೆಲಸ ಮಾಡಿದ್ದಾರೆ. ಅವರು ಮಾಡಲೇ ಬೇಕಾಗುತ್ತದೆ. ಆದ್ದರಿಂದ ಎತ್ತು ಈಯ್ತು ಎಂದರೆ ಕೊಟ್ಟಿಗೆಗೆ ಕಟ್ಟು ಎಂಬ ಗಾದೆ ಮಾತಿನಂತೆ ಪೊಲೀಸ್ ಬಗ್ಗೆ ಕುರುಡಾಗಿ ಎಗರಾಡುವುದನ್ನು ನಮ್ಮ ಹೋರಾಟದ ಸಂಘಟನೆಗಳ ಗೆಳೆಯರು ಕೈ ಬಿಡುವುದು ಕ್ಷೇಮ.

ಯಾಕೆಂದರೆ, ಇಲ್ಲಿ ನಾವು ಚರ್ಚಿಸಬೇಕಾದ ವಿಚಾರಗಳೇ ಬೇರೆ ಇದೆ. ಬಡವರಿಗೆ ಕೆಲಸ ಮಾಡುತ್ತಿಲ್ಲ ಎಂದು ಚರ್ಚಿಸುವುದೂ ಅಪರಾಧವಾಗುವುದಾದರೆ ಎಲ್ಲಾ ಊರು ನಗರಗಳ ತೊಂಬತ್ತು ಭಾಗವನ್ನು ಜೈಲಾಗಿ ಪರಿವರ್ತಿಸಬೇಕಾಗುತ್ತದಲ್ಲವೆ? ಇನ್ನು ಸಮುದಾಯ ಭವನ ಕಟ್ಟುವುದಕ್ಕೆ ಒಂದಿಷ್ಟು ಜನ ಅಡಚಣೆ ಮಾಡಿದರು ಎಂಬ ಪ್ರಕರಣವನ್ನು ಈಗಾಗಲೇ ನ್ಯಾಯಾಲಯ ವಿಚಾರಣೆ ಮಾಡಿ ಸಾಕ್ಷ್ಯಾ ಇಲ್ಲದೆ ಪ್ರಕರಣವನ್ನು ಖುಲಾಸೆ ಮಾಡಿದೆ. ಏನು ಆರೋಪ ಇತ್ತೋ ಅದೇ ಬಿದ್ದುಹೋಗಿದೆ. ಈ ಸಂಬಂಧ ಬಂಧಿಸಿದ್ದ ಆರೋಪಿಗಳ ಬಿಡುಗಡೆಯೂ ಆಗಿದೆ. ಆರೋಪವೇ ಬಿದ್ದು ಹೋಗಿರುವಾಗ, ಇವರಲ್ಲಿ ಆರೋಪಿತರಾದ ವಿನೋದನೊ ಮತ್ತೊಬ್ಬನೊ ಸಿಕ್ಕರೆಷ್ಟು? ಸಿಗದಿದ್ದರೆಷ್ಟು? ಈ ಪ್ರಕರಣವನ್ನು ಜೀವಂತವಾಗಿರಿಸುವುದೇಕೆ? ಇದು ನಮ್ಮ ಪೊಲೀಸ್ ಮತ್ತು ನ್ಯಾಯಾಲಯದ ಮೇಲೆ ಆಚರಣಾತ್ಮಕ ವೃಥಾ ಹೆಣ ಭಾರವಲ್ಲವೆ?- ಪಿ.ಐ.ಎಲ್. ಮೂಲಕ ಪ್ರಶ್ನಿಸಬೇಕಾಗಿದೆ. ಜೊತೆಗೆ ಇದನ್ನು ಸಾರ್ವಜನಿಕರು, ಸಂಘಟನೆಗಳು, ಪರ್ಯಾಯ ಕಾನೂನು ತಜ್ಞರು ಚರ್ಚಿಸಬೇಕಾಗಿದೆ.

ಯಾರ ಅಪರಾಧವೂ ಕಾನೂನು ಚೌಕಟ್ಟನ್ನು ಮೀರಿದ್ದಲ್ಲ ಎಂಬ ಅರಿವಿನಲ್ಲೆ, ನರಸಿಂಹಮೂರ್ತಿ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಹೊರಬರುತ್ತಾರೆಂಬ ನಂಬಿಕೆ ಇದ್ದರೂ, ಕಾನೂನು ಪ್ರಕ್ರಿಯೆಗಳನ್ನು ವಿಳಂಬಗೊಳಿಸುತ್ತ ‘ವಿಳಂಬ ಹಿಂಸೆ’ ನೀಡಬಹುದೆನ್ನುವ ಆತಂಕವೂ ನನಗಿದೆ. ಈ ರೀತಿಯಾದಲ್ಲಿ ಸ್ವರಾಜ್ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳಾದ ರೈತ ಸಂಘ, ದಲಿತ ಸಂಘಟನೆ, ಮತ್ತಿತರ ಸಮಾಜಮುಖಿ ಸಂಘಟನೆಗಳ ಜೊತೆಗೂಡಿ ಬರ, ನೆರೆ, ಉದ್ಯೋಗ ಕುಸಿತ ಇವುಗಳನ್ನೆಲ್ಲ ಸಮ್ಮಿಲನಗೊಳಿಸಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ.