ಕಂಬಳ : ಆಟ ಇರಲಿ; ಆಚರಣೆ ಬೇಡ– ದೇವನೂರ ಮಹಾದೇವ

[ಕಂಬಳ’ ಕ್ರೀಡೆ ಕುರಿತು ಪರ -ವಿರೋಧ ಚರ್ಚೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ವಿವಿಧ ಪತ್ರಿಕೆಗಳಿಗೆ 27.1.2017ರಂದು ಬರೆದ ಪತ್ರದ ಪರಿಷ್ಕೃತ ರೂಪ.]

kambala image
ತಮಿಳುನಾಡಿನ ಜಲ್ಲಿಕಟ್ಟಿಗೆ ಅನುಮತಿ ಸಿಕ್ಕಿದ ಮೇಲೆ ಕರ್ನಾಟಕದಲ್ಲಿ ‘ಕಂಬಳ ’ದ ಆಚರಣೆಗಾಗಿ ಒತ್ತಾಯ ಭುಗಿಲೆದ್ದಿದೆ. ಕಂಬಳವು ಜಲ್ಲಿಕಟ್ಟಿನಷ್ಟು ಪ್ರಾಣಾಂತಿಕವಾಗಿಲ್ಲ. ಆದರೆ, ಕಂಬಳ ಆಟ ಮಾತ್ರವಲ್ಲ , ಈ ಆಟದೊಳಗೆ ಅನಿಷ್ಠ ಆಚರಣೆಯೊಂದು ಅಡಗಿ ಕೂತಿದೆ. ಅದೆಂದರೆ, ಕೊರಗ ಸಮುದಾಯವನ್ನು ಬಳಸಿಕೊಂಡು ಜರುಗುವ ‘ಪನಿಕುಲ್ಲನೆ’ ಆಚರಣೆ. ಅಂದರೆ, ಕಂಬಳ ನಡೆಯುವ ಹಿಂದಿನ ದಿನದ ಇಡೀ ರಾತ್ರಿ ಕೊರಗ ಸಮುದಾಯದವರು ಡೋಲು ಬಾರಿಸುತ್ತ ಕುಣಿಯುವ ಈ ಆಚರಣೆಯು ಲೈಂಗಿಕ ಚೇಷ್ಟೆಗಳನ್ನು ಒಳಗೊಂಡಿದ್ದು, ಬೆಳಗಾಗುವಾಗ ಕೊರಗ ಸಮುದಾಯದವರು ತಾವೇ ಕೋಣಗಳು ಎಂದು ಆವಾಹಿಸಿಕೊಂಡು ಕಂಬಳದ ಕೆಸರು ಗದ್ದೆಯಲ್ಲಿ ಓಡುತ್ತಾರೆ. ನಡೆಯುತ್ತದೆ, ಈ ಮನುಷ್ಯರ ಕೆಸರು ಗದ್ದೆ ಓಟ ಕೋಣಗಳ ಓಟಕ್ಕೆ ಪೂರ್ವಭಾವಿಯಾಗಿ!

“ಕೊರಗರು ಕೋಣಗಳಾಗಿ ಗದ್ದೆಯಲ್ಲಿ ಓಡುವುದರ ಮೂಲಕ ಗದ್ದೆಯನ್ನು ಕೆಟ್ಟಕಣ್ಣಿನಿಂದ ಮುಕ್ತಗೊಳಿಸುತ್ತಾರೆ. ಗದ್ದೆಯನ್ನು ಹೀಗೆ ಮುಕ್ತಗೊಳಿಸಿದ ಅನಂತರವೇ ಭೂಮಾಲಿಕರ ಕೋಣಗಳು ಕಂಬಳದ ಗದ್ದೆಗೆ ಇಳಿಯುತ್ತವೆ” (ಕರಾವಳಿ ಜಾನಪದ. ಪುರುಷೋತ್ತಮ ಬಿಳಿಮಲೆ. ಪುಟ 46). ಅಂದರೆ, ಇದು ಅನಿಷ್ಠ, ಕೆಡಕನ್ನು ಕೊರಗರ ಮೇಲೆ ಆವಾಹಿಸುವ ಅಜಲು ಪದ್ಧತಿಯ ಎಂಜಲು ಆಚರಣೆ. ಹಾಗೆ ಕಂಬಳದ ಹಿಂದಿನ ರಾತ್ರಿ ಜರುಗುವ ಲೈಂಗಿಕ ಚೇಷ್ಠೆ ಕ್ರಿಯೆಗಳನ್ನು ಫಲವಂತಿಕೆಗಾಗಿ ಅನ್ನುವುದಾದರೆ ಕಂಬಳದ ಸಿರಿವಂತಿಕೆಯನ್ನು ಪ್ರದರ್ಶಿಸುವ ಫಲಾನುಭವಿಗಳಾದ ಭೂಮಾಲಿಕ ಕುಟುಂಬದ ಸ್ತ್ರೀ ಪುರುಷರು ಇದನ್ನು ಆಚರಿಸಬಾರದೇಕೆ? ಕೊರಗ ಸಮುದಾಯಕ್ಕೆ ಸೇರದೆ ಇರುವವರು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ಒಟ್ಟಿನಲ್ಲಿ, ಅಜಲು ಪದ್ಧತಿಯ ಎಂಜಲಾದ ‘ಪನಿಕುಲ್ಲನೆ’ ಆಚರಣೆಯನ್ನು ಕೈಬಿಟ್ಟು ಕಂಬಳವನ್ನು ಒಂದು ಆಟವಾಗಿ ಉಳಿಸಿಕೊಳ್ಳಬಹುದೇನೊ. ಇದಕ್ಕೆ ಮೊದಲು ಸರ್ಕಾರ ಅನಿಷ್ಠ ಅಜಲು ಪದ್ಧತಿಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದು ತನ್ನ ಮಾನಮರ್ಯಾದೆ ಕಾಪಾಡಿಕೊಳ್ಳಬೇಕಾಗಿದೆ.[ ತಿದ್ದುಪಡಿ: ಅಜಲು ಪದ್ಧತಿ ನಿಷೇಧದ ಕಾಯ್ದೆ ಇದೆ, ಆದರೆ ಕದ್ದುಮುಚ್ಚಿ ಆಚರಣೆಗಳು ನಡೆಯುತ್ತಿವೆ ಎಂಬ ವದಂತಿ ಇದೆ.] ಈ ಉದ್ರೇಕದ ಗದ್ದಲದ ಸಂದರ್ಭದಲ್ಲಿ – ‘ ಇಂಥದ್ದಕ್ಕೆಲ್ಲ ಹೋರಾಡುವ ಬದಲು ಮರಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಉಳಿಸಿಕೊಳ್ಳೋಣ’ ಎಂದು ವಿವೇಕ ವಿವೇಚನೆಗಳೊಡನೆ ನಾಡಿನ ಯಜಮಾನನಾಗಿ ಕರೆ ನೀಡಿದ ಶ್ರೀ ಹಂಸಲೇಖ ಅವರನ್ನು ಕೃತಜ್ಞತೆಯಿಂದ ನೆನೆಸಿಕೊಳ್ಳಬೇಕಾಗಿದೆ.